ಸಿಂದಗಿಯಲ್ಲಿ ಸಾಹಿತಿ ಕೆ.ಎಚ್.ಸೋಮಾಪೂರ ಅವರ ೧೩ನೇ ಕೃತಿ ’ಬಿಚ್ಚುಗತ್ತಿ’ ಗ್ರಂಥ ಲೋಕಾರ್ಪಣೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಕ ವರ್ಗ ಕೌಶಲ್ಯ ಆಧಾರಿತ ಜ್ಞಾನ ನೀಡುವುದು ಇಂದು ಅವಶ್ಯವಾಗಿದೆ. ತಂತ್ರಜ್ಞಾನ ಅತ್ಯಂತ ವೇಗವಾಗಿ ಸಾಗುತ್ತಿದೆ. ವಿದ್ಯಾರ್ಥಿಗಳು ಪದವಿ ಪಡೆದರೆ ಸಾಲದು ಅದರೊಂದಿಗೆ ಸ್ವಯಾರ್ಜಿತ ಶಕ್ತಿ ಸಾಮಥ್ಯವನ್ನು ಬೆಳೆಸಿಕೊಂಡು ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬೆಳಗಾಂವ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಸಿ.ಎಂ.ತ್ಯಾಗರಾಜ ಅವರು ಹೇಳಿದರು.
ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಥಕ ಸಂಸ್ಥೆ, ಸಾರಂಗಮಠದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು, ಮಾತೋಶ್ರೀ ಗುರುಬಸಮ್ಮ ಹ.ಸೋಮಾಪೂರ ಸೇವಾ ಸಂಸ್ಥೆ ಹಾಗೂ ಲಾಯನ್ಸ್ ಕ್ಲಬ್ ಸಿಂದಗಿ ಇವುಗಳ ಸಹಯೋಗದಲ್ಲಿ ಸಾಹಿತಿ ಕೆ.ಎಚ್.ಸೋಮಾಪೂರ ಅವರ ೧೩ನೇ ಕೃತಿ ಬಿಚ್ಚುಗತ್ತಿ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ಪದವಿ ಮುಖ್ಯವಲ್ಲ ಅದರ ಜೊತೆಗೆ ಕೌಶಲ್ಯ ಆಧಾರಿತ ಜ್ಞಾನ ಮುಖ್ಯ ಎಂದ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಶಿಕ್ಷಣವನ್ನು ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ ಮುಂದಿನ ದಿನಮಾನಗಳಲ್ಲಿ ಈ ಸಂಸ್ಥೆಯಲ್ಲಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಡಿಜಟಲಿಕರಣ್ ಕೇಂದ್ರವನ್ನು ಸ್ಥಾಪನೆ ಮಾಡುವ ಯೋಜನೆ ಇದೆ ಎಂದರು.
ವೇಳೆ ಧಾರವಾಡದ ಹಿರಿಯ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಗ್ರಂಥವನ್ನು ಅವಲೋಕಿಸಿ ಮಾತನಾಡಿ, ಕವಿಯಾದವನಿಗೆ ಒಂದು ಪರಿಕಲ್ಪನೆಯನ್ನು ವಿಭಿನ್ನವಾಗಿ ಆಲೋಚಿಸುವ, ವಿವೇಚಿಸುವ ಮತ್ತು ವಿಮರ್ಷಿಸುವ ಗುಣ ಇರುವುದರಿಂದ ಸಾಹಿತ್ಯ ಚೆನ್ನಾಗಿ ಮೂಡಿ ಬರುತ್ತದೆ. ಕಾವ್ಯಾನುಭವ, ಅಭ್ಯಾಸದ ಬಲದಿಂದ ರೂಪಗೊಳ್ಳುತ್ತದೆ. ಆ ಹಿನ್ನಲೆಯಲ್ಲಿ ಕೆ.ಎಚ್.ಸೋಮಾಪೂರ ಅವರು ವೃತ್ತಿಯಲ್ಲಿ ದೈಹಿಕ ನಿರ್ದೇಶಕರಾಗಿದ್ದರು ಕೂಡಾ ಸಾಹಿತ್ಯದ ಜ್ಞಾನ ಬೆಳೆಸಿಕೊಂಡಿದ್ದು ಅನುಪಮ.
