ನಾಗಠಾಣ ಶಾಸಕ ವಿಠಲ ಕಟಕದೊಂಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೫ ವರ್ಷದೊಳಗಿನ ಮಕ್ಕಳ ಆರೋಗ್ಯಯುತ ಬೆಳವಣಿಗೆಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವುದು ಅಗತ್ಯವಾಗಿದೆ. ಎಲ್ಲ ಪಾಲಕರು ನಿರ್ಲಕ್ಷ್ಯ ತೋರದೆ ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆ ತಂದು ಲಸಿಕೆ ಹಾಕಿಸುವ ಮೂಲಕ ಅವರಿಗೆ ಆರೋಗ್ಯ ಸಂಪತ್ತು ಕಲ್ಪಿಸಬೇಕು ಎಂದು ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದರ್ಗಾ ಸಹಯೋಗದಲ್ಲಿ ಇತ್ತಿಚಿಗೆ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೊಲಿಯೋ ಹನಿ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತಿಚಿಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಎಲ್ಲ ತಾಯಂದಿರು ಪ್ರತಿ ವರ್ಷ ಆರೋಗ್ಯ ತಪಾಸಣೆಗೆ ಒಗಳಗಾಗಬೇಕು. ಜಿಲ್ಲೆಯ ೦-೫ ವರ್ಷದೊಳಗಿನ ಮಕ್ಕಳ ಗುರಿ-೨೯೩೫೧೯ ಇದ್ದು, ಅದಕ್ಕಾಗಿ ಪೋಲಿಯೋ ಬೂತ್ಸಂಖ್ಯೆ-೧೩೨೬ ರಚಿಸಿದ್ದು, ಇದರಲ್ಲಿ ೩೧ ಸಂಚಾರಿ ತಂಡಗಳು ಮತ್ತು ಟ್ರಾಂಜಟ್-೪೧ ತಂಡಗಳನ್ನು ಒಳಗೊಂಡಿದೆ. ಪೋಲಿಯೋ ನಿರ್ಮೂಲನೆಯಲ್ಲಿ ದೇಶ ಗಣನೀಯ ಸಾಧನೆ ಮಾಡಿದೆ. ಈ ನಿಟ್ಟಿನಲ್ಲಿ ಪೋಲಿಯೋ ನಿರ್ಮೂಲನೆಗೆ ಜಿಲ್ಲಾದ್ಯಾಂತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯಾವುದೇ ಮಗು ಪೊಲಿಯೋ ಲಸಿಕೆಯಿಂದ ವಂಚಿತವಾಗದೇ ನೋಡಿಕೊಳ್ಳಬೇಕು. ಅದರೊಂದಿಗೆ ನಿಗದಿತ ಗುರಿ ಸಾಧಿಸುವಂತೆ ಮತ್ತು ನಮ್ಮ ಜಿಲ್ಲೆಯು ದೇಶದಲ್ಲಿ ಲಸಿಕೆ ನೀಡುವದರಲ್ಲಿ ಪ್ರಥಮ ಆಗಬೇಕು ಎಂದರು.
ಮಹಾನಗರ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ ಮಾತನಾಡಿ, ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಪಾತ್ರ ಬಹಳ ಮುಖ್ಯ. ಎಲ್ಲರೂ ಬದ್ದತೆಯಿಂದ ಕಾರ್ಯನಿರ್ವಹಿಸಿ ಪೋಲಿಯೋ ನಿರ್ಮೂಲನೆಗೆ ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿಗಳಾದ ಡಾ. ಶ್ರೀನಿವಾಸ ಎಸ್ ಆರ್, ಡಬ್ಲ್ಯೂಏಚ್ಓ ಸರ್ವೇಕ್ಷಣ ಅಧಿಕಾರಿ ಡಾ.ಮುಕುಂದ ಗಲಗಲಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ. ಪರಶುರಾಮ ಹಿಟ್ನಳ್ಳಿ, ಡಾ. ಅಪ್ಪಾಸಾಹೇಬ ಇನಾಮದಾರ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಕೆ.ಡಿ.ಗುಂಡಬಾವಡಿ, ಡಾ. ಶೈಲೇಜಾ ಶಿವಶರಣ, ದರ್ಗಾ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ. ಎಂ. ಕೋಲೂರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುರೇಶ ಹೊಸಮನಿ, ಡಿಜೆಡಿ ಬೆಳಗಾವಿ ವಿಭಾಗ, ಬೆಳಗಾವಿ, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಕಾರ್ಯಕರ್ತೆಯರು ಭಾಗವಹಿಸಿದ್ದರು.

