ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಬದುಕಿನಲ್ಲಿ ಎಷ್ಟೋ ಬಾರಿ ಸೋಲುಗಳು ನಮ್ಮನ್ನು ಇನ್ನಿಲ್ಲದಂತೆ ಎಚ್ಚರಿಸಿ ಸರಿಯಾದ ದಾರಿಯಲ್ಲಿ ನಡೆಯಲು ಅನುವು ಮಾಡಿ ಕೊಡುತ್ತವೆ. ಸೋಲುಗಳಿಂದ ನಿರಾಶೆಗೊಂಡು ಕಂಗೆಡುವುದಕ್ಕಿಂತ ಮತ್ತೆ ಮತ್ತೆ ಪ್ರಯತ್ನಿಸಿ ಯಶಸ್ಸಿನ ಹಾದಿಯಲ್ಲಿ ಸಾಗಿದವರು ಇತಿಹಾಸವನ್ನು ನಿರ್ಮಿಸಿದ್ದಾರೆ.
ಮತ್ತೆ ಕೆಲವರು ಇತಿಹಾಸವನ್ನು ನಿರ್ಮಿಸದೆ ಹೋದರೂ ಸೋಲನ್ನು ಛಲದಿಂದ ಮೆಟ್ಟಿ ತಮ್ಮ ಬದುಕಿನಲ್ಲಿ ಹೊಸ ತಿರುವುಗಳನ್ನು ಕಂಡುಕೊಂಡಿದ್ದಾರೆ.
ಮಂದ ಬುದ್ಧಿ, ಮಾನಸಿಕವಾಗಿ ಅಷ್ಟೇನೂ ಚುರುಕುತನವನ್ನು ಹೊಂದಿಲ್ಲ ಎಂದು ಎಲ್ಲರಿಂದಲೂ ಕರೆಸಿಕೊಂಡ ಥಾಮಸ್ ಅಲ್ವಾ ಎಡಿಸನ ಅವರನ್ನು ಅವರು ಓದುತ್ತಿದ್ದ ಶಾಲೆಯಿಂದ ಹೊರ ಹಾಕಿದ್ದರು. ಆದರೆ ಆತ ಮುಂದೆ ಜಗತ್ತಿನ ಅತಿ ದೊಡ್ಡ ಸಂಶೋಧಕನಾಗಿ ಜಾಗತಿಕ ಇತಿಹಾಸದಲ್ಲಿ ಗುರುತಿಸಿಕೊಂಡರು.
‘ಉಳಿವಿಗಾಗಿ ಹೋರಾಟ’ ಎಂಬ ಸಿದ್ಧಾಂತದ ಮೂಲಕ ವಿಶ್ವ ಸಂಕುಲದ ಜೀವ ಸಿದ್ಧಾಂತವನ್ನು ಜಗತ್ತಿಗೆ ತಿಳಿಸಿದ ಚಾರ್ಲ್ಸ್ ಡಾರ್ವಿನ್ ತನ್ನ ತಂದೆಯ ಒತ್ತಾಸೆಯಂತೆ ವೈದ್ಯಕೀಯ ಓದಲು ಸಾಧ್ಯವಾಗಲಿಲ್ಲ. ತನ್ನ ಮಗ ಇಲ್ಲದ ವಿಚಿತ್ರ ಕಲ್ಪನೆಗಳಲ್ಲಿ ಮುಳುಗಿ ಹೋಗುತ್ತಾನೆ ಬೇರೆಯವರ ಕುರಿತು ಆತನಿಗೆ ಯಾವುದೇ ರೀತಿಯ ಗಮನವಿರುವುದಿಲ್ಲ ಎಂಬುದು ಆತನ ತಂದೆಯ ಆಪಾದನೆಯಾಗಿತ್ತು ಆದರೆ ಜೀವಶಾಸ್ತ್ರದ ಮೂಲ ತಿರುಳಾದ ವಿಕಾಸವಾದವನ್ನು ಪ್ರತಿಪಾದಿಸಿದ ಹಿರಿಮೆ ಚಾಲ್ಸ್ ಡಾರ್ವಿನ್ ನದು.
ಕ್ರಿಯಾಶೀಲತೆಯ ಕೊರತೆಯನ್ನು ಮುಂದೊಡ್ಡಿ ಪತ್ರಿಕೆಯವರಿಂದ ಹೊರ ದಬ್ಬಲ್ಪಟ್ಟ ವಾಲ್ಟ್ ಡಿಸ್ನಿ ಮುಂದೊಂದು ದಿನ ಮನರಂಜನೆಯ ಮಹಾ ಸಾಮ್ರಾಜ್ಯವನ್ನು ಕಟ್ಟಿದ. ಹಾಲುಗಲ್ಲದ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಆತನ ಮನರಂಜನೆಯ ಜಗತ್ತಿನಲ್ಲಿ ನಕ್ಕು ನಲಿದವರು. ಜಾಗತಿಕವಾಗಿ ಇಂದಿಗೂ ಕೂಡ ಆತನನ್ನು ಮೀರಿಸುವ ಮನರಂಜನಾ ಉದ್ಯಮಿ ಬೇರೊಬ್ಬರಿಲ್ಲ. ಡಿಸ್ನಿ ವರ್ಲ್ಡ್ ಎಂಬ ಆಧುನಿಕ ಮನರಂಜನೆಯ ಸಾಮ್ರಾಜ್ಯ ಆತನ ಕನಸಿನ ಸಾಕಾರ ರೂಪ ಎಂದರೆ ತಪ್ಪಿಲ್ಲ.

