ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ತಾಲೂಕಿನ ಹುನ್ನೂರು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಗಂಭೀರ ಸ್ವರೂಪ ಪಡೆದು ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಗ್ರಾಮದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಗ್ರಾಮ ಮಾಡುವಲ್ಲಿ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ತ್ಯಾಜ್ಯವನ್ನು ಸೂಕ್ತ ಜಾಗದಲ್ಲಿ ಸಂಗ್ರಹಿಸಲು ಕ್ರಮ ಕೈಗೊಳ್ಳದ ಗ್ರಾಮ ಪಂಚಾಯಿತಿಯು ಊರು ಪಕ್ಕದ ಹಿಪ್ಪರಗಿ ರಸ್ತೆ ಬದಿಯಲ್ಲಿಯೇ ಸಂಗ್ರಹಿಸುತ್ತಿದೆ. ನಂತರದ ದಿನಗಳಲ್ಲಿ ಅದನ್ನು ಜನವಸತಿಯಿಂದ ದೂರದ ಪ್ರದೇಶಕ್ಕೆ ಸಾಗಿಸಲು ಕ್ರಮ ಕೈಗೊಳ್ಳುತ್ತಿಲ್ಲ. ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಕಸಕಡ್ಡಿ ಗಾಳಿಗೆ ಹಾರಿ ಮತ್ತೆ ಊರು ಸೇರಿಕೊಳ್ಳುತ್ತಿದೆ. ವಾರಕ್ಕೊಮ್ಮೆ ಇಲ್ಲವೆ ವಾರದಲ್ಲಿ ಎರಡು ಬಾರಿ ಪ್ಲಾಸ್ಟಿಕ್ ಹಾಗೂ ಕಸವನ್ನು ಸುಡಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಉಂಟಾಗಿ ಗ್ರಾಮಸ್ಥರು ಅಸ್ತಮಾ ರೋಗಕ್ಕೆ ತುತ್ತಾಗುವಂತಾಗಿದೆ. ಈಗಾಗಲೇ ಗ್ರಾಮಸ್ಥರು ಹಲವಾರು ಬಾರಿ ಈ ವಿಷಯದ ಕುರಿತು ಗ್ರಾಮ ಪಂಚಾಯಿತಿಗೆ ಮೌಖಿಕವಾಗಿ ದೂರು ನೀಡಿದರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಸ್ಥಳಾವಕಾಶದ ಸಮಸ್ಯೆ
ಹುನ್ನೂರು ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆ ಕುರಿತು ಪಿಡಿಒ ಮಲ್ಲಪ್ಪ ರೂಗಿ ಅವರನ್ನು ವಿಚಾರಿಸಿದಾಗ, ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶವಿಲ್ಲ. ತ್ಯಾಜ್ಯ ಸಂಗ್ರಹಕ್ಕೆ ಗ್ರಾಮ ಪಂಚಾಯಿತಿ ಇಲ್ಲವೆ ಸರ್ಕಾರಕ್ಕೆ ಸಂಬಂಧಿಸಿದ ಸೂಕ್ತ ಜಾಗ ಇಲ್ಲದ್ದಕ್ಕೆ ಸಮಸ್ಯೆ ಎದುರಾಗಿದೆ. ಸಮೀಪದ ಜಮಖಂಡಿ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವ ಬಗ್ಗೆ ಪ್ರಯತ್ನ ನಡೆದಿದ್ದು, ಈ ಬಗ್ಗೆ ತಾಪಂ, ಜಿಪಂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ನಿವಾರಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.
“ಅವೈಜ್ಞಾನಿಕವಾಗಿ ನಡೆಸುತ್ತಿರುವ ತ್ಯಾಜ್ಯ ವಿಲೇವಾರಿಯಿಂದಾಗಿ ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬೇಸಿಗೆಯಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಕೂಡಲೇ ಗ್ರಾಮ ಪಂಚಾಯಿತಿಯವರು ತ್ಯಾಜ್ಯವನ್ನು ಗ್ರಾಮ ಬಿಟ್ಟು ದೂರದಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು. ವಿಲೇವಾರಿಗೆ ವೈಜ್ಞಾನಿಕ ಕ್ರಮ ಅನುಸರಿಸಬೇಕು.”
– ರಾಜು ತೇಲಿ
ಗ್ರಾಮಸ್ಥ, ಹುನ್ನೂರು