ಆಲಮಟ್ಟಿ: ಸೆಲ್ಫಿ ಕಾಲಘಟ್ಟದಲ್ಲಿರುವ ಈಗಿನ ಯುವಕರು ವಿದೇಶದಲ್ಲಿಯೇ ವಾಸ್ತವ್ಯದ ಗತ್ತಿನಿಂದ ಹೊರಬಂದು, ಹೆತ್ತವರನ್ನು ಒಂಟಿ ಮಾಡದೇ, ಅವರನ್ನು ಜೀವಿತದ ಕೊನೆಯ ಹಂತದವರೆಗೂ ಕಾಪಾಡುವುದು ಪ್ರತಿ ಹಳೆ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಐ. ಹರಣಶಿಕಾರಿ ಅಭಿಪ್ರಾಯಪಟ್ಟರು.
ಆಲಮಟ್ಟಿಯ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ 1994 ನೇ ಸಾಲಿನಲ್ಲಿ ಇಲ್ಲಿನ ಎಂಪಿಎಸ್ ಶಾಲೆಯಲ್ಲಿ 7 ನೇ ವರ್ಗ, 1997 ರಲ್ಲಿ ಎಂಎಚ್ ಎಂ ಪ್ರೌಡಶಾಲೆಯಲ್ಲಿ 10 ನೇ ವರ್ಗ ಪಾಸಾದ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಲಮಟ್ಟಿಯಲ್ಲಿ ಡಾ ಬಿ.ಎಸ್. ಅಕ್ಕಿಯವರು ಕರುನಾಡ ಗಾಂಧಿ ಮಂಜಪ್ಪ ಹರ್ಡೇಕರ ಹಾಗೂ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಹೆಸರಲ್ಲಿ ಪ್ರೌಡಶಾಲೆ ಆರಂಭಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದರು. 1975 ರ ಕಾಲಘಟ್ಟದಲ್ಲಿ ಆಲಮಟ್ಟಿ ರೈಲು ನಿಲ್ದಾಣಕ್ಕೆ ಬೇರೆ ಗ್ರಾಮದ ಹೆಸರನ್ನಿಡುವ ಹುನ್ನಾರ ನಡೆದು ಅಂತಿಮಗೊಂಡಿತ್ತು. ಬಿ.ಎಸ್. ಅಕ್ಕಿಯವರು ರೂಪಿಸಿದ ಹೋರಾಟ ಹಾಗೂ ಸತತ ಪ್ರಯತ್ನದ ಫಲವಾಗಿ ನಿಲ್ದಾಣಕ್ಕೆ ಆಲಮಟ್ಟಿ ಹೆಸರೇ ಉಳಿಯುವಂತೆ ಮಾಡಿದರು ಎಂದು ಸ್ಮರಿಸಿದರು.
ಸಿ.ಎಸ್. ಕಣಕಾಲಮಠ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕಿ ನೀಲಾಂಬಿಕಾ ಪಾಟೀಲ ಮಾತನಾಡಿ, ಇಲ್ಲಿನ ಶಿಕ್ಷಕರು ಬಿಲ್ ಮತ್ತು ಬೆಲ್ ಗೆ ಕಾರ್ಯ ನಿರ್ವಹಿಸದೇ, ವಿದ್ಯಾರ್ಥಿಗಳಿಗೆ ವಿದ್ಯಾದಾನ, ಆತ್ಮವಿಶ್ವಾಸದಿಂದ ಕಲಿಸಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಆಲಮಟ್ಟಿಯ ಪುರವರ ಹಿರೇಮಠದ ಅನ್ನದಾನೇಶ್ವರ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಯ ಹಣೆಬರಹವನ್ನು ತಿದ್ದುಪಡಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದರು.
ಪ್ರಾಚಾರ್ಯ ಪಿ.ಎ. ಹೇಮಗಿರಿಮಠ, ವಿ.ಎ. ಭಾಂಡವಳಕರ, ಪಿ.ಎಲ್. ಮಿಂಚನಾಳ, ವಿ.ಎಂ. ಪಟ್ಟಣಶೆಟ್ಟಿ, ಕುಲಕರ್ಣಿ ಮಾತನಾಡಿದರು. ಜಿ.ಎಂ. ಕೊಟ್ಯಾಳ, ಐ.ಬಿ. ಉಳ್ಳಾಗಡ್ಡಿ, ಪಿ.ಎಂ. ಮಹೇಂದ್ರಕರ, ರಾಜೇಶ್ವರಿ ಹುಣಶಿಕಟ್ಟಿ, ಬಿ.ಎನ್. ಗುಣದಾಳ, ಪಿ.ಎನ್. ತಾಂಬೆ, ಜಿ.ಎಚ್. ಹಿರೇಗೌಡರ, ಬಸವರಾಜ ಯರವಿನತೆಲಿಮಠ, ಎಸ್.ಕೆ. ಬಾಗವಾನ, ಸಿ.ಎಸ್. ವಿರಕ್ತಮಠ, ಎಸ್.ಐ. ಗಿಡ್ಡಪ್ಪಗೋಳ, ಎಸ್.ಎಚ್. ಗೋಗಿ, ಸಿ.ಎಸ್. ಉಪ್ಪಾರ ಮತ್ತೀತರರನ್ನು ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

