ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸದೃಢ ದೇಹವಿದ್ದಲ್ಲಿ, ಸದೃಢ ಮನಸ್ಸಿರುತ್ತದೆ. ಸದೃಢ ಮನಸ್ಸಿದ್ದಲ್ಲಿ ಯಶಸ್ಸು ಗಟ್ಟಿಯಾಗಿರುತ್ತದೆ. ಸಮಾಜದಲ್ಲಿ ರಾಜಕೀಯ ಮತ್ತು ಸಾಮಾಜಿಕ ವ್ಯಕ್ತಿಗಳಿಗಿಂತ ಕ್ರೀಡಾ ಪಟುಗಳಿಗೆ ಹೆಚ್ಚಿನ ಜನಪ್ರೀಯತೆ ಇದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಆರ್.ಡಿಪಾಟೀಲ ಕಾಲೇಜಿನ ಆರ್.ಬಿ.ಬೂದಿಹಾಳ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ವಿಜಯಪುರ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಹಾಗೂ ಆರ್.ಪಾಟೀಲ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ೨೦೨೫-೨೬ನೆಯ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಹ್ಯಾಂಡಬಾಲ್, ನೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಟೆನಿಸ್, ವಾಲಿಬಾಲ್ ಹಾಗೂ ಜಿಮ್ನಾಸ್ಟಿಕ್ಸ್ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಹೆಸರನ್ನು ಕೊಂಡೊಯ್ಯುವಲ್ಲಿ ಕ್ರೀಡಾ ಪಟುಗಳು ಪ್ರಮುಖ ಪಾತ್ರವಹಿಸುತ್ತಾರೆ. ಕ್ರೀಡಾಭಿಮಾನ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಹ್ಯಾಂಡಬಾಲ್, ನೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಟೆನಿಸ್, ವಾಲಿಬಾಲ್ ಹಾಗೂ ಜಿಮ್ನಾಸ್ಟಿಕ್ಸ್ ನಂತಹ ಕ್ರೀಡೆಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಈ ವೇಳೆ ನಿರ್ಣಾಯಕರಾಗಿ ಆಗಮಿಸಿದ ಹೊಸಪೇಟೆಯ ಮಾತಾ ಪಪೂ ಕಾಲೇಜಿನ ದೈಹಿಕ ಉಪನ್ಯಾಸಕ ನಬಿರಸೂಲ್ ಮಾತನಾಡಿ, ಖಾಲಿಯಿರುವ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಾಸಕ ಮನಗೂಳಿ ಅವರು ಸದನದಲ್ಲಿ ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ ಸಂಸ್ಥೆಯ ಚೇರಮನ್ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಸಮ್ಮುಖ ವಹಿಸಿದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ವೇದಿಕೆಯ ಮೇಲೆ ಕೆ.ಎಚ್.ಸೋಮಾಪೂರ, ಶಾಂತು ದುರ್ಗಿ, ಹುಬ್ಬಳ್ಳಿಯ ಭೀಮೇಶ ಎಸ್ ಇದ್ದರು.
ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕ ಗವಿಸಿದ್ದಪ್ಪ ಆನೆಗುಂದಿ, ಎಸ್.ಎಂ.ಬಿರಾದಾರ, ಡಾ.ರವಿ ಗೋಲಾ, ಡಾ.ಶರಣಬಸವ ಜೋಗೂರ, ಸತೀಶ ಬಸರಕೂಡ, ಎಸ್.ಎಂ.ಪೂಜಾರಿ, ವ್ಹಿ.ಡಿ.ಪಾಟೀಲ, ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಸುನೀಲ ಪಾಟೀಲ, ಪ್ರಸನ್ನ ಜೋಗೂರ, ಎಸ್.ಎಸ್.ತಾಳಿಕೋಟಿ, ಶಿವಶರಣ ಬೂದಿಹಾಳ, ಶಿವರಾಜ ಕುಂದಗೋಳ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ರಾಹುಲ ನಾರಾಯಣಕರ್, ಸ್ನೇಹಾ ಕುಲಕರ್ಣಿ, ಸ್ನೇಹಾ ಧರಿ, ಲಕ್ಷ್ಮಿ ಕನ್ನೋಳ್ಳಿ, ಎಸ್.ಎಸ್.ಹೂಗಾರ, ರಾಹುಲ ದಾಸರ್, ಐ.ಎಸ್.ಸಿಂಪಗೇರ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು. ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಸ್ವಾಗತಿಸಿದರು. ಯಶೋಧ ಗೌರಿ ಪ್ರಾರ್ಥಿಸಿದರು. ಪ್ರಸನ್ನಕುಮಾರ ಜೋಗುರ ಶರಣು ಬೂದಿಹಾಳ ನಿರೂಪಿಸಿದರು.

