ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಈ ಹಿಂದೆ ನಾವು ಚಿಕ್ಕವರಿದ್ದಾಗ ಹಬ್ಬ ಹರಿದಿನಗಳಲ್ಲಿ ಮನೆಗೆ ಹತ್ತಿರವಿರುವ ಮಾವಿನ ಗಿಡ ಹತ್ತಿ ಮಾವಿನ ಎಲೆಗಳನ್ನು ಪೂಜೆಗೆ, ತಳಿರು ತೋರಣಕ್ಕೆ ಹರಿದು ತರುತ್ತಿದ್ದೆವು. ಯುಗಾದಿ ಬಂದಾಗ ಬೇವಿನ ಸೊಪ್ಪು ತರಲು, ದಸರೆಯಲ್ಲಿ ಬನ್ನಿಯ ತಪ್ಪಲನ್ನು ತರಲು, ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಕೆರೆಯ ದಡದ ಮಣ್ಣನ್ನು ತಂದು ಹದವಾಗಿ ಜಜ್ಜಿ ಮಣ್ಣಿನ ಎತ್ತುಗಳನ್ನು ಮಾಡಿ ಪೂಜೆ ಮಾಡಲು ಮನೆಯಲ್ಲಿ ಹಿರಿಯರಿಗೆ ಕೊಡುವ ಮತ್ತು ಹಳ್ಳಿಗಳಲ್ಲಾದರೆ ಎಲ್ಲ ರೀತಿಯ ಹಬ್ಬಗಳಲ್ಲಿ ಮನೆಯಲ್ಲಿ ಸಾಕಿರುವ ದನ ಕರುಗಳನ್ನು ಹತ್ತಿರದ ಹಳ್ಳ,ಹೊಳೆಗಳಿಗೆ ಕರೆದೊಯ್ದು ಮೈ ತೊಳೆಯಲು, ಮಳೆಗಾಲದಲ್ಲಿ ಗುಡ್ಡದ ಮೇಲಿರುವ ದೇವಸ್ಥಾನಗಳನ್ನು ಹತ್ತಿ ದೈವ ದರ್ಶನ ಮಾಡಿ ಕಾಯಿ ಒಡೆಸಿ ತೀರ್ಥ ಪ್ರಸಾದವನ್ನು ಮನೆಗೆ ತರುತ್ತಿದ್ದೆವು. ದೀಪಾವಳಿ ಹಬ್ಬದಲ್ಲಿ ಪಾಂಡವರನ್ನು ಇಡಲು ಬೇಕಾದ ಸಗಣಿ, ಉತ್ತರಾಣಿ ಕಡ್ಡಿ ಮತ್ತು ಗೌರಿ ಹೂಗಳನ್ನು ಆರಿಸಿ ತರಲು ಊರ ಹೊರಗಿನ ಬಯಲಲ್ಲಿ ಓಡಾಡುತ್ತಿದ್ದೆವು. ಇವೆಲ್ಲ ನಮ್ಮ ಬಾಲ್ಯಕಾಲದ ದೈಹಿಕವಾಗಿ ಮಾಡುವ ಸಾಹಸ ಪ್ರವೃತ್ತಿಗಳಾಗಿದ್ದವು.

ಇನ್ನು ಶಾಲೆಗಳಲ್ಲಿ ಶಿಕ್ಷಕರು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿದಾಗ ಭಾಷಣ ಮಾಡಲು, ಹಾಡು ಹಾಡಲು, ಏಕಪಾತ್ರಾಭಿನಯ ಮಾಡಲು ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಘೋಷಿಸಿದಾಗ ನಾನೂ ಈ ಚಟುವಟಿಕೆಯನ್ನು ಮಾಡುತ್ತೇನೆ ಎಂದು ಹೆಸರು ಕೊಟ್ಟು ಅದಕ್ಕೆ ತಯಾರಾಗುವುದು ಮಾನಸಿಕ ಸಾಹಸ ಪ್ರವೃತ್ತಿ.
ಆದರೆ ಇಂದಿನ ಮಕ್ಕಳು ಮನೆಯ ನಾಲ್ಕು ಗೋಡೆಗಳ ನಡುವೆ ಕುಳಿತು ಮೊಬೈಲ್ ನ ದಾಸರಾಗಿದ್ದಾರೆ. ಸಂವಹನ ಕೌಶಲ್ಯವನ್ನು ಕಳೆದುಕೊಂಡಿದ್ದಾರೆ. ತಂದೆ ತಾಯಿ ಮತ್ತು ತಮ್ಮ ವಿನಹ ಬೇರೆಯವರ ಜೊತೆಗಿನ ಮಾತು ಕಥೆಗಳು ಕೂಡ ಕಡಿಮೆಯಾಗಿವೆ.. ಇದಕ್ಕೆಲ್ಲಾ ಕಾರಣ ಅವರ ಕೈಯಲ್ಲಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು.
ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಲ್ಲಿ ಸಾಹಸ ಪ್ರವೃತ್ತಿಯನ್ನು ಮತ್ತೆ ಹುಟ್ಟು ಹಾಕಬೇಕಾಗಿದೆ.. ಜಂಗಮವಾಣಿಯಿಂದ ದೂರವಾಗಿ ವರ್ತಮಾನದಲ್ಲಿ ನಡೆಯುತ್ತಿರುವ ವಿವಿಧ ವಿಷಯಗಳು ಕೌತುಕತೆಯನ್ನು ಅರಿಯುವ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ನಾವು ತೊಡಗಿಸಬೇಕಾಗಿದೆ.
ಮಕ್ಕಳನ್ನು ವಿವಿಧ ರೀತಿಯ ನಾಟಕ, ಬಯಲಾಟ, ನೃತ್ಯ, ಯೋಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಕ್ರಿಯಾಶೀಲರನ್ನಾಗಿಸಬೇಕು. ಉದಾಹರಣೆಗೆ ಬಯಲಾಟವನ್ನೇ ತೆಗೆದುಕೊಂಡರೆ ಮಕ್ಕಳಲ್ಲಿ ಹಾವಭಾವ, ಭಂಗಿ, ನವರಸಗಳ ಪರಿಚಯ ಧ್ವನಿಯ ಏರಿಳಿತಗಳು ನಟನೆ ಹೀಗೆ ಹತ್ತು ಹಲವು ವಿಷಯಗಳನ್ನು ಮಕ್ಕಳು ಕಲಿಯುತ್ತಾರೆ. ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ.
ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಎಲ್ಲ ರೀತಿಯ ಕ್ರಿಯಾ ಚಟುವಟಿಕೆಗಳು ಅತ್ಯವಶ್ಯಕ. ಪರಿಸರದ ಆಕಸ್ಮಿಕಗಳ ಅರಿವಿಲ್ಲದೆ ಮಕ್ಕಳಲ್ಲಿ ಈ ರೀತಿಯ ಕ್ರಿಯಾ ಚಟುವಟಿಕೆಗಳು ಬೆಳೆದಾಗ ಮಕ್ಕಳು ಅನ್ವೇಷಣಾ ಮನೋಭಾವವನ್ನು ಹೊಂದುತ್ತವೆ.
ಕೇವಲ 20 ವರ್ಷಗಳ ಹಿಂದೆ ತೋಟದ ಬಾವಿಗಳಲ್ಲಿ ಈಜುವ, ಊರ ಹೊರಗಿನ ತೋಪುಗಳಲ್ಲಿ ಮಾವಿನಕಾಯಿಗಳನ್ನು,ಹುಣಸೆ ಕಾಯಿ ಕೀಳುವ ಸಾಹಸ ಪ್ರವೃತ್ತಿ ಮಕ್ಕಳಲ್ಲಿ ಇತ್ತು. ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರೂ ಪಂಚಮಿ ಹಬ್ಬದಲ್ಲಿ ಬೃಹತ್ತಾದ ಆಲದ ಮತ್ತು ಬೇವಿನ ಮರಗಳಿಗೆ ಕಟ್ಟುತ್ತಿದ್ದ ಜೋಕಾಲಿಗಳಲ್ಲಿ ಸ್ಪರ್ಧೆಯ ಮೇಲೆ ಜೀಕುತ್ತಿದ್ದರು. ಜೋಕಾಲಿಯ ಅತ್ಯಂತ ಮೇಲ್ಭಾಗದಲ್ಲಿ ಕೊಬ್ಬರಿ ಗಿಟುಕನ್ನು ಇಲ್ಲವೇ ಉಂಡಿ ಇಲ್ಲವೇ ನೂರು ರೂಪಾಯಿಯ ನೋಟನ್ನು ಕಟ್ಟಿ ಜೀಕುತ್ತಲೇ ಅದನ್ನು ಬಾಯಿಂದ ಕಚ್ಚಿ ಹಿಡಿದು ತರುವವರಿಗೆ ಬಹುಮಾನವಾಗಿ ಅದನ್ನು ನೀಡಲಾಗುತ್ತಿತ್ತು. ಈ ರೀತಿಯ ಸಾಹಸಮಯ ಪ್ರವೃತ್ತಿಯನ್ನು ಎಲ್ಲಾ ಹಿರಿಯರ ಸಮ್ಮುಖದಲ್ಲಿ ಮಕ್ಕಳು ಕೂಡ ಪ್ರದರ್ಶಿಸುತ್ತಿದ್ದರು.

