ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹ.ಮ ಪೂಜಾರ ತಮ್ಮ ಶಿಕ್ಷಕ ವೃತಿಯ ಜೊತೆಗೆ ಶಿಶು ಸಾಹಿತ್ಯ ರಚಿಸಿ ಮಕ್ಕಳಿಗೆ ನ್ಯಾಯ, ನೀತಿ, ಸ್ನೇಹ, ಪ್ರೀತಿ ಒಳಗೊಂಡ ಮಾನವೀಯ ಮೌಲ್ಯಾಧಾರಿತ ಬದುಕು ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.
ಪಟ್ಟಣದ ಹೊರ ವಲಯದ ಎಲೈಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲದಲ್ಲಿ
ನಬಿರೋಶನ್ ಪ್ರಕಾಶನ, ಬೋರಗಿ ಎಲೈಟ್ ಶಿಕ್ಷಣ ಸಂಸ್ಥೆ ವತಿಯಿಂದ ಹ.ಮ ಪೂಜಾರರಿಗೆ ಅಭಿನಂದನಾ ಸಮಾರಂಭ ಹಾಗೂ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ ಪೂಜಾರರು ಕವನ, ಕಥೆ, ಕಾದಂಬರಿ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿಯ ಮೂಲಕ ತಮ್ಮ ಜೀವನದುದ್ದಕ್ಕೂ ಮಕ್ಕಳ ಸಾಹಿತ್ಯಾಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ಇವರ ಸಾಹಿತ್ಯ ಸೇವೆ ಗುರುತಿಸಿ 2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ನಾವೇ ಪ್ರಶಸ್ತಿಗೆ ದುಂಬಾಲು ಬದಲು, ಪ್ರಶಸ್ತಿಯೇ ನಮ್ಮ ಹುಡುಕಿಕೊಂಡು ಬರಬೇಕು ಅದು ನಿಜವಾದ ಸಾಧನೆ ಎಂದರು..
ಚಾಣಕ್ಯ ಕೆರಿಯರ್ ಅಕಾಡೆಮಿಯ ಎನ್.ಎಂ ಬಿರಾದಾರ ಮಾತನಾಡಿ, ಹ.ಮ ಪೂಜಾರರು ಮಕ್ಕಳ ಸಾಹಿತ್ಯದ ಗಟ್ಟಿ ಧ್ವನಿ, ಇವರ ಅನೇಕ ಕವಿತೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯ ಪುಸ್ತಕದ ವಿಷಯಗಳಾಗಿವೆ ಎಂದರು.
ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಹ.ಮ ಪೂಜಾರ, ಮಕ್ಕಳ ಸಾಹಿತ್ಯ ಸೇವೆ ಸಾರ್ಥಕ ಭಾವ ಮೂಡಿಸಿದೆ. ಇಡೀ ಸಿಂದಗಿಯ ಜನತೆ ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದನ್ನು ಸಂಭ್ರಮಿಸುತ್ತಿರುವುದು ನನಗೆ ಸಂತಸವನ್ನುಂಟು ಮಾಡಿದೆ. ಕಾರ್ಯಕ್ರಮ ರೂಪಿಸಿದ ನಬಿರೋಶನ್ ಪ್ರಕಾಶನ, ಬೋರಗಿ ಸಂಸ್ಥೆಗೆ ಧನ್ಯವಾದ ಎಂದರು.
ಸಾಹಿತಿ ಅಶೋಕ ಬಿರಾದಾರ ಹ.ಮ ಪೂಜಾರರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ ಹ.ಮ ಪೂಜಾರ ಮಕ್ಕಳ ಬದುಕಿಗೆ ಬೂನಾದಿ ಹಾಕಿಕೊಟ್ಟು ಸುಸಂಸ್ಕೃತ ಜೀವನ ನಡೆಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಆರಕ್ಷಕ ಮೌಲಾಲಿ ಆಲಗೂರ ಸ್ವಾಗತ ಜೊತೆಗೆ ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಅಖಂಡ ಸಿಂದಗಿ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ನೂತನ ಅಧ್ಯಕ್ಷ ಸಂಗಮೇಶ ಚಾಯಾಗೋಳ, ತತ್ವಪದಗಾರ್ತಿ ಇಮಾಂಬಿ ದೊಡಮನಿ, ಗುಬ್ಬೆವಾಡ ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಕಟ್ಟಿಮನಿ, ಶಿಕ್ಷಕಿ ಮಲಕಮ್ಮಾ ಮದಭಾವಿ, ಗಾಯಕ ಪ್ರಹ್ಲಾದ ಜಿ.ಕೆ, ಶಿಕ್ಷಕ ಮಡಿವಾಳಪ್ಪ ಪೂಜಾರಿ, ಶಿಕ್ಷಕ ಕಲಾವಿದ ಭಾಗೇಶ ಗೋಲಗೇರಿ ಇವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಬೌಡಿ ಬಿಲ್ಡಿಂಗ್ ನಲ್ಲಿ ಸಾಧನೆ ಗೈದ ಮುಸ್ತಫಾ ಆಲಗೂರ ಇವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ನಾಡಗೀತೆಗೆ ನೂರು ವರ್ಷ ತುಂಬಿದ ಪ್ರಯುಕ್ತ ಪ್ರಹ್ಲಾದ ಸಂಗೀತ ತಂಡದವರಿಂದ ನಾಡ ಗೀತೆ ಹಾಕಲಾಯಿತು.
ವೇದಿಕೆಯ ಮೇಲೆ ಮಹಿಬೂಬ ಅಸಂತಾಪುರ, ಪ್ರಾಚಾರ್ಯ ಆಯ್ ಎ.ಜುಮನಾಳ, ಸಂತೋಷ ಮಣ್ಣಿಗೇರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು..

