ವಿಜಯಪುರ ಜಿಲ್ಲಾಡಳಿತದಿಂದ ಸಂತ ಕನಕದಾಸ ಜಯಂತಿ ಆಚರಣೆ | ಸಚಿವ ಡಾ.ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಸೇರಿದಂತೆ ೩೧೬ ಕೀರ್ತನೆಗಳು ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಸಂತ ಕನಕದಾಸರ ಕೀರ್ತನೆಗಳು ಜನಮಾನಸದಲ್ಲಿ ಜನಜನಿತವಾಗಿವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಸಂತ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಕ್ಲಿಷ್ಟಕರ ಹಾಗೂ ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ. ದಾಸಸಾಹಿತ್ಯ, ಪದಗಳ ಮೂಲಕ ಸಮಾಜದ ಓರೆ-ಕೊರೆಗಳನ್ನು ತಿದ್ದಿ, ಅನಿಷ್ಠ ಪದ್ಧತಿಗಳು, ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದವರಾಗಿದ್ದು, ಇಂತಹ ಶ್ರೇಷ್ಠರ ತತ್ವಾದರ್ಶನಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.
ಬಿಎಲ್ಡಿಇ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ದಾಸ ಸಾಹಿತ್ಯದ ೬೫ ಸಂಪುಟ ಹೊರತರಲಾಗುತ್ತಿದ್ದು, ಈಗಾಗಲೇ ೪೫ ಸಂಪುಟಗಳ ಕಾರ್ಯ ಪೂರ್ಣಗೊಂಡಿದೆ. ಈ ಪೈಕಿ ೪ ಸಂಪುಟಗಳು ಕನಕದಾಸರ ಕೀರ್ತನೆಗೊಳಗೊಂಡಿವೆ. ಪ್ರಚಲಿತವಲ್ಲದ, ಎಲ್ಲೂ ಪ್ರಕಟವಾಗದೇ ಇರುವ ೧೫೦ ಕ್ಕೂ ಹೆಚ್ಚು ಕನಕದಾಸರ ಕೀರ್ತನೆಗಳನ್ನು ಸಂಶೋಧಿಸಿ ಪ್ರಕಟಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ನೀರಾವರಿ, ಔದ್ಯೋಗಿಕರಣ, ಉದ್ಯೋಗ, ಕೋಟಿ ವೃಕ್ಷ ಅಭಿಯಾನದ ಮೂಲಕ ಹಸರೀಕರಣ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಕನಕದಾಸರ ಜಯಂತಿ ಶುಭ ದಿನದಂದು ಕ್ಷೀರಕ್ರಾಂತಿ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಿದ್ದಪ್ಪ ಧನಗೊಂಡ ವಿಶೇಷ ಉಪನ್ಯಾಸ ನೀಡಿದರು.
ಇದಕ್ಕೂ ಮೊದಲು ನಗರದ ಕನಕದಾಸ ವೃತ್ತದಲ್ಲಿ ಕನಕದಾಸ ಪ್ರತಿಮೆಗೆ ಸಚಿವರು ಪುಷ್ಪಾರ್ಚನೆ ಸಲ್ಲಿಸಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು.ಮೋಹನ್ ಕಟ್ಟಿಮನಿ ನಿರೂಪಿಸಿ ವಂದಿಸಿದರು. ಮಾಳವಿಕಾ ಜೋಶಿ ಹಾಗೂ ತಂಡದವರು ಗೀತಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ ಎಂ.ಎಸ್ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ್ ಮುಶ್ರೀಪ್, ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಸುಜಾತ ಕಳ್ಳಿಮನಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಮಾಜದ ಮುಖಂಡರಾದ ಮಲ್ಲಣ್ಣ ಶಿರಸ್ಯಾಡ, ಕೆಕೆಆರ್ಟಿಸಿಯ ವಿಭಾಗೀಯ ನಿಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

“ಭಕ್ತಿಪಂಥದ ದಾಸವರೇಣ್ಯರಲ್ಲಿ ಭಕ್ತ ಕನಕದಾಸರು ಹೆಸರು ಅಜರಾಮರ ಅವರಂದ ರಚಿತ ಸಾಹಿತ್ಯ ಜನ ಸರಳವಾಗಿ ಅಥೈಸಿಕೊಳ್ಳಬಹುದಾಗಿದೆ. ಅವರ ಚಿಂತನೆಗಳು ಸಂದೇಶಗಳು ಸುಂದರ ಬದುಕಿನ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ದಾರ್ಶನಿಕರು ನೀಡಿರುವ ಸಂದೇಶ ಹಾಗೂ ಚಿಂತನೆಗಳ ಸಾರ ಅರಿತು ನಡೆಯೋಣ.”
– ಡಾ.ಆನಂದ ಕೆ
ಜಿಲ್ಲಾಧಿಕಾರಿ, ವಿಜಯಪುರ

” ದಾಸ ಸಾಹಿತ್ಯದ ಮೂಲಕ ಜೀವನ ಫಾಟ ಸಾರಿದವರು ಕನಕದಾಸರು, ಅವರು ಕನ್ನಡ ಸಾಹಿತ್ಯತ ಲೋಕದ ಅಶ್ವಿನಿ ದೇವತೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದಾರೆ. ಗಣನೀಯ ಕೊಡುಗೆ ನೀಡಿದ್ದಾರೆ. ಸಂಗೀತಕ್ಕೂ ಕೊಡುಗೆ ನೀಡಿದ್ದಾರೆ. ಕೀರ್ತನೆಕಾರರಾಗಿ ಸಂತರಾಗಿ ದಾರ್ಶನಿಕರಾಗಿ ಕನ್ನಡಕ್ಕೆ ಅವರ ಕೊಡುಗೆ ಅಪಾರ”
– ಲಕ್ಷ್ಮಣ ನಿಂಬರಗಿ
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