ಪ್ರತಿಭೆಯ ಗಂಧ ಗಾಳಿಯೇ ಇಲ್ಲ ಎಂದು ತನ್ನ ಸಂಗೀತ ಶಿಕ್ಷಕರಿಂದ ಹೀಯಾಳಿಸಲ್ಪಟ್ಟ ಬೀತೋವೆನ್ ಎಂಬ ವಿದ್ಯಾರ್ಥಿಯನ್ನು ಮುಂದೆ ಸಂಗೀತ ಮಾಂತ್ರಿಕನೆಂದು ಜಗತ್ತು ಗುರುತಿಸಿತು. ಜಗತ್ತಿನ ಅತ್ಯದ್ಭುತ ಸಂಗೀತ ಕಲಾವಿದರಲ್ಲಿ ಆತನೂ ಒಬ್ಬನಾದ.
ತನ್ನ ನಾಲ್ಕನೇ ವಯಸ್ಸಿನವರೆಗೂ ಮಾತನಾಡಲು ಬಾರದ ಆಲ್ಬರ್ಟ್ ಐನ ಸ್ಟೀನನನ್ನು ಆತನ ಶಾಲೆಯಲ್ಲಿ ಮಂದ ಬುದ್ಧಿ ಎಂದು, ಮಾನಸಿಕವಾಗಿ ವಿಕಲಾಂಗ ಎಂದು ಆತನ ಶಿಕ್ಷಕರೇ ಹೀಯಾಳಿಸಿದರು. ಆದರೆ ಆತ ಮುಂದೊಂದು ದಿನ ಜಗತ್ತೇ ಬೆರಗಾಗುವಂತಹ ವೈಜ್ಞಾನಿಕ ಆವಿಷ್ಕಾರಗಳನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟ. ಜಗತ್ತಿನ ಅತ್ಯಂತ ಮೇಧಾವಿಗಳಲ್ಲಿ ಆಲ್ಬರ್ಟ್ ಐನ್ ಸ್ಟೀನ್ ಕೂಡ ಒಬ್ಬರು.
ಕಲಾ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಸತತ ಮೂರು ಬಾರಿ ಫೇಲಾದ ಆಗಸ್ಟ್ ರೋಢಿನ್ ನನ್ನು ಆತನ ತಂದೆ ಮೂರ್ಖ ಎಂದು ತಿರಸ್ಕರಿಸಿದರು. ಆದರೆ ಇದೀಗ ಜಗತ್ತಿನ ಸರ್ವಕಾಲಕ್ಕೂ ಸಲ್ಲುವ ಅತ್ಯದ್ಭುತ ಶಿಲ್ಪ ಕಲಾವಿದರಲ್ಲಿ ಒಬ್ಬರಾಗಿ ಆತನನ್ನು ಗುರುತಿಸಿದ್ದಾರೆ.

ಮೊಜಾರ್ಟ್ ಎಂಬ ಸಂಗೀತ ಮಾಂತ್ರಿಕನ ‘ದ ಮ್ಯಾರೇಜ್ ಆಫ್ ಫಿಗಾರೊ’ ಎಂಬ ಗೀತೆಯಲ್ಲಿ ಬಹಳಷ್ಟು ನೋಟ್ಸ್ (ಲಿಪಿ ಬದ್ಧ)ಗಳು ಇವೆ ಎಂದು ಆ ದೇಶದ ಸಾಮ್ರಾಟ ಫರ್ಡಿನಾಂಡ್ ಸಾರ್ವಜನಿಕವಾಗಿ ಹಂಗಿಸಿದ, ಆದರೆ ಮೊಜಾರ್ಟ್ ಪ್ರಶ್ನಾತೀತ ಸಂಗೀತಗಾರನಾಗಿ ಹೊರಹೊಮ್ಮಿದ.
ರಸಾಯನಶಾಸ್ತ್ರದಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಡಿಮಿಟ್ರಿ ಮೆಂಡಲೀವ್ ಪಡೆದುಕೊಂಡಿದ್ದ.. ಆದರೆ ಮುಂದೆ ಆತನೇ ಮೂಲಭೂತ ವಸ್ತುಗಳ ಕೋಷ್ಟಕ ಪಿರಿಯಾಡಿಕ್ ಟೇಬಲ್ ನ್ನು ತಯಾರಿಸಿದ.
