ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರೂ ನಮ್ಮ ದೇಶದ ಸಂಸ್ಕ್ಕತಿ, ಸಂಸ್ಕಾರ ಮರೆತುಹೋಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಕವಿ-ಕಲಾವಿದರು ನಮ್ಮ ದೇಶದ ಸಂಸ್ಕ್ರತಿ-ಸಂಸ್ಕಾರವನ್ನು ಉಳಿಸಿ ಬೆಳೆಸಬೇಕೆಂದು ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಹೇಳಿದರು.
ಪಟ್ಟಣದ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಗಾನಯೋಗಿ ಡಾ.ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮೊಬೈಲ್, ದೂರದರ್ಶನ (ಟಿವ್ಹಿ) ಯುಗದಲ್ಲಿ ನಾಟಕ ವೀಕ್ಷಣೆ ಕಡಿಮೆಯಾಗುತ್ತಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳು ಅಗತ್ಯವಿದೆ. ಪ್ರತಿ ಗ್ರಾಮದ ಜಾತ್ರೆಗಳಲ್ಲಿ ನಾಟಕ ಪ್ರದರ್ಶನವಾಗುವದನ್ನು ಕಾಣುತ್ತೇವೆ. ನಮ್ಮ ದೇಶದ ಸಂಸ್ಕ್ರತಿ ಉಳಿಯಬೇಕಾದರೆ ಕಲಾವಿದರು, ಕವಿಗಳು, ಬರಹಗಾರರು ಉಳಿಯಬೇಕು. ಇವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯವಿದೆ. ಇವರದು ದೊಡ್ಡ ಶಕ್ತಿ. ಇವರ ಶಕ್ತಿ ಸಮಾಜವನ್ನು ಪರಿವರ್ತನೆ ಮಾಡಬಲ್ಲದು. ಮಹಾತ್ಮಗಾಂಧೀಜಿ ಬಾಲ್ಯದಲ್ಲಿ ಸತ್ಯಹರಿಶ್ಚಂದ್ರ ನಾಟಕ ವೀಕ್ಷಣೆಯಿಂದ ಬದಲಾವಣೆಯಾಗಿರುವದನ್ನು ನಾವು ತಿಳಿದುಕೊಂಡಿದ್ದೇವೆ. ಇಂತಹ ಉದಾಹರಣೆಗಳು ಸಾಕಷ್ಟು ನಮ್ಮ ಕಣ್ಣುಮುಂದೆ ಇವೆ ಎಂದರು.
ಬರಹಗಾರರು, ಕವಿಗಳು, ಕಲಾವಿದರು ಎಂದಿಗೂ ಧೈರ್ಯಗೆಡಬಾರದು. ಅವರ ಹಿಂದೆ ಸರ್ಕಾರ ಸದಾ ಇರುತ್ತದೆ. ನಾನು ಆಡಳಿತ ಪಕ್ಷದ ವಿರೋಧ ಪಕ್ಷದಲ್ಲಿದ್ದ ಕಾರಣದಿಂದ ಈ ಸಂಘವು ಕವಿ ಭವನ, ಸಂಘಕ್ಕೆ ಎರಡು ಎಕರೆ ಜಾಗೆ ಬೇಡಿಕೆ ನಮ್ಮ ಮುಂದೆ ಇಟ್ಟಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಗಮನಕ್ಕೆ ತಂದು ಸಿಎಂ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ಪ್ರಾಮಾಣಿಕವಾಗಿ ತರಲಾಗುವದು ಎಂದರು.
ಸಂಘದ ರಾಜ್ಯಾಧ್ಯಕ್ಷ ಶಂಕರಜಿ ಮಾತನಾಡಿ, ರಾಜ್ಯದಲ್ಲಿ ಎಲ್ಲದಕ್ಕೂ ಸಂಘಗಳಿವೆ. ಬರಹಗಾರರ, ಕವಿಗಳ ಸಂಘ ಇಲ್ಲದೇ ಇರುವದರಿಂದಾಗಿ ನಾವು ಈ ಸಂಘವನ್ನು ಸ್ಥಾಪಿಸಿದ್ದೇವೆ. ಈ ಸಂಘದಿಂದ ಕವಿ-ಕಲಾವಿದರ ಬದುಕಿಗೆ ನೆರವಾಗುವ ಉದ್ದೇಶವಿದೆ. ರಾಜ್ಯದಲ್ಲಿ ವಿವಿಧ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿದ್ದರೂ ಕವಿಗಳಿಗೆ, ಬರಹಗಾರರಿಗೆ, ಕಲಾವಿದರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಎಲ್ಲರನ್ನೂ ಒಂದುಗೂಡಿಸಿ ಇವರ ಜೀವನದ ಭದ್ರತೆಗೆ ಸಂಘವು ಶ್ರಮಿಸಲಿದೆ ಎಂದರು.
