ಲೇಖನ
– ಡಾ.ರಾಜಶೇಖರ ನಾಗೂರ
ಸಂಚಾಲಕರು
ನಮ್ಮ ಕಥಾ ಅರಮನೆ
ಉದಯರಶ್ಮಿ ದಿನಪತ್ರಿಕೆ
ಮನುಷ್ಯ ಭೂಮಿಯ ಮೇಲೆ ಹುಟ್ಟಿ ಬಂದಮೇಲೆ ಬೇಟೆಯಾಡುತ್ತಾ ಬದುಕಿದ. ಕಾಲಕ್ರಮೇಣ ತನ್ನದೇ ಗುಂಪು ಮಾಡಿಕೊಂಡು ಬದುಕಲು ಪ್ರಾರಂಭ ಮಾಡಿದ. ತದನಂತರ ತನ್ನದೇ ಕುಟುಂಬ, ತನ್ನದೇ ಜೀವನ ಸಂಗಾತಿ ಮತ್ತು ತನ್ನದೇ ಸಂತತಿ ಎಂದು ಪ್ರತ್ಯೇಕ ಗೊಳಿಸಿಕೊಂಡು ಬದುಕಲು ಪ್ರಾರಂಭ ಮಾಡಿದ. ಆಗ ನಾಗರಿಕತೆ ಶುರುವಾಯ್ತು.
ಆಗ ಗುಂಪುಗಳು ಊರುಗಳಾದವು. ಊರುಗಳು ನಗರಗಳಾದವು, ನಗರಗಳು ಸಮಾಜವಾಯ್ತು. ಈಗ ಸಾಮಾಜಿಕ ನಿಯಂತ್ರಣ ಸವಾಲಾಯ್ತು. ಆಗ ನೀತಿ ನಿಯಮಗಳನ್ನು ಸೃಷ್ಟಿ ಮಾಡಿಕೊಂಡ. ಮನುಷ್ಯ ಯಾವ ನಿಯಮಗಳನ್ನೂ ಕೂಡಾ ದಿಕ್ಕರಿಸಿ ದೌರ್ಜನ್ಯ ಎಸಗುತ್ತಾನೆ. ಹೀಗಾಗಿ ಅದೃಶ್ಯ ದೇವರು, ದೆವ್ವ, ಆತ್ಮ, ಕರ್ಮ ಅಂತೆಲ್ಲಾ ಪರಿಕಲ್ಪನೆಗಳನ್ನು ಹುಟ್ಟುಹಾಕಿ ನೈತಿಕತೆಯ ಭಯ ಸೃಷ್ಟಿ ಮಾಡಿದ. ಆಗ ಈ ನಂಬಿಕೆಗಳ ಮೇಲೆ ಒಟ್ಟಾಗಿ ಬದುಕಲು ಸಾಧ್ಯವಾಯ್ತು. ಈ ನಂಬಿಕೆ ಎಲ್ಲರನ್ನೂ ಹಿಡಿದಿಡುವ ಶಕ್ತಿಯಾಯಿತು.
ಈಗ ನಂಬಿಕೆಯ ನಂತರವೇ ಮೂಢನಂಬಿಕೆ ಸೃಷ್ಟಿ ಪ್ರಾರಂಭವಾಯ್ತು. ಏಕೆಂದರೆ ಇತಿಹಾಸ ಅವಲೋಕಿಸಿದಾಗ ಮನುಷ್ಯ ಇನ್ನೊಬ್ಬರನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಹುನ್ನಾರ ಮಾಡುತ್ತಲೇ ಬಂದಿದ್ದಾನೆ.
ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಮೇಲೆ ನಿಯಂತ್ರಣ ಹೊಂದಲು ಒಂದು ಭೌತಿಕ ದೌರ್ಜನ್ಯ ಎಸಗಬೇಕು ಇಲ್ಲವೇ ತಾನೆ ಸೃಷ್ಟಿಸಿಕೊಂಡ ನಂಬಿಕೆಗಳನ್ನು ಅಪನಂಬಿಕೆಯಾಗಿ ಅಂದ್ರೆ ಮೂಢನಂಬಿಕೆಯಾಗಿ ಮನುಷ್ಯನ ಮಾನಸಿಕ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಇತರರ ಮೇಲೆ ಹೇರಿ ತನ್ನ ಲಾಭಕ್ಕಾಗಿ ಶೋಷಣೆ ಮಾಡಬೇಕು. ಈ ಸಂದರ್ಭದಲ್ಲಿ ಮೂಢನಂಬಿಕೆಗಳು ಸೃಷ್ಟಿಯಾದವು.