ಫೋರ್ಡ್ ಆಟೋಮೊಬೈಲ್ಸ್ ನ ದಂತ ಕಥೆಯಾದ ಹೆನ್ರಿ ಫೋರ್ಡ್ಗೆ ಮೂಲಭೂತ ಶಿಕ್ಷಣವನ್ನು ಪಡೆಯಲು ಕೂಡ ಸಾಧ್ಯವಾಗಿರಲಿಲ್ಲ. ಮತ್ತು ಆತ ತನ್ನ ಕಾರ್ಯ ಸಾಧನೆಯಲ್ಲಿ ದಿವಾಳಿಯಾಗಿದ್ದ.
ಮಾರ್ಕೊನಿ ರೇಡಿಯೋ ಕಂಡುಹಿಡಿದು ತಂತು ಜಾಲದ ಮೂಲಕ ಶಬ್ದದ ಅಲೆಗಳನ್ನು ರೇಡಿಯೋ ತರಂಗಗಳಾಗಿಸಿ ಮತ್ತೆ ಧ್ವನಿಯನ್ನು ಕೇಳಿಸಿದ. ರೇಡಿಯೋದ ಸಂಶೋಧಕ ಎಂದು ಜಗತ್ತಿನಾದ್ಯಂತ ಹೆಸರಾದ. ಇದಕ್ಕೂ ಮುನ್ನ ಆತನ ಸ್ನೇಹಿತರು ಆತನಿಗೆ ಚಿತ್ತ ಭ್ರಮಣೆಯಾಗಿರಬಹುದು ಎಂಬ ಅನುಮಾನದಿಂದ ಆತನನ್ನು ಮನೋ ವೈದ್ಯರ ಬಳಿ ಚಿಕಿತ್ಸೆಗಾಗಿ ಕರೆದೊಯ್ಸಿದ್ದರು. ಕೆಲ ತಿಂಗಳುಗಳ ನಂತರ ಆತನ ಸಂಶೋಧನೆ ಸಾವಿರಾರು ಜೀವಗಳನ್ನು ಉಳಿಸಿತು.
ಇನ್ನು ನಮ್ಮ ಕರ್ನಾಟಕ ರಾಜ್ಯಕ್ಕೆ ಬಂದರೆ ಕಣ್ಣು ಕಾಣದ ಈ ಮಕ್ಕಳು ಭಿಕ್ಷೆಗೆ ಹೋಗಬೇಕು ಎಂದು ಹೇಳಿಸಿಕೊಂಡ ಪಂಚಾಕ್ಷರಿ ಗವಾಯಿಗಳು ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿ ಸಾವಿರಾರು ಅಂಧ, ಅನಾಥ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ಸಂಗೀತ ತರಬೇತಿಯನ್ನು ನೀಡಿ ಬದುಕಿನಲ್ಲಿ ನೆಲೆಗೊಳ್ಳಲು ಸಹಾಯ ಹಸ್ತವನ್ನು ಚಾಚಿದರು..
ಮೇಲಿನ ಎಲ್ಲ ಉದಾಹರಣೆಗಳನ್ನು ನೋಡಿದಾಗ ನಮಗೆ ಅರಿವಾಗುವುದು ಬೇರೆಯವರು ನಮ್ಮ ಕುರಿತು ನಿರ್ಣಯಾತ್ಮಕ ಹೇಳಿಕೆಯನ್ನು ನೀಡಿದರೆ ಅದಕ್ಕೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಮಹಾನತೆಯ ಮೊದಲ ಅಧ್ಯಾಯ ಆರಂಭವಾಗುವುದು ಸೋಲು, ಅವಮಾನ, ಹೀಯಾಳಿಕೆಗಳ ಮೂಲಕವೇ. ಕೇವಲ ನಮ್ಮ ಆತ್ಮ ಬಲವನ್ನು ನಂಬಿ ಬದುಕಿನಲ್ಲಿ ಮುನ್ನಡೆಯಬೇಕು
ದೇವರು ಸೋಲುಗಳನ್ನು ಪ್ರೀತಿಸುತ್ತಾನೆ.. ಹಾಗೆಯೇ ಸೋತವರನ್ನು ಕೂಡ ಎಂಬುದು ಮೇಲಿನ ಉದಾಹರಣೆಗಳನ್ನು ನೋಡಿದಾಗ ಅನ್ನಿಸುತ್ತದೆ ಅಲ್ಲವೇ.?
ಆದ್ದರಿಂದ ಸೋಲೆಂಬುದು ಅಲ್ಪ ವಿರಾಮ.. ಯಶಸ್ಸು ಎಂಬ ಪೂರ್ಣ ವಿರಾಮ ಬರುವವರೆಗೂ
ಪ್ರಯತ್ನದ ಬರಹ ಸಾಗುತ್ತಿರಲಿ ಎಂದು ಆಶಿಸುವ..


