ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೊಹರಂ ಹಬ್ಬ ಇಸ್ಲಾಂ ಉದರದಲ್ಲಿ ಹುಟ್ಟಿದರೂ ಹಿಂದೂಗಳ ಕರಕಮಲದಲ್ಲಿ ಜೋಪಾನವಾಗಿ ಜೀವಂತವಾಗಿದೆ. ಇಂದು ದೇಶದಲ್ಲಿ ಹಿಂದೂ-ಮುಸ್ಲಿಂ ಅನೋನ್ಯವಾಗಿರಬೇಕಾದರೆ ಈ ಪವಿತ್ರ ಮೊಹರಂ ಹಬ್ಬವೇ ಕಾರಣವಾಗಿದೆ. ತ್ಯಾಗ – ಬಲಿದಾನದ ಜೊತೆಗೆ ಪ್ರೀತಿ ಮತ್ತು ಸ್ನೇಹದ ಕುರುಹಾಗಿ ಮೊಹರಂ ಗಟ್ಟಿಯಾಗಿ ನಿಂತಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಪರಿಷತ್ ಕೂಡಗಿ ವಲಯ ಘಟಕದ ವತಿಯಿಂದ ಕೊಲ್ಹಾರ ತಾಲೂಕಿನ ಕವಲಗಿ ಗ್ರಾಮದ ಚಾವಡಿಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಏರ್ಪಡಿಸಿದ ” ರಿವಾಯತ ಸಂಭ್ರಮ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಭಾರತದ ಹಬ್ಬ- ಉತ್ಸವಗಳು ನಮ್ಮ ಮೂಲ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿವೆ.ಜನಪದ ಕಲಾವಿದರು ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬೆಳೆಸುವ ನಿಟ್ಟಿನಲ್ಲಿ ಸಮಾಜ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಸದಸ್ಯ ಕಲಾವಿದ ಮೌಲಸಾಹೇಬ ಜಹಾಗಿರದಾರ ಮಾತನಾಡಿ, ಮೊಹರಂ ಉತ್ಸವದ ಹತ್ತು ದಿನಗಳಲ್ಲಿ ಜಾನಪದ ಸಂಸ್ಕೃತಿಯ ಪ್ರತಿಯೊಂದು ವಿಚಾರಗಳು ಅನಾವರಣಗೊಳ್ಳುತ್ತವೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆಸುತ್ತಾರೆ ಎಂದರು.
ಕನ್ನಡ ಜಾನಪದ ಪರಿಷತ್ ಕೊಲ್ಹಾರ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರು ಸಂಕಷ್ಟದಲ್ಲಿದ್ದಾರೆ. ಸರಕಾರ ಮತ್ತು ಸಮುದಾಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಬೇಕೆಂದು ವಿನಂತಿಸಿದರು.
ಕನ್ನಡ ಜಾನಪದ ಪರಿಷತ್ ಕೂಡಗಿ ವಲಯ ಅಧ್ಯಕ್ಷ ದುಂಡಯ್ಯ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಿವರುದ್ರಯ್ಯ ಹೀರೆಮಠ , ಈರಯ್ಯ ಮಠಪತಿ ,ಕಜಾಪ ಕಾರ್ಯದರ್ಶಿ ಭೀಮಶಿ ಬೀಳಗಿ, ಅರುಣ ಗಾಣಿಗೇರ,ಶಂಕ್ರಪ್ಪ ತಳವಾರ , ಹನುಮಂತಪ್ಪ ಚಿಲವಾಡಗಿ, ಬಸಪ್ಪ ಬ್ಯಾಲ್ಯಾಳ ಮತ್ತಿತರರು ಉಪಸ್ಥಿತರಿದ್ದರು.
ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕವಲಗಿ, ಕೊಲ್ಹಾರ, ಅರಸುಣಗಿ, ಬಳೂತಿ, ಗಣಿ, ತೆಲಗಿ, ಉಪ್ಪಲದಿನ್ನಿ, ಜೈನಾಪುರ ರಿವಾಯತ ಮತ್ತು ಹೆಜ್ಜೆ ಕುಣಿತ ಕಲಾವಿದರು ಇಡೀ ರಾತ್ರಿ ಕಲಾ ಪ್ರದರ್ಶನ ನಡೆಸಿದರು.
ಶಿಕ್ಷಕ ಮಂಜುನಾಥ ದಳವಾಯಿ ನಿರೂಪಿಸಿದರು. ಮುದ್ದಣ್ಣ ತಳವಾರ ವಂದಿಸಿದರು.

