ವಿಜಯಪುರ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಕರಡಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ವ್ಯಾಪ್ತಿಯ ಪ್ರತಿ ವಾರ್ಡನಲ್ಲಿ ಸಂಬಂಧಿಸಿದ ಪ್ರಾಧಿಕಾರದ ವತಿಯಿಂದ ಗ್ರಂಥಾಲಯ ಕಟ್ಟಡ ಕಟ್ಟಲಿಕ್ಕೆ ಬೇಕಾಗಿರುವ ನಿವೇಶನ ಪಡೆದು ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಎಂ.ಎಸ್. ಕರಡಿ ಅವರು ಹೇಳಿದರು.
ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಲಭ್ಯವಿರುವ ಖುಲ್ಲಾ ನಿವೇಶನದಲ್ಲಿ ಲೋಕಸಭಾ ಸದಸ್ಯರ ಮತ್ತು ವಿಧಾನ ಸಭೆ ಸದಸ್ಯರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟಲು ನೀಲನಕ್ಷೆ ಹಾಗೂ ಅಂದಾಜು ಪತ್ರಿಕೆ ತಯಾರಿಸಬೇಕು ಎಂದೂ ಸೂಚಿಸಿದರು. ಗ್ರಂಥಾಲಯಗಳು ಜನ ಸಾಮಾನ್ಯರ ವಿಶ್ವವಿದ್ಯಾಲಯಗಳಿದ್ದಂತೆ. ನಗರದ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಗ್ರಂಥಾಲಯ ಸೇವೆ ಪಡೆಯಲು ಪ್ರೇರೆಪಿಸಿ ಪ್ರತಿ ಬಡಾವಣೆಯ ಉದ್ಯಾನವನದಲ್ಲಿ ಗ್ರಂಥಾಲಯವನ್ನು ತೆರೆಯುವಂತೆ ಮಹಾಪೌರರು ಸಲಹೆ ನೀಡಿದರು.
ಬದಲಾಗುತ್ತಿರುವ ಮಾಹಿತಿ ಹಾಗೂ ಸ್ವರೂಪಕ್ಕೆ ಸಂಬಂಧಪಟ್ಟಂತೆ ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಅನುಕೂಲವಾಗುವಂತೆ, ಪ್ರಾಥಮಿಕ ಶಾಲೆಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕ ಓದುಗರಿಗೆ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ, ವಿಷಯಾಧಾರಿತ ಪಠ್ಯ, ವಾಣಿಜ್ಯ, ಕಲೆ, ಸಾಹಿತ್ಯ ,ಇತಿಹಾಸ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನದ ಹಾಗೂ ಪ್ರಚಲಿತ ವಿದ್ಯಮಾನದ ಬಗ್ಗೆ ಆಯಾ ಶಾಖಾ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳ ಬಗ್ಗೆ ಆಸಕ್ತಿ ಮೂಡಿಸಲು ಸ್ಪರ್ಧಾತ್ಮಕ ಪುಸ್ತಕಗಳ ಪ್ರದರ್ಶನ ಏರ್ಪಡಿಸುವ ಮೂಲಕ ಯುವಜನತೆಯನ್ನು ಗ್ರಂಥಾಲಯಗಳೆಡೆಗೆ ಆಕರ್ಷಿಸಬೇಕು. ಆ ಮೂಲಕ ಅವರಲ್ಲಿ ಓದುವ ಹವ್ಯಾಸ ಹೆಚ್ಚಿಸಬೇಕು ಎಂದರು.
ಗ್ರಂಥಾಲಯಗಳ ಮಹತ್ವದ ಬಗ್ಗೆ ವಿಚಾರ ಸಂಕೀರ್ಣ, ಉಪನ್ಯಾಸಗಳು, ವಿಶೇಷ ವಿಚಾರಗೋಷ್ಠಿ ಕಾರ್ಯಗಾರ ಏರ್ಪಡಿಸಿ ಗ್ರಂಥಾಲಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಎಸ್.ಎಸ್.ಕನ್ನೂರ, ಡಾ. ಶಿವಗಂಗಾ, ಅಪ್ಪಾಸಾಹೇಬ ದಳವಾಯಿ ಹಾಗೂ ಶೈಲಜಾ ಆರ್ ಹಾಲಾವರ, ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಉಪನಿರ್ದೇಶಕರಾದ ಅಜಯಕುಮಾರ ಮತ್ತಿತರರು ಪಾಲ್ಗೊಂಡಿದ್ದರು.

