ಶಾಲೆಗೆ ಬೇಳೆ ಎಣ್ಣೆ ಪೂರೈಕೆಯೂ ಇಲ್ಲ | ಮೊಟ್ಟೆಗಳ ಖರೀದಿ ವೆಚ್ಚದಲ್ಲಿ ಭಾರಿ ಏರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿ ಊಟಕ್ಕೆ ಮಕ್ಕಳಿಗೆ ವಿತರಿಸುವ ಮೊಟ್ಟೆಗಳ ಖರೀದಿ ವೆಚ್ಚದಲ್ಲಿ ಭಾರಿ ಏರಿಕೆಯಾಗಿದ್ದು ಹೆಚ್ಚುವರಿ ದರ ಅನ್ವಯ ಶಾಲೆಗೆ ಹಣ ಬಿಡುಗಡೆ ಮಾಡಬೇಕೆಂದು ವಿಜಯಪುರ ನಗರವಲಯ ಶಿಕ್ಷಕ ಸಂಘದ ಅಧ್ಯಕ್ಷ ಜುಬೇರ ಎಸ್. ಕೆರೂರ ಅವರು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೆಶಕ ಎಸ್.ಎಂ. ಕುಂಬಾರ ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜುಬೇರ ಕೇರೂರ, ಪ್ರಸ್ತುತ ದೈನಂದಿನ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ₹ 8 ಇದೆ. ಸರ್ಕಾರ ಪ್ರತಿ ಮೊಟ್ಟೆಗೆ ₹ 6 ಮಾತ್ರ ಅನುದಾನ ಮಾತ್ರ ನೀಡುತ್ತಿದೆ. ಇದರಿಂದ ಪ್ರತಿ ಮೊಟ್ಟೆಗೆ ಸುಮಾರು ₹ 2 ಹೆಚ್ಚುವರಿ ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಮ್ಮ ಸ್ವಂತ ಜೇಬಿನಿಂದ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಇಂತಹ ಪರಿಸ್ಥಿತಿಯಿಂದ ಮಧ್ಯಾಹ್ನ ಬಿಸಿ ಊಟ ಯೋಜನೆಯ ಸಮರ್ಪಕ ನಿರ್ವಹಣೆ ಕಷ್ಟವಾಗುತ್ತಿದೆ. ಅಲ್ಲದೆ ಶಿಕ್ಷಕರಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಶಾಲಾ ಶಿಕ್ಷಣದ ಜೊತೆಗೆ ಯೋಜನೆಯ ನಿರ್ವಹಣೆಯಲ್ಲಿಯೂ ಹೆಚ್ಚುವರಿ ಭಾರವನ್ನು ಹೊರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ವಿತರಣೆಗೆ ನೀಡಲಾಗುತ್ತಿರುವ ಅನುದಾನವನ್ನು ತಕ್ಷಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಲಿವರೆಗೂ ಕೇವಲ ಬಾಳೆಹಣ್ಣುಗಳನ್ನು ಮಾತ್ರ ವಿತರಿಸಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದರು.
ಬೇಳೆ, ಎಣ್ಣೆ ಕೊರತೆ: ಶೈಕ್ಷಣಿಕ ವರ್ಷ ಆರಂಭವಾಗಿ ಜೂನ ತಿಂಗಳು ಮುಗಿಯುತ್ತಾ ಬಂದರೂ ಶಾಲೆಗಳಿಗೆ ಬೇಳೆ ಹಾಗೂ ಎಣ್ಣೆ ಪೂರೈಕೆಯಾಗಿಲ್ಲ. ಮುಖ್ಯಗುರುಗಳು ಬೇಳೆ ಹಾಗೂ ಎಣ್ಣೆ ಸಹ ಅಂಗಡಿ ಮೂಲಕ ಖರೀದಿಸುತ್ತಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಜಿ ಎಣ್ಣೆಗೆ ₹ 180 , ಕೇಜಿ ಬೇಳೆಗೆ ₹ 120 ರಂತೆ ಮುಖ್ಯಗುರುಗಳು ಖರೀದಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಕ ಸಂಘದ ಸಂಘಟನಾ ಕಾರ್ಯದರ್ಶಿ ಕಬೂಲ್ ಕೊಕಟನೂರ, ನಗರವಲಯ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ಮಂಜುನಾಥ ಆರೇಶಂಕರ, ಉಪಾಧ್ಯಕ್ಷ ಅಜೀಜ ಅರಳಿಮಟ್ಟಿ , ಸಹಕಾರ್ಯದರ್ಶಿ ಬಸೀರ್ ನದಾಪ್, ಜಮೀರ ನಾಗರಬಾವಡಿ ಇದ್ದರು.