ಅತ್ಯಂತ ಸಂಕುಚಿತ ಸ್ಥಿತಿಯಲ್ಲಿ ಇಂದಿನ ಮಕ್ಕಳು ಬೆಳೆಯುತ್ತಿದ್ದಾರೆ. ದೈನಂದಿನ ನಿತ್ಯವಿಧಿಗಳನ್ನು ಪೂರೈಸಿ ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಬಿಟ್ಟು ಬರುವ ಪಾಲಕರು ಕೇವಲ ಮಕ್ಕಳ ಓದಿನೆಡೆಗೆ ಮಾತ್ರ ಆಸಕ್ತಿಯನ್ನು ತೋರುತ್ತಾರೆ ಮಕ್ಕಳು ಒಳ್ಳೆಯ ಓದನ್ನು ಕಲಿತು ಉತ್ತಮ ನೌಕರಿಗೆ ಸೇರಿದರೆ ಅವರ ಬದುಕು ಸಾರ್ಥಕ ಎಂಬ ಭಾವ ನಮ್ಮ ಇಂದಿನ ಜನಾಂಗದ ಪಾಲಕರಲ್ಲಿದೆ ಆದರೆ ಒಳ್ಳೆಯ ನೌಕರಿ ಏನೋ ಸರಿ? ಸಂಶೋಧನೆಗೆ ಎಲ್ಲಿದೆ ಅವಕಾಶ! ಸಂಶೋಧನೆಗೆ ಬೇಕಾಗಿರುವುದು ಅನ್ವೇಷಣೆಯ ಮನೋಭಾವ ಮತ್ತು ಸಾಹಸ ಪ್ರವೃತ್ತಿ. ನೈಸರ್ಗಿಕವಾಗಿ ನಮಗೆ ದೊರೆಯುವ ಸಾಹಸ ಪ್ರವೃತ್ತಿಯ ಕೆಲಸಗಳನ್ನು ಬಿಟ್ಟಿರುವ ನಾವುಗಳು ವರ್ಷದ ಯಾವುದೋ ಒಂದೆರಡು ದಿನ ಅಡ್ವೆಂಚರ್ ಪಾರ್ಕ್ ಗಳಿಗೋ ಜಂಗಲ್ ಸಫಾರಿಗೋ ಹೋಗಿ ಹೀಗೂ ಒಂದು ರೀತಿಯ ಪ್ರಪಂಚ ಇರುತ್ತದೆ ಎಂದು ನಮ್ಮ ಮಕ್ಕಳಿಗೆ ಅರಿವು ಮೂಡಿಸುತ್ತೇವೆಯೇ ಹೊರತು ನಮ್ಮ ಗ್ರಾಮೀಣ ಭಾಗದ ಪರಿಸರದ ಪರಿಚಯವನ್ನು ಮಾಡಿಕೊಡುವುದಿಲ್ಲ. ನಮ್ಮ ನಿಸರ್ಗದಲ್ಲಿ ಇರುವ ಕೌತುಕಗಳನ್ನು ನಾವು ಅನ್ವೇಷಿಸುವ ಪ್ರವೃತ್ತಿಯನ್ನು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಬೆಳೆಸಿದರೆ ಮಕ್ಕಳು ಗೋಧಿಹಿಟ್ಟು ಎಲ್ಲಿಂದ ಬರುತ್ತದೆ ಎಂದರೆ ಅಂಗಡಿಯಿಂದ ಎಂದು ಹೇಳುವುದು ತಪ್ಪುತ್ತಿತ್ತು ಅಲ್ಲವೇ?
ಚಾರಣ, ಟ್ರಕಿಂಗ್ ಮುಂತಾದ ಹೆಸರಿನಲ್ಲಿ ನಡೆಯುತ್ತಿರುವ ಸಾಹಸಯಾತ್ರೆಗಳಲ್ಲಿ ಕೂಡ ಯಾವುದೇ ರೀತಿಯ ತೊಂದರೆ,ಎಡರು ತೊಡರುಗಳು, ಆಕಸ್ಮಿಕಗಳು ಬರುವುದಿಲ್ಲ ಎಂದಲ್ಲ, ಆದರೆ ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಾಹಸಯಾತ್ರೆಯನ್ನು ಕೈಗೊಳ್ಳುವ ಮೂಲಕ ಮಾನಸಿಕ ಸಂತೃಪ್ತಿ ಮತ್ತು ಅನುಭವಗಳನ್ನು ಪಡೆಯಬಹುದು. ಅನುಭವಗಳ ಬುತ್ತಿಯನ್ನು ಅದೆಷ್ಟೇ ದುಡ್ಡು ಕೊಟ್ಟರೂ ಕೊಂಡುಕೊಳ್ಳಲು ಸಾಧ್ಯವಾಗದು. ಅನುಭವಿಸಿಯೇ ಅನುಭವದ ಬುತ್ತಿಯನ್ನು ಹೊಂದಬೇಕು.