ಕವಿ,ಬರಹಗಾರರು ಸಮಾಜದ ಆಸ್ತಿ. ಇವರು ವಿಕೃತ ಸಾಹಿತ್ಯ ರಚನೆ ಮಾಡದೇ ಸಮಾಜಕ್ಕೆ ಉತ್ತಮ ಸಂದೇಶದ, ಶ್ರೀಮಂತ ಹೃದಯದ ಸಾಹಿತ್ಯವನ್ನು ರಚಿಸಬೇಕು. ಸಂಸ್ಕ್ರತಿಯನ್ನು ಉಳಿಸುವ ಜವಾಬ್ದಾರಿ ಇವರ ಮೇಲಿದೆ. ಪ್ರಶಸ್ತಿ ದೊಡ್ಡದಲ್ಲ. ಸಾಧನೆ ದೊಡ್ದದು. ಈ ನಿಟ್ಟಿನಲ್ಲಿ ಅನೇಕ ಸಾಧಕರಿಗೆ ಸಂಘವು ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಸರ್ಕಾರವು ನಮಗೂ ಐಡಿ ಕಾರ್ಡ್ ವಿತರಣೆ ಮುಂದಾಗಬೇಕು. ಜು.4 ಕ್ಕೆ ಸಂಘಕ್ಕೆ ಒಂದು ವರ್ಷ ಪೂರ್ಣವಾಗಲಿದೆ. ಅಂದು ನಡೆಯಲಿರುವ ವಾರ್ಷಿಕೋತ್ಸವಕ್ಕೆ ಸಂಘದ ಎಲ್ಲ ಸದಸ್ಯರು, ಕಲಾವಿದರು ಆಗಮಿಸಿ ಸಮಸ್ಯೆಗಳ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ತರೋಣ. ಜು.5 ರಂದು ಗದಗದಲ್ಲಿ ಪುಟ್ಟರಾಜ ಗವಾಯಿಗಳ ಅಜ್ಜನ ಜಾತ್ರೆ ಇದೆ. ಈ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕೆಂದರು.
ಸಂಘದ ಗೌರವಾಧ್ಯಕ್ಷ ಡಿ.ಆರ್.ಪೂಜಾರಿ ಮಾತನಾಡಿ, ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಪುಟ್ಟರಾಜ ಗವಾಯಿಗಳು ಕಲೆ ಬೀಜ ಬಿತ್ತಿದ್ದಾರೆ. ಕಲಾವಿದರು ತಮ್ಮ ಕೀರ್ತಿ ಉಳಿಸಿಕೊಳ್ಳುವಂತಿರಬೇಕು. ಕವಿ-ಕಲಾವಿದರ ಸಮಸ್ಯೆಗಳ ಪರಿಹಾರಕ್ಕೆ ಸಂಘವು ಸದಾ ಬದ್ಧ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಮಾತನಾಡಿ, ಡಾ.ರಾಜಕುಮಾರ ಅವರು ರಂಗಭೂಮಿಯಿಂದ ಬಂದು ವರನಟರಾಗಿ ಅಜರಾಮರವಾಗಿದ್ದಾರೆ. ಕಲೆ ಉಳಿಸಲು ಇಂತಹ ಸಂಘಟನೆ ಅಗತ್ಯವಿದೆ. ಹೆಸರಾಂತ ನಾಟಕಗಳು ಸದಾ ಜನರ ಮನಸ್ಸಿನಲ್ಲಿರುತ್ತವೆ. ಕಲೆಯನ್ನು ಉಳಿಸಿ ಬೆಳೆಸಬೇಕೆಂದರು.
ಸಂಘದ ಕಾರ್ಯಾಧ್ಯಕ್ಷ ಗುರಪ್ಪ ಪಾಟೀಲ, ಡಾ.ರಾಘವೇಂದ್ರ ಉಮರಗಿ, ಪುಂಡಲಿಂಗ ಹೂಗಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜುಗೌಡ ನಾಡಗೌಡ, ದತ್ತಾತ್ರೇಯ ಹೊಸಮಠ, ಬಸನಗೌಡ ಪಾಟೀಲ, ಅಪ್ಪುಗೌಡ ಬಿರಾದಾರ, ಅಶೋಕ ಚಲವಾದಿ, ಪ್ರೇಮಕುಮಾರ ರಾಯಪ್ಪಗೋಳ, ಜಗದೀಶ ಪಾಟೀಲ,ಶಿವಾನಂದ ಡೋಣೂರ ಇತರರು ಇದ್ದರು.
ಕಲಾವಿದರಾದ ಸಂಗಮೇಶ ಉಪ್ಪಲದಿನ್ನಿ, ನೀತಾ ಮೈಂದರ್ಗಿ, ಶೈಲಚಾ ದುಡನಕೇರಿ, ವಿದ್ಯಾಶ್ರೀ ನಡಗಡ್ಡಿ ಅವರು ತಮ್ಮ ಕಲಾ ಪ್ರದರ್ಶಿಸಿದರು. ಸಂಘದ ಜಿಲ್ಲಾಧ್ಯಕ್ಷ ವೈ.ಎಚ್.ಅಂಗಡಗೇರಿ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಿದ್ದಪ್ಪ ಅಲಗೊಂಡ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಂಕರಗೌಡ ಬಿರಾದಾರ, ಕಲ್ಲು ಸೊನ್ನದ, ಅಶೋಕ ಹಾರಿವಾಳ, ಪ್ರಕಾಶ ಬೆಣ್ಣೂರ, ಬಸವರಾಜ ನಂದಿಹಾಳ, ಸಂಗಮೇಶ ಕುಂಬಾರ, ನೀತಾ ಮೈಂದರ್ಗಿ, ದೇವೇಂದ್ರ ಗೋನಾಳ, ಮುತ್ತರಾಜ ಬಾಗೇವಾಡಿ, ಶಿವಾನಂದ ಬಡಿಗೇರ ಸೇರಿದಂತೆ ಅನೇಕರಿಗೆ ವಿವಿಧ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕವಿಗಳ ನೆನಪು ಮನದಂಗಳದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು.
ಸಮಾರಂಭಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಗಾನಯೋಗಿ ಡಾ.ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ವಿವಿಧ ಕಲಾ ತಂಡದೊಂದಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ತಲುಪಿತು.

