ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬೊಮ್ಮನಜೋಗಿ ತಾಂಡಾದಲ್ಲಿ ಪ್ರಾಥಮಿಕ ಶಾಲೆಯಿದ್ದು, ಅದನ್ನು ಹೋರಾಟ ಮಾಡಿ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಲು ಗ್ರಾಮಸ್ಥರೆಲ್ಲರೂ ಕಾರ್ಯಪ್ರವೃತ್ತರಾಗಿದ್ದರು ಎಂದು ಎಸ್ಡಿಎಮ್ಸಿ ಅಧ್ಯಕ್ಷ ಅಶೋಕ ನಾಯಕ ಹೇಳಿದರು.
ಮನವಿ ಸಲ್ಲಿಸಿ ಮಾತನಾಡಿದ ಅವರು, ಶಾಲೆಯನ್ನು ಈಗಾಗಲೇ ಸರ್ಕಾರ ಉನ್ನತೀಕರಣ ಮಾಡಿ ಆದೇಶ ಹೊರಡಿಸಿದೆ. ಆದರೆ ಅಧಿಕಾರಿ ವರ್ಗ ಇದನ್ನು ಕೊಂಡಗೂಳಿ ಗ್ರಾಮಕ್ಕೆ ವರ್ಗಾಯಿಸಿರುವುದರಿಂದ ನೋವು ಉಂಟಾಗಿದೆ. ಇಲ್ಲಿ ನೂರಾರು ಮಕ್ಕಳು ಪ್ರೌಢ ಶಿಕ್ಷಣವನ್ನು ಪಡೆಯಲು ಸಿಂದಗಿ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ಅದನ್ನು ನಿಯಂತ್ರಿಸಲು ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿದ್ದೇವೆ. ಇಲ್ಲಿಯ ಮಕ್ಕಳ ಸ್ಥಿತಿ ವ್ಯವಸ್ಥಿತವಾಗಿ ಸಾಗುತ್ತದೆ. ಕೂಡಲೇ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಸರ್ಕಾರ ಆದೇಶ ಮಾಡಿರುವ ಹಾಗೆ ಪ್ರೌಢಶಾಲೆಯನ್ನು ಬೊಮ್ಮನಜೋಗಿ ಪ್ರಾಥಮಿಕ ಶಾಲೆಯಲ್ಲಿಯೇ ಉನ್ನತೀಕರಿಸಬೇಕಾಗಿ ಒತ್ತಾಯ ಮಾಡುತ್ತೇವೆ. ಒಂದು ವೇಳೆ ನಮ್ಮ ನ್ಯಾಯಕ್ಕೆ ತಕ್ಕ ಉತ್ತರ ಸಿಗದೇ ಹೊದ್ದಲ್ಲಿ ಜಿಲ್ಲಾ ಮತ್ತು ತಾಲೂಕಾ ಅಧಿಕಾರಿಗಳ ಕಚೇರಿಯ ಮುಂದೆ ಮಕ್ಕಳೊಂದಿಗೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಮದ ದೇಸು ರಾಠೋಡ, ಆನಂದ ರಾಠೋಡ, ಹೇಗ್ಗು ರಾಠೋಡ, ಭೀಮು ನಾಯಕ, ಕಿಶನ ಪವಾರ, ದಿಲೀಪ ಚವ್ಹಾಣ, ಶಂಕರ ರಾಠೋಡ, ಅರವಿಂದ ನಾಯಕ, ನೀಲು ರಾಠೋಡ, ಕಾಸು ಕಾರಬಾರಿ, ವಿಶ್ವನಾಥ ನಾಯಿಕ, ಅವಿನಾಶ ನಾಯ್ಕ ಸೇರಿದಂತೆ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ ಸದಸ್ಯರು ಇದ್ದರು.