ಮತ್ತೆ ಕೆಲ ಪಾಲಕರು ತಾವು ಚಿಕ್ಕವರಿದ್ದಾಗ ಮಾಡಿದ ಸಾಹಸಗಳನ್ನು ಇಂದು ತಮ್ಮ ಮಕ್ಕಳು ಮಾಡುವಾಗ ಭಯಗ್ರಸ್ತರಾಗುತ್ತಾರೆ ಇದು ಖಂಡಿತ ತಪ್ಪು ಈ ಹಿಂದೆ ಪಾಲಕರು ಮಾಡಿದ್ದನ್ನೇ ಮಕ್ಕಳು ಮಾಡುತ್ತಿದ್ದಾರಷ್ಟೇ ಎಂದು ಅವರಿಗೆ ಪ್ರೋತ್ಸಾಹ ಭರವಸೆಗಳನ್ನು ಪಾಲಕರು ನೀಡಬೇಕು. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ಆ ದಿಕ್ಕಿನಲ್ಲಿ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು.
ದೊಡ್ಡ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗುವವರು ಕೇವಲ ಜಾಣ್ಮೆಯನ್ನು ಮಾತ್ರ ಹೊಂದಿರದೆ ಸಾಹಸಮಯ ಪ್ರವೃತ್ತಿ ಮತ್ತು ಅನ್ವೇಷಣಾ ಮನೋಭಾವವನ್ನು ಹೊಂದಿರುತ್ತಾರೆ.
ಅತ್ಯಂತ ಚಿಕ್ಕ ವಯಸ್ಸಿನ ಐಟಿಐ ನಂತಹ ವೃತ್ತಿಪರ ಶಿಕ್ಷಣ ತರಬೇತಿಗಳನ್ನು ಪಡೆದಿರುವ ಮಕ್ಕಳು ಎಂತದ್ದೇ ಪರಿಸ್ಥಿತಿಯಲ್ಲಿಯೂ ತಾವು ಬದುಕನ್ನು ನಡೆಸಲು ಸಿದ್ಧ ಎಂಬ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.
ದೂರದ ಚೀನಾ ಮತ್ತು ಜಪಾನ್ ಗಳಲ್ಲಿ ಮಕ್ಕಳಿಗೆ ಕೊಡುವ ತರಬೇತಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಜನರಿಗೆ ಹಂಚಿಕೊಳ್ಳುವ ನಾವುಗಳು ನಮ್ಮ ಮಕ್ಕಳನ್ನು ಆ ರೀತಿ ಬೆಳೆಸುವಲ್ಲಿ ಹಿಂದೇಟು ಹಾಕುತ್ತೇವೆ. ಬದಲಾಗಿ ಪಾಲಕರು ಮತ್ತು ಮಕ್ಕಳು ಒಟ್ಟಾಗಿ ಬಯಸುವಂತಹ ಒಂದು ಉತ್ತಮ ಸಾಹಸಮಯ ಬದುಕನ್ನು ಮಕ್ಕಳಿಗೆ ಕಲ್ಪಿಸಿ ಕೊಡುವಲ್ಲಿ ಪಾಲಕರು ಮುಂದಾಗಲೇಬೇಕು.
ಮಕ್ಕಳು ಬೇಸಿಗೆಯ ಬಿಸಿ, ಮಳೆಗಾಲದ ಮಳೆ ಮತ್ತು ಚಳಿಗಾಲದ ಚಳಿಯನ್ನು ತಡೆದುಕೊಂಡು ಮೈದಾನಗಳಲ್ಲಿ ಆಡುವ, ರಂಗ ಸಜ್ಜಿಕೆಗಳಲ್ಲಿ ಹಾಡುವ ನಾಟಕ ಮಾಡುವ ಅಭಿನಯಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಹೊರ ಹಾಕಬೇಕು. ಈ ನಿಟ್ಟಿನಲ್ಲಿ ಪಾಲಕರ ಪ್ರೋತ್ಸಾಹ ಬೆಂಬಲಗಳು ಮಕ್ಕಳಿಗೆ ದೊರೆಯಲಿ..


