ಧಾರವಾಡದ ಉತ್ತರ ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಹೊರ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳು ಸಂಚರಿಸುತ್ತಿದ್ದು, ಅಂತಹ ವಾಹನಗಳು ಕರ್ನಾಟಕದಲ್ಲಿ ನೋಂದಣಿಯಾಗದೆ ಇದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಧಾರವಾಡದ ಉತ್ತರ ಅಪರ ಸಾರಿಗೆ ಆಯುಕ್ತರಾದ ಕೆ.ಟಿ. ಹಾಲಸ್ವಾಮಿ ತಿಳಿಸಿದರು.
ಬುಧವಾರ ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಹೊರ ರಾಜ್ಯ ವಾಹನಗಳ ತಪಾಸಣೆಗಾಗಿ ವಿಶೇಷ ತಪಾಸಣಾ ಕಾರ್ಯಕ್ರಮದ ಕುರಿತು ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ರಾಜ್ಯದಲ್ಲಿ ಪಾಂಡಿಚೇರಿ ಹಾಗೂ ಇತರ ರಾಜ್ಯಗಳಲ್ಲಿ ತೆರಿಗೆ ಕಡಿಮೆ ಇದ್ದು ಅಲ್ಲಿಂದ ವಾಹನಗಳನ್ನು ಖರೀದಿಸಿ ನೋಂದಣಿ ಮಾಡಿಕೊಂಡು ನಮ್ಮ ರಾಜ್ಯಗಳಲ್ಲಿ ವಾಹನಗಳು ಓಡಾಡುತ್ತಿವೆ. ಮೋಟಾರ ವಾಹನ ಕಾಯಿದೆಯಂತೆ ಬೇರೆ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳು ನಮ್ಮ ರಾಜ್ಯಗಳಲ್ಲಿ ಬಳಸಬೇಕಾದರ ವಾಹನ ನೋಂದಣಿಯಾದ ೧೧ ತಿಂಗಳಲ್ಲಿ ನಮ್ಮ ರಾಜ್ಯದ ನೋಂದಣಿ ಮಾಡಿಕೊಳ್ಳಬೇಕು. ಈಗ ಬಳಸುತ್ತಿರುವ ಹೆಚ್ಚಿನ ವಾಹನಗಳು ನಮ್ಮ ರಾಜ್ಯದ ನೋಂದಣಿ ಮಾಡಿಕೊಳ್ಳದೇ ಬರುವಂತಹ ರಾಜಸ್ವ ಸೋರಿಕೆಯಾಗುತ್ತಿದೆ ಆದುದರಿಂದ, ಬೆಳಗಾವಿ ಹಾಗೂ ಕಲಬುರಗಿ ಗಡಿ ಭಾಗಗಳಲ್ಲಿ ಹಾಗೂ ಇತರೆ ಭಾಗಗಳಲ್ಲಿ ವಾಹನಗಳು ಓಡಾಡುತ್ತಿರುವುದನ್ನು ಮನಗಂಡು ವಿಶೇಷ ಪ್ರವರ್ತನ ಕಾರ್ಯವನ್ನು ನಡೆಸಲಾಗುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಂತಹ ಅನಧಿಕೃತ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಮಾಲಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ರಾಜದ ಬೊಕ್ಕಸಕ್ಕೆ ಉಂಟಾಗುತ್ತಿರುವ ರಾಜಸ್ವ ಸೋರಿಕೆಯನ್ನು ತಡೆಗಟುವ ನಿಟ್ಟಿನಲ್ಲಿ ಈ ವಿಶೇಷ ಪ್ರವರ್ತನ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಈ ಕಾರ್ಯ ನಿರಂತವಾಗಿ ಮುಂದುವರೆಯುತ್ತದೆ.
ವಾಹನ ಮಾಲಿಕರು ಎನ್.ಒ.ಸಿ ಪಡೆದುಕೊಂಡು ಕರ್ನಾಟಕ ರಾಜ್ಯದಲ್ಲಿ ಅನ್ವಯವಾಗುವಂತೆ ತೆರಿಗೆಯನ್ನು ನಿಯಮಾನುಸಾರ ಭರಿಸಿ ವಿಳಾಸ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಪಾಂಡಿಚೇರಿ ನೋಂದಣಿ ಹಾಗೂ ಇತರೆ ರಾಜ್ಯದ ನೋಂದಣಿ ಹೊಂದಿರುವ ಸುಮಾರು ೯೦ಕ್ಕಿಂತ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡು ಕಾನೂನಿನ ರೀತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯುಪುರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಸೀಮ ಬಾಬಾ ಮುದ್ದೇಬಿಹಾಳ, ಮೋಟಾರು ವಾಹನ ನಿರೀಕ್ಷಕರುಗಳಾದ ಪಂಚಾಕ್ಷರಿ ಅಳವಂಡಿ, ಗೋವಿಂದ ರಾಠೋಡ, ಅಧೀಕ್ಷಕರಾದ ರಾಘವೆಂದ್ರ ಯಡಹಳ್ಳಿ, ಮುತ್ತರಾಜ, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

