ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಗತಿಯಲ್ಲಿ ನಡೆಯುತ್ತಿವೆ. ಆದರೆ, ಅಭಿವೃದ್ಧಿಯ ಜೊತೆ ಜೊತೆಗೆ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆಯಾದಾಗ ಮಾತ್ರ ರಾಜ್ಯ, ದೇಶ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನಕ್ಕೇರುವದರಲ್ಲಿ ಸಂಶಯವಿಲ್ಲ ಎಂದು ಶಾಸಕ ವಿಠ್ಠಲ ಕಟಕಧೋಂಡ ಅವರು ಹೇಳಿದರು.
ತಾಲೂಕಾಡಳಿತ ವತಿಯಿಂದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ೭೯ನೇ ಸ್ವಾತಂತ್ರೊತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಡಚಣ ಏತ ನೀರಾವರಿ ಬಗ್ಗೆ ಮಾತನಾಡಿದ ಅವರು ೨೧೦೦೦ ಹೆಕ್ಟೆರ್ ಜಮೀನಗಳು ೨೦೧೩ ರಲ್ಲಿ ನೀರಾವರಿ ಆಗಬೇಕಿತ್ತು ಆದರೆ ಕಾಂಟ್ರ್ಯಕ್ಟರ್ ಹಾಗೂ ಸರಕಾರಿ ಅಧಿಕಾರಿಗಳು ಈ ಭಾಗದ ರೈತರಿಗೆ ಮೋಸ ಮಾಡಿದ್ದಾರೆ ಎಂದರು.
ಧ್ವಜಾರೋಹಣ ನೆರವೇರಿಸಿ, ಪ್ರಾಸ್ತಾವಿಕವಾಗಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ರವಿಕುಮಾರ ಅರಳಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ತಾ.ಪಂ. ವತಿಯಿಂದ ಅಂಗವಿಕಲರಿಗೆ ೨೦೨೪-೨೫ನೇ ಸಾಲಿನ ೮ ತ್ರಿಚಕ್ರ ವಾಹನಗಳನ್ನು ಶಾಸಕ ವಿಠ್ಠಲ ಕಟಕಧೋಂಡ ಅವರು ಹಸ್ತಾಂತರಿಸಿದರು.
ಮಾಜಿ ಸೈನಿಕ ರವಿ ಕುಲಕರ್ಣಿ ಅವರನ್ನು ಶಾಸಕ ವಿಠ್ಠಲ ಕಟಕಧೋಂಡ ಸನ್ಮಾನಿಸಿದರು.
ನಂತರ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯ ಮೇಲೆ ತಾ.ಪಂ. ಇಓ ಸಂಜಯ ಖಡಗೇಕರ, ಪ.ಪಂ. ಮುಖ್ಯಾಧಿಕಾರಿ ಬಾಬಾಸಾಹೇಬ ತಾವಸೆ, ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ, ಸಿ.ಪಿ.ಐ. ಸುರೇಶ ಬೆಂಡಗುಂಬಳ, ಬಿಇಓ ಬಸವರಾಜ ನಾಡಗೇರಿ, ಉಪಖಜಾನಾಧಿಕಾರಿ ರಮೇಶ ವಾಲಿಕಾರ, ಪಂಚ ಗ್ಯಾರಂಟಿ ತಾಲೂಕಾ ಅಧ್ಯಕ್ಷ ರವಿ ಜಾಧವ, ಕೆ.ಡಿ.ಪಿ. ಸದಸ್ಯರಾದ ಶಿವಣ್ಣ ಪಾಂಡ್ರೆ, ರವಿ ಬಿರಾದಾರ, ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ ಸೇರಿದಂತೆ ಪ.ಪಂ.ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