ಯಾವ ಶಕ್ತಿಗಳನ್ನು ಯಾರೂ ಇಲ್ಲಿಯವರೆಗೂ ನೋಡಿಲ್ಲ, ಯಾರೂ ಕಂಡಿಲ್ಲ ಅಂತಹ ಪರಿಕಲ್ಪನೆಗಳನ್ನು ಉಪಯೋಗಿಸಿಕೊಂಡು ಮನುಷ್ಯನಲ್ಲಿ ಭಯ ಹುಟ್ಟಿಸಿ ಶೋಷಣೆ ಮಾಡಿ ಅದನ್ನು ಉಪಯೋಗಿಸಿಕೊಂಡು ತಾನು ಲಾಭ ಪಡೆದುಕೊಳ್ಳಬೇಕು ಅಥವಾ ಇತರರ ಮೇಲೆ ನಿಯಂತ್ರಣವನ್ನು ಸಾಧಿಸಬೇಕು ಎಂಬುದು ಈ ಮೂಢನಂಬಿಕೆಗಳ ಹಿಂದಿರುವ ಉದ್ದೇಶ.
ನಾವು ನೀವುಗಳು ನೋಡಿದಂತೆ ಚಿಕ್ಕವರಿರುವಾಗ ಊರಲ್ಲಿ ಒಬ್ಬ ತಾಂತ್ರಿಕ ಮನುಷ್ಯ ಇರುತ್ತಿದ್ದ. ಅವನು ಹೇಳಿದ್ದನ್ನು ನಾವೆಲ್ಲಾ ನಂಬುತ್ತಿದ್ದೆವು. ಎಲ್ಲ ಸಮಸ್ಯೆಗಳಿಗೆ ಪರಿಹಾರ ಅವನೇ ಹೇಳುವುದಾಗಿತ್ತು. ಅವನು ಹೇಳಿದ್ದನ್ನು ನಂಬಿ ಅದನ್ನು ಪ್ರಶ್ನೆ ಮಾಡದೆ ಜನರು ತಲೆತಗ್ಗಿಸಿಕೊಂಡು ಅನುಸರಿಸುತ್ತಿದ್ದದ್ದು ನಾವು ನೀವೆಲ್ಲ ಕಂಡಿದ್ದೇವೆ. ನಿಂಬೆ, ಮೆಣಸು, ದಾರ, ಅರಿಶಿಣ, ಕುಂಕುಮ ಸುತ್ತಲಿನ ಪರಿಕರಗಳನ್ನು ವಿನಿಯೋಗಿಸಿಕೊಂಡು ಬುದ್ದಿಗೆ ಮಂಕು ಬರಿಸುವ ತಂತ್ರವೇ ಮೂಢನಂಬಿಕೆ ಎಂಬುದಕ್ಕೇ ನಾವು ನೀವು ಸಾಕ್ಷಿಯಾಗಿದ್ದೇವೆ.
ಮಾನಸಿಕ ಅಸ್ವಸ್ಥನಾದ ವ್ಯಕ್ತಿಗೆ ದೆವ್ವ ಭೂತ ಹಿಡಿದಿದೆ ಅಥವಾ ದೇವರ ಕಾಟವಿದೆ ಎಂದು ಆ ಒಬ್ಬ ವ್ಯಕ್ತಿ ಹೇಳಿದಾಗ ಆ ಮೂಢನಂಬಿಕೆಯನ್ನು ನಂಬಿ ಜನರು ಅವನು ಹೇಳಿದಂತೆ ಅನುಸರಿಸುತ್ತಿದ್ದರು. ಪರಿಹಾರಕ್ಕಾಗಿ ಅವನು ಹೇಳಿದಂತೆ ಏನೆಲ್ಲ ಮಾಡುತ್ತಿದ್ದರು. ಅಲ್ಲಿ ಆರ್ಥಿಕ ಶೋಷಣೆ ಆಗುತ್ತಿತ್ತು ಕೆಲವೊಮ್ಮೆ ದೈಹಿಕ ಶೋಷಣೆ ಆಗುತ್ತಿತ್ತು. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ತುಂಬಾ ಪ್ರಖ್ಯಾತ ಜ್ಯೋತಿಷಿಯೊಬ್ಬ ಅನೇಕ ರಾಜಕೀಯ ವ್ಯಕ್ತಿಗಳನ್ನು, ಅನೇಕ ಪ್ರಖ್ಯಾತ ಪ್ರಭಾವಿ ಹೆಣ್ಣು ಮಕ್ಕಳನ್ನು ಶೋಷಣೆ ಮಾಡಿದ್ದು ಜಗಜ್ಜಾಹಿರವಾಗಿದೆ. ಇದು ಸಂಪೂರ್ಣ ಮೂಢನಂಬಿಕೆಯ ಪ್ರಮಾದ.
