ಉಪ್ಪಾರ ಪ್ರತಿಭಾ ಪುರಸ್ಕಾರ, ನಿವೃತ್ತರು, ನೂತನ ನೇಮಕವಾದ ನೌಕರರು, ಸಾಧಕರಿಗೆ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರವರ್ಗ 1 ರಲ್ಲಿರುವ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಗೆ ಪೂರಕವಾಗಿ ಕುಲಶಾಸ್ತ್ರ ಅಧ್ಯಯನ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಭರವಸೆ ನೀಡಿದರು.
ಭಾನುವಾರ ನಗರದ ಕಂದಗಲ್ ಹನುಮಂತ್ರಾಯ ರಂಗ ಮಂದಿರದಲ್ಲಿ ಜಿಲ್ಲಾ ಉಪ್ಪಾರ ಸೇವಾ ಸಂಘ, ಜಿಲ್ಲಾ ಉಪ್ಪಾರ ನೌಕರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಹಾಗೂ ನೂತನ ನೌಕರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಎಲ್ಲ ಸಮಾಜಗಳಲ್ಲಿ ಇರುವಂತೆ ಆರ್ಥಿಕ ಬಡವರಿದ್ದಾರೆ. ಅಂಥವರಿಗೆ ಸಾಮಾಜಿಕ ನ್ಯಾಯದ ಲಾಭ ಸಿಗಬೇಕಿದೆ. ಮೀಸಲಾತಿಗಾಗಿ ಕುಲ ಶಾಸ್ತ್ರ ಅಧ್ಯಯನ ನಡೆಸುವ ಕುರಿತು ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸೇರಿ ಚರ್ಚೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ವಿಜಯಪುರ ನಗರದಲ್ಲಿ ಭಗೀರಥ ಮಹಾರಾಜರ ಮೂರ್ತಿ ಅನಾವರಣದ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚುವರು, ಸ್ಥಳೀಯ ಶಾಸಕರೊಂದಿಗೆ ಸೇರಿ ಪ್ರಾಮಾಣಿಕ ಬದ್ಧತೆ ತೋರುವುದಾಗಿ ಹೇಳಿದರು.
ಭೂಮಿಗೆ ಗಂಗೆಯನ್ನು ಕರೆತಂದ ಭಗೀರಥ ಮಹರ್ಷಿ ಗಳ ಉಪ್ಪಾರ ಸಮುದಾಯ ಉಪ್ಪು, ಇದ್ದಲಿಯಂಥ ವಸ್ತುಗಳನ್ನು ಮಾರಾಟ ಮಾಡಿ ಪರಿಶ್ರಮದ ಜೀವನ ನಡೆಸುತ್ತ ಬಂದಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಉಪ್ಪಿನ ಸತ್ಯಾಗ್ರಹದಲ್ಲಿ ತನ್ನ ಯೋಗದಾನ ನೀಡಿದೆ ಎಂದು ಬಣ್ಣಿಸಿದರು.
ಯಾವುದೇ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಲು ಶಿಕ್ಷಣ ಮುಖ್ಯವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಬಂಥನಾಳ ಶಿವಯೋಗಿಗಳು, ಡಾ.ಫ.ಗು.ಹಳಕಟ್ಟಿ ಅವರು, ತಾಳಿಕೋಟೆಯ ಖಾಸ್ಗತ ಶ್ರೀಗಳಂಥ ಮಠಾಧೀಶರು ಶೋಷಿತ ಎಲ್ಲ ಸಮುದಾಯದ ಜನರಿಗೆ ಅಕ್ಷರ ದಾಸೋಹಕ್ಕಾಗಿ ಶ್ರೀಗಳು ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಧಾರೆ ಎರೆದಿದ್ದು, ಅವಕಾಶ ಪಡೆದವರು ಎಂದೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ವೀರಶೈವ ಲಿಂಗಾಯತ ಮಠಗಳು ಜಾತಿ, ಮತ ಪಂಥ ಎಣಿಸದೇ ರಾಜ್ಯದಲ್ಲಿ ಅನ್ನ ದಾಸೋಹದೊಂದಿಗೆ ಅಕ್ಷರ ದಾಸೋಹ ಮಾಡಿ ಎಲ್ಲ ಸಮುದಾಯಕ್ಕೆ ಜ್ಞಾನ ದಾಸೋಹ ಮಾಡಿವೆ. ಇದೇ ಹಾದಿಯಲ್ಲಿ ಸಾಗಿರುವ ಉಪ್ಪಾರ ಸಮುದಾಯದ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಶ್ರೀಗಳು