ಮುದ್ದೇಬಿಹಾಳ: ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಅ.೩ ರಂದು ಬೆಳಿಗ್ಗೆ ೧೧ ಗಂಟೆಗೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರಗೆ ಮನವಿ ಪತ್ರ ಸಲ್ಲಿಸುತ್ತಿದ್ದು, ತಾಲೂಕಿನ ಎಲ್ಲ ದಲಿತ ಬಾಂಧವರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸುವಂತೆ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ವಿನಂತಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುದ್ದೇಬಿಹಾಳ ಹಾಗೂ ನಾಲತವಾಡ ಗ್ರಾಮದಲ್ಲಿನ ಅಂಬೇಡ್ಕರ್ ವೃತ್ತವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಮುದ್ದೇಬಿಹಾಳ ಪಟ್ಟಣದ ಪುರಸಭೆ ಎದುರು ಕಾಯ್ದಿರಿಸಿದ ಜಾಗೆಯನ್ನು ದಲಿತರಿಗೆ ಮೀಸಲಿಡಬೇಕು, ಮೀನುಗಾರರ ಸಾಲ ಮನ್ನಾ ಮಾಡಬೇಕು, ಬಾರ್ ಮಾಲೀಕರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಕಾರಣಕ್ಕಾಗಿ ಅಮಾನತ್ತುಗೊಂಡಿದ್ದ ಅಬಕಾರಿ ನಿರೀಕ್ಷಕಿ ಜ್ಯೋತಿಬಾಯಿ ಮೇತ್ರಿ ಅವರು ಮರಳಿ ಇಲ್ಲಿಗೆ ವರ್ಗಾವಣೆಯಾಗಿ ಬಂದಿರುವುದು ಕಾನೂನುಬಾಹಿರವಾಗಿದ್ದು ಇವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು, ತಾಲೂಕಿನ ಗಂಗೂರ ಗ್ರಾಮದ ರಿ.ಸ.ನಂ ೧೧/೨, ೧೧/೩, ೧೧/೪ ಈ ಜಮೀನುಗಳನ್ನು ಮಾದಿಗ ಸಮಾಜದ ಸ್ಮಶಾನಕ್ಕೆ ಸರ್ಕಾರ ಶೀಘ್ರವಾಗಿ ಖರೀದಿಸಿ ಕೊಡಬೇಕು, ಪಟ್ಟಣದಲ್ಲಿ ಡಾ|| ಬಾಬು ಜಗಜೀವನರಾಂ ಮೂರ್ತಿ ಪ್ರತಿಷ್ಠಾಪಿಸಬೇಕೆನ್ನುವ ಹಕ್ಕೊತ್ತಾಯಗಳನ್ನು ಮುಂದಿಟ್ಟು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು ೧೦೦೦ ಕ್ಕೂ ಹೆಚ್ಚು ದಲಿತ ಬಾಂಧವರು ಸೇರುವ ನಿರೀಕ್ಷೆ ಇದೆ ಎಂದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಚನ್ನಪ್ಪ ವಿಜಯಕರ ಮಾತನಾಡಿ, ಅಂಬೇಡ್ಕರ ವೃತ್ತದಿಂದ ಶುರುವಾಗುವ ಮೆರವಣಿಗೆಯುದ್ದಕ್ಕೂ ತಮಟೆ ಬಾರಿಸುತ್ತ ಪ್ರತಿಭಟಿಸಿ ನಂತರ ಬಹಿರಂಗ ಸಭೆ ನಡೆಸಿ ಮನವಿ ಸಲ್ಲಿಸಲಾಗುವದು ಎಂದರು.
ಈ ವೇಳೆ ಸಿದ್ದು ಕಟ್ಟಿಮನಿ, ಶ್ರೀಶೈಲ ಹಿಪ್ಪರಗಿ, ದುರ್ಗಪ್ಪ ಲೊಟಗೇರಿ, ಶೇಖರ ಚಲವಾದಿ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment