ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಬೇಡವೇ?
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸ್ಥಗಿತಗೊಳ್ಳಲು ಮೈಮುಲ್ ಮಾಜಿ ಅಧ್ಯಕ್ಷ ಈರೇಗೌಡ ಕಾರಣ ಎಂದು ಸಂಘದ ಮಾಜಿ ಕಾರ್ಯದರ್ಶಿ ಜಯಲಕ್ಷ್ಮಿ ಆರೋಪ ಮಾಡಿದ್ದಾರೆ.
ಸ್ಥಗಿತಗೊಂಡಿರುವ ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಮುಂದುವರಿಯಬೇಕಾ, ಬೇಡವಾ ಎಂಬುದರ ಕುರಿತು ಚರ್ಚಿಸಲು ಬುಧವಾರ ತಾಲೂಕಿನ ಹೆಬ್ಬಲಗುಪ್ಪೆಯಲ್ಲಿ ಸಭೆ ಕರೆಯಲಾಗಿತ್ತು. ಸಿಡಿಒ ರೇಣುಕಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರ, ವಿರೋಧ ಚರ್ಚೆಯಾಯಿತು. ಒಮ್ಮತ ಅಭಿಪ್ರಾಯ ವ್ಯಕ್ತವಾಗದ ಹಿನ್ನೆಲೆ ಸಹಿ ಸಂಗ್ರಹಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲು ಸಭೆಯಲ್ಲಿ ರೇಣುಕಾ ಅವರು ನಿರ್ಧಾರ ಕೈಗೊಂಡರು.
ಈ ವೇಳೆ ಮಾತನಾಡಿದ ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಜಯಲಕ್ಷ್ಮಿ ಅವರು, 3-11-2008 ರಂದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನೋಂದಣಿಯಾಗಿದ್ದು, ಸುಮಾರು 16 ವರ್ಷಗಳ ಕಾಲ ಕಾನೂನುತ್ಮಾಕವಾಗಿ ನಡೆಸಿಕೊಂಡು ಬಂದೆ. ಯಾವುದೇ ತೊಂದರೆಯಿಲ್ಲದೆ ರೈತರ ಮೆಚ್ಚುಗೆ ಪಡೆದು ಸಂಘ ಸಬಲರಾಗುತ್ತಿದ್ದನ್ನು ಸಹಿಸಲಾರದೆ ಗ್ರಾಮದ ಕೆಲವರು ಕುತಂತ್ರ ನಡೆಸಿ ಡೈರಿಗೆ ಹಾಲು ಪೂರೈಕೆಯಾಗದಂತೆ ನೋಡಿಕೊಳ್ಳುತ್ತಾರೆ. ಮಹಿಳಾ ಸಹಕಾರ ಸಂಘಕ್ಕೆ ಹಾಲು ಪೂರೈಕೆಯಾಗುತ್ತಿರುವ ನಡುವೆಯೇ ಖಾಸಗಿ ಡೈರಿ ಆರಂಭ ಮಾಡುತ್ತಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಹಾಲು ಪೂರೈಕೆಯಾಗದಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಾರೆ. ಹೀಗಾಗಿ ಜೂನ್ 2023 ರಂದು ಮೈಮುಲ್ ನಿಂದ ಸಂಘಕ್ಕೆ ತಡೆ ತರುತ್ತಾರೆ. 2024ರಲ್ಲಿ ಮತ್ತೆ ರೈತರು ನನ್ನ ಬಳಿ ಬಂದು ಖಾಸಗಿ ಡೈರಿಯಲ್ಲಿ ಬೋನಸ್ ಸೇರಿದಂತೆ ಯಾವುದೇ ಸವಲತ್ತು ಸಿಗುತ್ತಿಲ್ಲ. ಹೀಗಾಗಿ ಮತ್ತೆ ಮಹಿಳಾ ಸಹಕಾರ ಸಂಘ ಡೈರಿ ಮುಂದುವರೆಸುವಂತೆ ನನಗೆ ಮನವಿ ಮಾಡುತ್ತಾರೆ. 2024ರಲ್ಲಿ ಮಹಿಳಾ ಸಹಕಾರ ಸಂಘ ಪುನಶ್ಚೇತನ ಮಾಡಿಕೊಂಡುವಂತೆ ಹುಣಸೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಮಾಡಿದ್ದೆ. ಆದರೆ ಇದಕ್ಕೂ ಈರೇಗೌಡ ಹಾಗೂ ಅವರ ಬೆಂಬಲಿಗರು ತಕರಾರು ಅರ್ಜಿ ಸಲ್ಲಿಸುತ್ತಾರೆ. ಈ ವಿಷಯ ಗೊತ್ತಾದ ಮೇಲೆ 11-09-2025 ರಂದು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ. ತದನಂತರ ಪುನಶ್ಚೇತನ ಸಂಬಂಧ ಸಭೆ ಕರೆದಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಹ್ಯಾಂಡ್ ಪೋಸ್ಟ್ ಹಾಲು ಶಿಥಿಲೀಕರಣ ಘಟಕದ ಮೇಲ್ವಿಚಾರಕಿ ತೆಹರಾ ಘರಾಗ್, ಚಿಕ್ಕತಾಯಮ್ಮ, ಪಾರ್ವತಮ್ಮ, ಮಾಯಮ್ಮ, ಭಾಗ್ಯ, ಕಮಲಮ್ಮ, ಆಲಮ್ಮ, ಅನುಸೂಯ, ಗೋಪಮ್ಮ, ರಾಜಮ್ಮ, ಜಯಮ್ಮ, ಚಿನ್ನಮ್ಮ, ಪುಟ್ಟಮ್ಮ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
“ಹೆಬ್ಬಲಗುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಪುನಶ್ಚೇತನ ಸಂಬಂಧ ಸಭೆ ಕರೆಯಲಾಗಿತ್ತು. ಆದರೆ ಒಮ್ಮತದ ನಿರ್ಧಾರ ವ್ಯಕ್ತವಾಗದ ಹಿನ್ನೆಲೆ ಮಹಿಳಾ ಸಹಕಾರ ಸಂಘ ಬೇಕಾ ಅಥವಾ ಖಾಸಗಿ ಸಹಕಾರ ಸಂಘ ಬೇಕಾ ಎಂಬುದರ ಬಗ್ಗೆ ಸಹಿ ಸಂಗ್ರಹಿಸಲಾಗಿದ್ದು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.”
– ರೇಣುಕಾ, ಸಿಡಿಒ

