ಸೇತುವೆ ದುರಸ್ತಿಗೊಳಿಸದಿದ್ದರೆ ಗ್ರಾಮಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿ ಒಂದು ಕಡೆಯಿಂದ ಕುಸಿಯುತ್ತಾ ಬರುತ್ತಿರುವ, ಅನೇಕ ಅನಾಹುತಗಳಿಗೆ ಕಾರಣವಾಗಿರುವ, ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದಲ್ಲಿರುವ ಕಿರಿದಾದ ಎರಡು ಸೇತುವೆಗಳನ್ನು ದುರಸ್ತಿಗೊಳಿಸದಿದ್ದರೆ, ಸಂಬಂಧಪಟ್ಟ ಇಲಾಖೆ ಕಚೇರಿ ಎದುರು ಧರಣಿ ನಡೆಸಲು ಶೀರನಹುಂಡಿ ಗ್ರಾಮಸ್ಥರು ಮುಂದಾಗಿದ್ದಾರೆ.
ತಾಲೂಕಿನ ಶೀರನಹುಂಡಿ ಗ್ರಾಮದ ಬಳಿ ಎರಡು ಕಿರಿದಾದ ಸೇತುವೆಗಳಿವೆ. ಒಂದು ಸೇತುವೆ ಶೀರನಹುಂಡಿಯಿಂದ ನಾಗನಹಳ್ಳಿ, ಮಾಚನಾಯಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿದರೆ, ಮತ್ತೊಂದು ಸೇತುವೆ, ಮೈಸೂರು-ಮಾನಂದವಾಡಿ (ಅಂತರಸಂತೆ)ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಈ ಎರಡು ಸೇತುವೆಗಳ ಮೂಲಕವೇ ಕೆಎಸ್ ಆರ್ ಟಿಸಿ ಬಸ್ ಸೇರಿದಂತೆ ವಾಹನಗಳು ಓಡಾಡುತ್ತವೆ. ಆದರೆ ಈ ಎರಡು ಸೇತುವೆಗಳು ಬಹಳ ಹಳೆಯದಾಗಿದ್ದು, ಬಹಳ ಕಿರಿದಾಗಿದ್ದು ಕುಸಿಯುತ್ತಾ ಬರುತ್ತಿದೆ. ಸೇತುವೆಗೆ ಅಡ್ಡಲಾಗಿರುವ ತಡೆಗೋಡೆ ಕೂಡ ಕುಸಿದು ಬಿದ್ದಿದ್ದು, ಜನರು ಜೀವ ಭಯದಲ್ಲೇ ಓಡಾಡಬೇಕಾಗಿದೆ. ರಾತ್ರಿ ವೇಳೆ ವಾಹನ ಸವಾರರು ಈ ಸೇತುವೆಗಳ ಮೇಲೆ ಸಂಚರಿಸಲು ಹಿಂದೇಟು ಹಾಕುತ್ತಾರೆ. ಒಂದು ಕ್ಷಣ ಎಚ್ಚರ ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಪರ್ಯಾಯ ಮಾರ್ಗವಿಲ್ಲದೆ ಈ ಸೇತುವೆಗಳ ಮೂಲಕವೇ ಶೀರನಹುಂಡಿ ಗ್ರಾಮಸ್ಥರು ಜಮೀನುಗಳಿಗೆ, ಪಕ್ಕದ ಗ್ರಾಮಗಳಿಗೆ ಹೋಗಬೇಕಾಗಿದೆ. ಅಲ್ಲದೆ ರಸ್ತೆಗಳು ಕೂಡ ಹದಗೆಟ್ಟಿದ್ದು, ಶಾಪ ಹಾಕಿಕೊಂಡೆ ಓಡಾಡುವಂತಾಗಿದೆ.
ಸುಂದ್ರೇಶ್, ಕೆಂಡಗಣಸ್ವಾಮಿ ಎಸ್ ಪಿ , ರಂಗರಾಜೇಗೌಡ, ಪುಟ್ಟೇಗೌಡ, ಮಂಜುನಾಥ, ಚಂದ್ರಶೇಖರ್ ಎಸ್ ಎನ್, ಮಾದೇವ, ಸಂತೋಷ್ ಕುಮಾರ್, ಶ್ರೀನಿವಾಸ, ಲಿಂಗರಾಜು, ಮಂಜು ಎಸ್, ನಾಗರಾಜು ಎಲ್, ನಿಂಗರಾಜು ಬಿ. ಸೇರಿದಂತೆ ಗ್ರಾಮದ ಯಜಮಾನವರು, ಮುಖಂಡರು, ಯುವಕರು ಇದ್ದರು.
ಮನವಿಗೆ ಕ್ಯಾರೆ ಎನ್ನದ ಜನಪ್ರತಿನಿಧಿಗಳು & ಅಧಿಕಾರಿಗಳು
ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಸೇತುವೆಗಳನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು, ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು, ಸಂಸದ ಸುನಿಲ್ ಬೋಸ್ ಅವರ ಗಮನಕ್ಕೂ ಕೂಡ ತರಲಾಗಿದೆ. ಮನವಿ ಪತ್ರ ಸ್ವೀಕರಿಸಿ ಅಧಿಕಾರಿಗಳು ಸುಮ್ಮನಾದರೆ, ಶಾಸಕರು, ಸಂಸದರು, ದುರಸ್ತಿಗೊಳಿಸುವುದಾಗಿ ಭರವಸೆ ಕೊಡುತ್ತಾರೋ ಹೊರತು, ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡೋದಾಗಿ ವಕೀಲರೂ ಆದ ಸುಂದ್ರೇಶ್ ಎಚ್ಚರಿಕೆ ನೀಡಿದ್ದಾರೆ.
“ಶೀರನಹುಂಡಿ ಗ್ರಾಮದ ರೈತರು ಜಮೀನುಗಳಿಗೆ ತೆರಳಲು ತಾರಕ ಬಲದಂಡೆ ನಾಲೆಯ ಮುಖಾಂತರವೇ ಹಾದುಹೋಗಬೇಕಾಗಿದೆ. ಆದರೆ ಸೇತುವೆಗಳು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದು, ಶಾಲಾ ಮಕ್ಕಳಿಗೂ ಕೂಡ ತುಂಬಾ ತೊಂದರೆಯಾಗಿದೆ. ಸೇತುವೆ ರಸ್ತೆ ಬಹಳ ಕಿರಿದಾಗಿರುವುದರಿಂದ ಊರಿನೊಳಗೆ ಸಾರಿಗೆ ಬಸ್ ಕೂಡ ಬರುತ್ತಿಲ್ಲ.”
– ಕೆಂಡಗಣಸ್ವಾಮಿ ಎಸ್ ಪಿ