ಇವತ್ತಿನ ಮೊಬೈಲ್ ಯುಗದಲ್ಲಿ ನಾವಿದ್ದರೂ, ಸಾಕಷ್ಟು ವೈಜ್ಞಾನಿಕ ಮನೋಭಾವ ಬೆಳೆದಿದ್ದರೂ ಇಂತಹ ಮೂಢನಂಬಿಕೆಗಳ ವ್ಯಾಪ್ತಿಗೆ ಒಳಗಾಗಿ ನಮ್ಮ ವಿವೇಚನೆಯನ್ನು ಕಳೆದುಕೊಂಡು ಹರಕೆಯ ಕುರಿಯಾಗುತ್ತಿದ್ದೇವೆ. ಒಬ್ಬ ವಿಜ್ಞಾನಿ ಅಥವಾ ತತ್ವಜ್ಞಾನಿಯನ್ನು ನಂಬುವುದಕ್ಕಿಂತ ತಾಂತ್ರಿಕನನ್ನು, ಕೈ ನೋಡುವವನನ್ನು, ರಸ್ತೆಯ ಬೀದಿಯಲ್ಲಿ ಕುಳಿತು ಗಿಳಿ ಶಾಸ್ತ್ರ ಹೇಳುವವನನ್ನು ನಾವು ನಂಬುತ್ತೇವೆ ಎಂಬುದು ವಿಷಾದನೀಯ.

ಆ ಜ್ಯೋತಿಷಿಯನ್ನು ಸೇರಿದಂತೆ ಅಥವಾ ಮಾಟ ಮಂತ್ರ ಮಾಡುವ ಯಾವುದೇ ವ್ಯಕ್ತಿಯನ್ನು ಈ ಸಾವು ನೋವು ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಮೂಢನಂಬಿಕೆಗಳನ್ನು ಹೇರುವವನು ಕೂಡ ಸಾವಿಗೀಡಾಗುತ್ತಾನೆ, ರೋಗಗ್ರಸ್ತನಾಗುತ್ತಾನೆ. ಎಲ್ಲವನ್ನು ಪರಿಹಾರ ಮಾಡುವುದಾಗಿದ್ದರೆ ಅವನು ಯಾಕೆ ಬಳಲಬೇಕು?!
ಇಂತಹ ಮೂಢನಂಬಿಕೆಗಳನ್ನು ಮೌನವಾಗಿ ಇಂದಿಗೂ ನಮ್ಮ ಸಮಾಜ ಒಪ್ಪಿಕೊಂಡು ಅಲ್ಲಲ್ಲಿ ಬಳಲುತ್ತಿದೆ ಎಂದಾದರೆ ಈ “ಮೂಢನಂಬಿಕೆ ಸಮಾಜದ ಮೌನ ಶತ್ರು”.
ಶಿಕ್ಷಣ ವೈಜ್ಞಾನಿಕ ವೈಚಾರಿಕತೆಗೆ ಬೆಳಕು ಚೆಲ್ಲುವ ಸಾಧನವಾಗಿದೆ. ನಾವು ಶಿಕ್ಷಣ ಪಡೆದುಕೊಂಡರೂ ಆಧಾರವಿಲ್ಲದ ಮೂಢನಂಬಿಕೆಗಳನ್ನು ನಾವು ನಂಬುವುದಾದರೆ ನಾವು ಕೂಡ ಈ ಸಮಾಜಕ್ಕೆ ಮೌನವಾಗಿಯೇ ಅನ್ಯಾಯ ಮಾಡಿದಂತೆ. ಸಮಾಜದ ಮೌನ ಶತ್ರು ಈ ಮೂಢನಂಬಿಕೆಗೆ ಇಂಬು ಕೊಟ್ಟಂತೆ.
ಎಲ್ಲಿಯವರೆಗೆ ನಮ್ಮ ವಿವೇಚನೆಯನ್ನು ಮುಂದಿಟ್ಟುಕೊಂಡು ಆ ಸಮಾಜದಲ್ಲಿ ನೋಡುವುದಿಲ್ಲವೋ ಅಲ್ಲಿವರೆಗೂ ನಾವು ಮೂಢನಂಬಿಕೆಗಳಿಗೆ ಬಲಿಯಾಗುತ್ತೇವೆ.
ಸಮಾಜದ ಈ ಮೌನ ಶತ್ರುವನ್ನು ಮೌನವಾಗಿ ಜ್ಞಾನದ ಬೆಳಕಿನಿಂದ ನಾವು ಒದ್ದೋಡಿಸಬೇಕಿದೆ. ಜಾಗೃತರಾಗೋಣ.


