ಜಮಖಂಡಿ ನಗರ ಠಾಣೆ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಮೆಚ್ಚುಗೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರ ಠಾಣೆ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಬಾಗಲಕೊಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಬೈಕ್ಗಳನ್ನು ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ವಿವಿಧ ಕಂಪನಿಗಳ ಸುಮಾರು ₹11 ಲಕ್ಷ ಮೌಲ್ಯದ 24 ಬೈಕ್ ಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ ಎಂದು ಬಾಗಲಕೊಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೊಯಲ್ ತಿಳಿಸಿದರು.ನಗರ ಠಾಣೆ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಮಧುರಖಂಡಿ ಗ್ರಾಮದ ನಿವಾಸಿ ಲಕ್ಕಪ್ಪ ಮಾದರ ಬಂಧಿತ ಆರೋಪಿ.
ಕಳೆದ ಬಾರಿ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು 22 ಬೈಕ್ಗಳನ್ನು ವಶಪಡಿಸಿಕೊಂಡಿದ್ದರು ಎಂದು ತಿಳಿಸಿದರು.
ಜಮಖಂಡಿ ನಗರದ ಹನುಮಾನ ದೇವಸ್ಥಾನದ ಎದುರು ನಿಲ್ಲಿಸಲಾಗಿದ್ದ ತಾಲೂಕಿನ ಸಿದ್ದಾಪುರ ಗ್ರಾಮದ ಯಲ್ಲಪ್ಪ ಕಾಗವಾಡ ಎಂಬುವರ ಬೈಕ್ ಆ.7ರಂದು ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ನಗರ ಠಾಣೆ ಪೊಲೀಸರು ಡಿವೈಎಸ್ಪಿ ಸೈಯದ್ ರೋಷನ್ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ತಾಲೂಕಿನ ಮಧುರಖಂಡಿ ಗ್ರಾಮದ ನಿವಾಸಿ ಲಕ್ಕಪ್ಪ ಮಾದರ ಎಂಬಾತ ಆರೋಪಿಯನ್ನು ಬಂಧಿಸಿ, ಆತನಿಂದ 24 ಬೈಕ್ ವಶಪಡಿಸಿಕೊಂಡಿದ್ದಾರೆ.
ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ, ಬೆಳಗಾವಿ ಜಿಲ್ಲೆಯ ಸವದತ್ತಿ, ಮುರುಗೋಡ, ವಿಜಯಪುರ ಜಿಲ್ಲೆಯ ಬಬಲೇಶ್ವರ, ಗಾಂಧಿಚೌಕ, ಬಸವನಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ವಿಭಾಗದ ಪಿಎಸ್ಐ ಎನ್.ಕೆ. ಕಾಜಗಾರ, ನಗರ ಠಾಣೆ ಪಿಎಸ್ಐ ಅನೀಲ ಕುಂಬಾರ, ಸಿಬ್ಬಂದಿ ಪ್ರಕಾಶ ಹೊಸಮನಿ, ಸಂಗಪ್ಪ ಕೊಠಿ, ಪರಶುರಾಮ ಘಾಟಗೆ, ಮುತ್ತಪ್ಪ ಮಾಂಗ, ರಾಜು ಪೂಜಾರಿ, ರಾಜಶೇಖರ ಮನಗೂಳಿ ತಂಡ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡಕ್ಕೆ ಜಿಲ್ಲಾ ಪೊಲೀಸ್ ವತಿಯಿಂದ ಬಹುಮಾನನೀಡಲಾಗುವುದು ಎಂದು ಹೇಳಿದರು. ಮುಧೋಳ ಸಿಪಿಐ ಸಿರಹಟ್ಟಿ, ಗ್ರಾಮೀಣ ಪಿಎಸ್ಐ ಪೂಜೆರಿ ಇದ್ದರು.

