ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪ್ರಾಚೀನ ಕಾಲದಿಂದಲೂ ಭಾರತಿಯ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಧಾರ್ಮಿಕ ತಾರತಮ್ಯತೆ ಬದುಕು ನಿರಂತರವಾಗಿ ಸಾಗಿ ಬಂದಿತ್ತು. ೧೨ ನೇ ಶತಮಾನದಲ್ಲಿ ಇದಕ್ಕೊಂದು ನ್ಯಾಯ ಒದಗಿಸಿಕೊಡುವ ಪ್ರಯತ್ನ ಬಸವಾದಿ ಶರಣರಿಂದ ನಡೆಯಿತು ಎಂದು ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುರೇಶ ಗಬ್ಬೂರ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಲಿಂ.ನಾಗಪ್ಪ ಗುರಪ್ಪ ಮರ್ತುರ, ಲಿಂ.ಭಾಗೀರಥಿಬಾಯಿ ಮೇಟಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೨ ನೇ ಶತಮಾನದಲ್ಲಿ ರಚನೆಗೊಂಡ ಅತ್ಯಮೂಲ್ಯವಾದ ವಚನ ಸಾಹಿತ್ಯವನ್ನು ೨೧ ನೇ ಶತಮಾನದಲ್ಲಿ ಸರಳವಾಗ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಶ್ರೇಯಸ್ಸು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ವಚನ ಸಾಹಿತ್ಯದಿಂದ ಸಮಾಜಕ್ಕೆ ನ್ಯಾಯ ಸಿಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿ, ನಮ್ಮ ನಿತ್ಯ ಬದುಕಿನಲ್ಲಿ ವಚನಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಸಮಾಜದಲ್ಲಿ ನಾವು ಅತ್ಯಂತ ಗೌರವದ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ನಿತ್ಯ ಸತ್ಯತೆಯಿಂದ ಕೂಡಿದೆ. ವಚನ ಅಧ್ಯಯನ ಮಾಡುವದರ ಜೊತೆಗೆ ಅದರಲ್ಲಿರುವ ಸಾರವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದು ಅತ್ಯಂತ ಮೌಲ್ಯಭರಿತವಾದ ವಿಚಾರಗಳನ್ನು ಒಳಗೊಂಡಿದೆ ಎಂದರು.
ಕದಳಿ ವೇದಿಕೆಯ ಅಧ್ಯಕ್ಷ ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ, ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಎಪ್.ಡಿ.ಮೇಟಿ, ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ, ನಿವೃತ್ತ ಉಪಪ್ರಾಚಾರ್ಯ ಎಸ್.ಎಸ್.ಝಳಕಿ, ನಿವೃತ್ತ ಉಪನ್ಯಾಸಕ ಎಚ್.ಎಸ್.ಬಿರಾದಾರ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಡಾ.ವೀಣಾ ಗುಳೇದಗುಡ್ಡ, ನಿವೃತ್ತ ಶಿಕ್ಷಕರಾದ ಎಸ್.ಜಿ.ಮೊಕಾಶಿ, ಆರ್.ಜಿ.ಅಳ್ಳಗಿ, ನಿವೃತ್ತ ಎಸ್ಬಿಐ ಅಧಿಕಾರಿ ವಿರೇಶ ಕುಂಟೋಜಿ ಇತರರು ಇದ್ದರು.

