ವಿಜಯಪುರದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿಯ 19ನೇ ವಾರ್ಷಿಕೋತ್ಸವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರದಿಂದ ಸಿದ್ದಸಿರಿ ಸೌಹಾರ್ದ ಸಹಕಾರಿ ರೂ. 4117.94 ಕೋಟಿ ಠೇವಣಿ ಹೊಂದಿದ್ದು, 2024-25ನೇ ಸಾಲಿನಲ್ಲಿ ರೂ.26,14,11,111 ನಿವ್ವಳ ಲಾಭ ಗಳಿಸಿದೆ ಎಂದು ಸೌಹಾರ್ದದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 19ನೇ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲೇ ನಂಬರ್-1 ಸೌಹಾರ್ದ ಸ್ಥಾನದಲ್ಲಿರುವ ನಮ್ಮ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ, ಪ್ರಸಕ್ತ ವರ್ಷ ಶೇ 18 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಹಕಾರಿಯ ಶೇರು ಬಂಡವಾಳ ರೂ.67.80 ಕೋಟಿ, ದುಡಿಯುವ ಬಂಡವಾಳ ರೂ.4549.37 ಕೋಟಿ ಇದ್ದು, ಠೇವಣಿಗಳು ರೂ.4117.94 ಕೋಟಿ, ಸಾಲವ ಮುಂಗಡ ರೂ.3038.59 ಕೋಟಿ, ಕಾಯ್ದಿಟ್ಟ ನಿಧಿ ರೂ.85.67 ಕೋಟಿ, ನಿಶ್ಚಿತ ಆಸ್ತಿಗಳು ರೂ.49.33 ಕೋಟಿ, ಹೂಡಿಕೆಗಳು ರೂ.389.12 ಕೋಟಿ ಹೊಂದಿದೆ. ರಾಜ್ಯಾದ್ಯಂತ ಸಂಪೂರ್ಣ ಗಣಕೀಕೃತ 211 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 17 ಸ್ವಂತ ಕಟ್ಟಡಗಳು, 24 ಖಾಲಿ ನಿವೇಶನ ನಗಳನ್ನು ಹೊಂದಿದೆ. 81,923 ಸದಸ್ಯರು ಇರುತ್ತಾರೆ ಎಂದರು.
ಸಹಕಾರಿಯಿಂದ ಇತರೆ ಸೇವೆಗಳು
ಸಿದ್ದಸಿರಿ ರೈತರ ಉಗ್ರಾಣ, ಸಿದ್ದಸಿರಿ ಇಂಧನ ಕೇಂದ್ರ, ವಿಜಯಪುರ, ಸಿಂದಗಿ, ಬಬಲೇಶ್ವರ, ಬಿಜ್ಜರಗಿ, ಝಳಕಿ, ಚಿಂಚೋಳಿಯಲ್ಲಿ ಸಿದ್ದಸಿರಿ ಕೃಷಿ ಕೇಂದ್ರಗಳು ಸ್ಥಾಪನೆ. ವಿಜಯಪುರದಲ್ಲಿ 5 ಸಾವಿರ ಮೆಟ್ರಿಕ್ ಟನ್ ಸಾಮಾರ್ಥ್ಯದ ಸಿದ್ದಸಿರಿ ಶೀತಲ ಘಟಕ ಮತ್ತು ಸಂಸ್ಕರಣ ಘಟಕ, 22 ಸಿದ್ದಸಿರಿ ಇ- ಸ್ಟಾಂಪ್ ಕೇಂದ್ರಗಳು, ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸಿದ್ದಸಿರಿ ಎಥೆನಾಲ್ ಮತ್ತು ಪವರ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಈಚೆಗೆ ನಿಧನರಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಹಿತ್ಯ, ಕಲಾ, ಸಹಕಾರ ಮತ್ತು ಧಾರ್ಮಿಕ ಕ್ಷೇತ್ರಗಳ ಗಣ್ಯಮಾನ್ಯರಿಗೆ, ಬ್ಯಾಂಕಿನ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ, ಸಿದ್ದಸಿರಿ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವಿಜಯಕುಮಾರ್ ಚವ್ಹಾಣ, ಅಶೋಕಗೌಡ ತೊರವಿ, ಶೈಲಜಾ ಪಾಟೀಲ, ಸೀಮಾ ಕೋರೆ, ಸೋಮಶೇಖರ್ ಬಂಡಿ, ಡಾ.ಬಸನಗೌಡ ಪಾಟೀಲ ನಾಗರಾಳ ಹುಲಿ, ಗಣಪತಿ ಜಾಧವ, ವ್ಯವಸ್ಥಾಪಕ ನಿರ್ದೇಶಕರು ಜೋತಿಬಾ ಖಂಡಗಾಳೆ ಉಪಸ್ಥಿತರಿದ್ದರು. ರಾಜಶೇಖರ ಸ್ವಾಮಿ ವರದಿ ವಾಚಿಸಿದರು. ಆರ್.ಟಿ.ಪಾಟೀಲ ವಾದಿಸಿದರು.
ಸಿದ್ದಸಿರಿಯಿಂದ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ದೇಣಿಗೆ
ವಿಜಯಪುರ ನಗರದ ಗಾಂಧಿ ಚೌಕ್ ಠಾಣೆಯಲ್ಲಿ ಸಂಚಾರ ಕಮಾಂಡ್ ಕೇಂದ್ರ ಸ್ಥಾಪನೆಗೆ ರೂ.25 ಲಕ್ಷ ದೆರಣಿಗೆ, ಬರದನಾಡು ವಿಜಯಪುರವನ್ನು ಮಲೆನಾಡನ್ನಾಗಿ ಮಾಡಲು ಹಾಗೂ ಐತಿಹಾಸಿಕ ತಾಣಗಳ ಕುರಿತು ಹೆಚ್ಚಿನ ಪ್ರಚುರಪಡಿಸಲು ವೃಕ್ಷೋತ್ಥಾನ ಹೆರಿಟೇಜ್ ರನ್ ಅಭಿಯಾನಕ್ಕೆ ರೂ.10 ಲಕ್ಷ ದೇಣಿಗೆ, ಶ್ರೀ ಜ್ಞಾನಯೋಗಿ ಶಿವಕುಮಾರ್ ಮಹಾಸ್ವಾಮೀಜಿ ತುಮಕೂರು ಸಿದ್ದಗಂಗಾ ಮಠದ ಅನ್ನದಾಸೋಹಕ್ಕೆ ರೂ.98 ಸಾವಿರ ದೇಣಿಗೆ, ಶುದ್ದ ಕುಡಿಯುವ ನೀರು ಯೋಜನೆಯಡಿ ವಿಜಯಪುರ ನಗರದಲ್ಲಿ 32 ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ವಿಜಯಪುರ ತೋಟಗಾರಿಕಾ ಇಲಾಖೆ ಪಲಪುಷ್ಪ ಪ್ರದರ್ಶನಕ್ಕೆ ರೂ.35 ಸಾವಿರ, ರಸ್ತೆ ಬದಿಗೆ ನೆಡಲಾದ ಗಿಡಗಳ ರಕ್ಷಣೆಗಾಗಿ ಕಬ್ಬಿಣದ ಜಾಳಗಿ ಅಳವಡಿಸಲು ಅರಣ್ಯ ಇಲಾಖೆಗೆ ರೂ.10 ಲಕ್ಷ ದೇಣಿಗೆ ನೀಡಲಾಗಿದೆ.

