ಶಾಸಕ ಯತ್ನಾಳರ ಚಿತ್ರವಿದ್ದ ಬ್ಯಾನರ್ ಹರಿದ ಪ್ರಕರಣ | ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರಿಂದ ಮನವಿ
ವಿಜಯಪುರ: ಈದ್ ಮಿಲಾದ್ ಮೆರವಣಿಗೆ ವೇಳೆ ಗಣೇಶೋತ್ಸವ ಅಂಗವಾಗಿ ವಿಜಯಪುರದ ಶಿವಾಜಿ ವೃತ್ತದಲ್ಲಿ ಹಾಕಲಾಗಿದ್ದ ಗಣೇಶ, ಶಿವಾಜಿ ಮಹಾರಾಜ ಹಾಗೂ ನಗರ ಶಾಸಕರ ಭಾವಚಿತ್ರ ಒಳಗೊಂಡಿರುವ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳನ್ನು ಗುಂಡಾ ಆಕ್ಟ್ ಅಡಿ ಬಂಧಿಸಿ, ಗಡಿಪಾರು ಮಾಡುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು ಜಂಟಿಯಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ ಮಾತನಾಡಿ, ಸೆ.೨೮ ರಂದು ಗುರುವಾರ ನಡೆದ ಈದ್-ಮಿಲಾದ್ ಆಚರಣೆಯ ಮೆರವಣಿಗೆ ಸಂದರ್ಭದಲ್ಲಿ, ಗಣೇಶೋತ್ಸವದ ಅಂಗವಾಗಿ ನಗರದ ಶಿವಾಜಿ ಚೌಕ್ ನಲ್ಲಿ ಶುಭಾಶಯ ಕೋರಲು ಹಾಕಲಾಗಿದ್ದ ಹಿಂದೂಗಳ ಆರಾಧಕ ಗಣೇಶ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ವಿಜಯಪುರ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಭಾವಚಿತ್ರಗಳು ಇರುವ ಬ್ಯಾನರನ್ನು ಕೆಲವು ಕಿಡಗೇಡಿಗಳು ಹರಿದು ಹಾಕುವ ಮೂಲಕ ಹಿಂದೂಗಳ ಭಾವನೆಗೆ ದಕ್ಕೆ ತಂದಿರುವುದು ಖಂಡನೀಯ.
ಈದ್ ಮಿಲಾದ್ ಮೆರವಣಿಗೆ ವೇಳೆ ಶಾಂತಿ ನೆಲೆಸಿರುವ ವಿಜಯಪುರ ನಗರದಲ್ಲಿ ಹಾಡುಹಗಲೇ ಇಂತಹ ಹೀನ ಕೃತ್ಯ ನಡೆದಿರುವುದನ್ನು ನೋಡಿದರೆ ಶಾಂತಿ ಕದಡುವುದೇ ಕಿಡಗೇಡಿಗಳ ದುರುದ್ದೇಶ ಎಂಬುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ಜವಾಹಾರ ಗೋಸಾವಿ, ಮುಖಂಡರಾದ ರಾಜೇಶ ದೇವಗಿರಿ, ಮಹೇಶ ಒಡೆಯರ, ಸಂತೋಷ ಪಾಟೀಲ, ಲಕ್ಷ್ಮಣ ಜಾಧವ, ಅಶೋಕ ಬೆಲ್ಲದ, ಶರಣು ಕಾಖಂಡಕಿ, ಬಸವರಾಜ ಕೋರಿ, ಸಚಿನ ಕುಮಸಿ, ಸಿದ್ದು ಬೆಲ್ಲದ, ಗಿರೀಶ ಪಾಟೀಲ, ಭರತ ಕೋಳಿ, ಪಾಫುಸಿಂಗ್ ರಜಪೂತ, ವಿಜಯ ಜೋಶಿ, ಬಾಬು ಶಿರಶ್ಯಾಡ ಸೇರಿದಂತೆ ಮತ್ತಿತರರು ಇದ್ದರು.