ಬಿಚ್ಚುಗತ್ತಿ ಕೃತಿ ಇದು ಭಾಮಿನಿ ಷಟ್ಪದಿಯಲ್ಲಿ ಮೂಡಿ ಬಂದ ಕಾವ್ಯವಾಗಿದೆ. ಈ ಭಾಗದಲ್ಲಿ ಸಾಹಿತಿ ದಿ.ಎಮ್.ವ್ಹಿ.ಗಣಾಚಾರಿ ಅವರು ಷಟ್ಪದಿ, ವ್ಯಾಖರಣದಲ್ಲಿ ಅದ್ಬುತ ಸಾಧನೆ ಮಾಡಿದವರು. ಅವರ ಗರಡಿಯಲ್ಲಿ ಬೆಳೆದ ಸೋಮಾಪೂರ ಅವರು ಭಾಮಿನಿ ಷಟ್ಪದಿಯಲ್ಲಿ ಬಿಚ್ಚುಗತ್ತಿ ಗ್ರಂಥದ ಮೂಲಕ ೩೫೨ ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಇಂದಿನ ಆಧುನಿಕ ಕಾಲಗಟ್ಟದಲ್ಲಿ ಷಟ್ಪದಿಗಳೇ ಸಾಯುತ್ತಿವೆ. ಇದರ ಮಧ್ಯದಲ್ಲಿ ಭಾಮಿನಿ ಷಟ್ಪದಿಯಲ್ಲಿ ಕೃತಿ ರಚನೆಯಾಗಿದ್ದು ಉತ್ತಮ ಬೆಳವಣಿಗೆ. ಈ ಕೃತಿಯು ಮನುಷ್ಯನಿಗೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು, ಸಾಹಸಿಯ ಸಾಮರ್ಥ್ಯ, ಶೌರ್ಯದ ಕಲ್ಪನೆ, ಹೋರಾಟ, ವಿವೇಚನೆಗಳನ್ನು ತುಂಬಿಕೊಂಡ ಸ್ವಾರಸ್ಯಕರವಾದ ಕಾವ್ಯ ಇಲ್ಲಿ ಮೂಡಿ ಬಂದಿವೆ ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ ನಿವೃತ್ತ ಪಾಚಾರ್ಯ ಬಿ.ಪಿ.ಕರ್ಜಗಿ, ಸಮ್ಮುಖ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಇಂದು ಕೌಶಲ್ಯಭರಿತ ಶಿಕ್ಷಣ ಕಡಿಮೆಯಾಗುತ್ತಿದೆ. ಪ್ರಾರಂಭದಿಂದಲೇ ಮಕ್ಕಳಿಗೆ ಭಾಷೆ, ತಂತ್ರಜ್ಞಾನ, ವಿವಿಧ ಕಲೆ, ಕೌಶಲ್ಯದ ಬಗ್ಗೆ ವಿವರಣೆ ನೀಡುತ್ತಲೆ ಇರಬೇಕು ಎಂದರು.
ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ತಾಳಿಕೋಟಿಯ ಎಚ್.ಎಸ್.ಪಾಟೀಲ, ದೈಹಿಕ ನಿರ್ದೇಶಕ ಡಾ.ರವಿ ಗೋಲಾ, ಪ್ರಾಚಾರ್ಯ ಬಿಎಮ್.ಸಿಂಗನಳ್ಳಿ, ಎಸ್.ಎಸ್.ಪಾಟೀಲ, ಪ್ರಾಚಾರ್ಯೆ ಜೆ.ಸಿ.ನಂದಿಕೋಲ, ಕೃತಿಕರ್ತ ಕೆ.ಎಚ್.ಸೋಮಾಪೂರ ಇದ್ದರು.
ಇದೇ ಸಂದರ್ಭದಲ್ಲಿ ಶ್ರೀಮಠ ಮತ್ತು ವಿವಿಧ ಅಂಗ ಸಂಸ್ಥೆಗಳ ವತಿಯಿಂದ ಕುಲಪತಿ ಸಿ.ಎಂ.ತ್ಯಾಗರಾಜ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

