ಯಲಗೂರು ಗ್ರಾಮದಲ್ಲಿ ಮಹಿಳಾ ವಿವಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ನಿಜವಾದ ಪ್ರಗತಿ ಗ್ರಾಮಗಳ ಪ್ರಗತಿಯಲ್ಲಿ ಅಡಕವಾಗಿದ್ದು, ಎಲ್ಲರ ದೃಷ್ಟಿಯೂ ಗ್ರಾಮಗಳ ಅಭಿವೃದ್ಧಿಯತ್ತ ಹರಿಯಬೇಕು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗವು ನಿಡಗುಂದಿ ತಾಲೂಕು ಯಲಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಗರಿಕ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ತರಬೇತಿಯಲ್ಲಿ ಪೌರತ್ವ ಮೌಲ್ಯಗಳನ್ನು ಪರಿಚಯಿಸುವ ಈ ತರಬೇತಿ ಶಿಬಿರಗಳು ಅತ್ಯಂತ ಅವಶ್ಯವಾಗಿವೆ. ವಿಶೇಷವಾಗಿ ಇವು ಗ್ರಾಮೀಣ ಭಾಗದಲ್ಲಿ ಆಯೋಜನೆಯಾಗಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ನೇರ ಅನುಭವ ಒದಗಿಸಲು ಶಿಬಿರಗಳು ಉತ್ತಮ ವೇದಿಕೆಯಾಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಾಂಮ ಪಾತ್ರದ ಮಾತನಾಡಿ, ಈ ತರಬೇತಿ ಶಿಬಿರವು ಗ್ರಾಮಸ್ಥರಿಗೆ ಬಹಳ ಅನುಕೂಲ ನೀಡುತ್ತದೆ. ಹಳ್ಳಿಗಳಲ್ಲಿ ವಂಚನೆಯ ಹಾಗೂ ಮೂಢನಂಬಿಕೆಗಳ ಸಮಸ್ಯೆ ನಿವಾರಣೆಗೆ ಶಿಕ್ಷಣವೇ ಪರಿಣಾಮಕಾರಿಯಾದ ಮಾರ್ಗವಾಗಿದೆ ಎಂದರು.
ಮಹಿಳಾ ವಿವಿಯ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಮಾತನಾಡಿ, ಶಿಕ್ಷಕ ತರಬೇತಿಯು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿದೆ. ವಿದ್ಯಾರ್ಥಿ ಶಿಕ್ಷಕರು ಸಮುದಾಯದೊಂದಿಗೆ ಸಂವಾದ ನಡೆಸುವಂತಹ ಅನುಭವಾಧಾರಿತ ಚಟುವಟಿಕೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯದ ಶಿಬಿರಗಳು ಸಮುದಾಯಮುಖಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರಾದ ಭೀಮಣ್ಣ ಅವಟಿಗೇರ್, ಶ್ರೀಶೈಲ್ ಹೂಗಾರ್, ಗೋವಿಂದಪ್ಪ ಪೂಜಾರ, ಡಾ. ಅಶೋಕ್ ಕುಮಾರ್ ಸುರಪುರ, ಡಾ.ಪ್ರಕಾಶ್ ಸಣ್ಣಪ್ಪನವರ್, ಯಲಗೂರು ಗ್ರಾಮದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಗ್ರಾಮದ ವಿವಿಧ ಗಣ್ಯರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರದ ಸಂಯೋಜಕ ಡಾ.ಉದಯಕುಮಾರ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಡಾ.ವಿಷ್ಣು ಶಿಂದೆ ಪರಿಚಯಿಸಿದರು. ಬಿಎಡ್ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿ ಪಲ್ಲವಿ ಬಂಗೇನ್ನವರ್ ನಿರೂಪಿಸಿದರು. ಸ್ವಾತಿ ಸ್ವಾಗತಿಸಿದರು. ಭಾಗ್ಯಶ್ರೀ ಬಡಿಗೇರ್ ವಂದಿಸಿದರು.