ನಾಲ್ಕಾರು ಕಾಲೇಜುಗಳನ್ನು ಕಟ್ಟಿ ಬೆಳೆಸುವ ಮೂಲಕ ಸಮಾಜಕ್ಕೆ ಮಹದುಪಕಾರ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈಚೆಗೆ ರಾಜಕೀಯ ವ್ಯಕ್ತಿಗಳ ರೀತಿಯಲ್ಲೇ ಸ್ವಾಮೀಜಿಗಳು ಆಡುವ ಮಾತುಗಳೂ ವಿವಾದ ಸೃಷ್ಟಿಸುತ್ತಿವೆ. ಆದರೆ ಭಗೀರಥ ಪೀಠದ ಶ್ರೀಗಳು ವಿವಾದದಿಂದ ದೂರವಿದ್ದು, ಸಮಾಜ ಕಟ್ಟುವ ಕೆಲಸದಲ್ಲಿ ಸಕ್ರೀತರಾಗಿದ್ದು, ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶೈಕ್ಷಣಿಕ ಕ್ರಾಂತಿಯ ಪರಿಣಾಮ ಉಪ್ಪಾರ ಸಮುದಾಯದ ಬಡತನದಲ್ಲಿ ಅರಳಿದ ಪ್ರತಿಭಾವಂತರು ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ರಾಜಕೀಯ ಪ್ರಾತಿನಿಧ್ಯದ ಅಗತ್ಯವಿದೆ ಎಂದರು.
80 ರ ದಶಕದಲ್ಲಿ ನಿಮ್ಮದೇ ಸಮುದಾಯ ಜಕ್ಕಪ್ಪ ಯಡವೇ ಅವರನ್ನು ಜಿ.ಪಂ. ಸದಸ್ಯರಾಗಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಅದೇ ಸಂದರ್ಭದಲ್ಲಿ ನಾನು ತಿಕೋಟಾ ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾಗಲು ಕಾರಣವಾಯ್ತು ಎಂದು ರಾಜಕೀಯ ಘಟನೆಗಳನ್ನು ಮೆಲುಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಉಪ್ಪಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಜಕ್ಕಪ್ಪ ಯಡವೇ ಮಾತನಾಡಿ, ಮೂರು ದಶಕಗಳ ಹಿಂದೆ ನಮ್ಮ ಸಮುದಾಯದ ಸಂಘಟನೆಗಾಗಿ ಸಾಕಷ್ಟು ಬೆಂಬಲವಾಗಿ ನಿಂತಿದ್ದವರು
ಈಗ ಸಚಿವರಾಗಿರುವ ಶಿವಾನಂದ ಪಾಟೀಲ ಅವರು ನನ್ನ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಶಿವಾನಂದ ಪಾಟೀಲ ಪ್ರೋತ್ಸಾಹ, ಉಪಕಾರ ಸದಾ ಸ್ಮರಣೀಯ ಎಂದರು.
ಚಿತ್ರದುರ್ಗದ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಶ್ರೀಗಳು, ಚಿಕ್ಕಲಕಿ ಕ್ರಾಸ್ ಸಾಧನ ತಪೋವನದ ಶಿವಾನಂದ ಶ್ರೀಗಳು, ಪಂಢರಪುರದ ಶಾಂತಮ್ಮ ಮಾತಾಜಿ, ಎಂ.ಎಸ್.ಐ.ಎಲ್. ಅಧ್ಯಕ್ಷರೂ ಆಗಿರುವ ಚಾಮರಾಜನಗರ ಶಾಸಕರಾದ ಪುಟ್ಟರಂಗಶೆಟ್ಟಿ, ಜಿಲ್ಲೆಯ ಶಾಸಕರಾದ ವಿಠ್ಠಲ ಕಟಕಧೋಂಡ, ಬಸನಗೌಡ ಪಾಟೀಲ ಯತ್ನಾಳ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಉಪ್ಪಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ಪುಂಡಲೀಕ ಉಪ್ಪಾರ, ತಹಶಿಲ್ದಾರರ ಸುರೇಶ ಮುಂಜೆ, ಡಾ.ಸುರೇಶ ಕಾಗಲಕರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಶಂಕರ ಬೆಳ್ಳುಬ್ಬಿ, ರಂಗು ಮುಂಜೆ, ಯಂಕಪ್ಪ ಉಪ್ಪಾರ, ಡಾ.ಪ್ರಕಾಶ ಗೋಡಬಿಂಡಿ, ಮಲ್ಲಪ್ಪ ಖಂಡೇಕರ, ರೇಣುಕಾ ಪರಸಪ್ಪಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

