ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಚನ ಸಾಹಿತ್ಯ ಸಂಶೋಧನೆ ಮತ್ತು ಮುದ್ರಣಕ್ಕಾಗಿ ಸಾಲಕ್ಕೆ ಅಂಜದೇ ಕಾಲಕ್ಕೆ ನಂಜದೇ ಇಡೀ ತಮ್ಮ ಬದುಕನ್ನು ವಚನ ಸಾಹಿತ್ಯ ಸಂರಕ್ಷಣೆಗಾಗಿ ಸವೆಸಿ 250ಕ್ಕೂ ಹೆಚ್ಚು ಶರಣರ ವಚನಗಳನ್ನು ಊರೂರು ಸುತ್ತಿ ಸಂಗ್ರಹಿಸಿ ಪ್ರಕಟಿಸಿ ನಮಗೆ ಕೊಟ್ಟು ಹೋದವರು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಇವರು ಸದಾ ಸ್ಮರಣೀಯರಾಗಿದ್ದಾರೆ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಖೇಡದ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತವು ಗುರುವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ 146 ಜಯಂತೋತ್ಸವ, ವಚನ ಸಂರಕ್ಷಣಾ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ವಚನ ಸಾಹಿತ್ಯ ಸಂರಕ್ಷಣೆಯೊಂದಿಗೆ ವಿಜಯಪುರ ಜಿಲ್ಲೆಯ ವಿಕಾಸಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಶಿಕ್ಷಣ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವರು ತೋರುತ್ತಿದ್ದ ಕಾಳಜಿ, ಬರಗಾಲ ನಿವಾರಣ ಕೇಂದ್ರ,ಪ್ರತಿಷ್ಠಿತ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆ ಹಾಗೂ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್, ಎಸ್.ಎಸ್. ಹೈಸ್ಕೂಲ್ ಹಾಗೂ ವಿಜಯ ಕಾಲೇಜ ಸೇರಿದಂತೆ ಅನೇಕ ಸಹಕಾರಿ ಸಂಘ ಸಂಸ್ಥೆಗಳ ಉದಯಕ್ಕೆ ಮೂಲ ಕಾರಣರಾದವರು. ವಕೀಲರಾಗಿ ಶ್ರದ್ಧೆ,ತ್ಯಾಗ, ಶುದ್ಧ ಹಸ್ತ ಒಂದು ಕಡೆ ಆದರೆ ಹಸಿವು, ಪರಹಿತಕ್ಕಾಗಿ ಸ್ವಂತ ಮನೆ ಮಾರಿದ್ದು, ಕೈಗೆ ಬಂದ ಮಗ ಮರಣಿಸಿದ್ದು ಇನ್ನೊಂದು ಕಡೆ. ಇದಾವುದಕ್ಕೂ ಧೃತಿಗೆಡದೇ 20ನೇ ಶತಮಾನದ ಶರಣರಂತೆ ಬಾಳಿ ತೋರಿಸಿದವರು ಪರಮಪುರುಷ ರಾವ್ ಬಹುದ್ದೂರ್ ಡಾ. ಫ. ಗು.ಹಳಕಟ್ಟಿಯವರು. ಹರಕು ಅಂಗಿಯ ಮೇಲೆ ಕರಿಕೋಟು. ಆಸರೆಗೆ ಬಣ್ಣ ಮಾಸಿದ ಸೈಕಲ್. ವಾಸಿಸಲು ಕೊನೆಯವರೆಗೂ ಬಾಡಿಗೆ ಮನೆ ಇದು ಅವರ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿತ್ತು ಎಂದು ಅಭಿಪ್ರಾಯಪಟ್ಟರು.
ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಹಳಕಟ್ಟಿ ಅವರದು ಸರಳ ಜೀವನ ಉನ್ನತ ವಿಚಾರವಾಗಿತ್ತು. ಸರ್ಕಾರ ಅವರ ಜಯಂತಿ ದಿನವನ್ನು ವಚನ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ಸ್ತುತ್ಯವಾಗಿದೆ ಎಂದರು.
ಪೂಜಾಸ್ಮರಣೆಯಲ್ಲಿ ಎಸ್ ಕೆ ಸೋಮನಕಟ್ಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಬಿ.ಎಸ್. ಪಟ್ಟಣದ,.ಶ್ರೀಶೈಲ ಶಿರಗುಪ್ಪಿ, ಕಾಶಿನಾಥ ಅವಟಿ,ಐ.ಜಿ. ಬೆಕಿನಾಳ, ಲಕ್ಷ್ಮಣ ಮೇತ್ರಿ, ಶಿವಾನಂದ ತುಬಾಕಿ, ವಿಲಾಸ ಜಾಡರ, ಎನ್. ಎನ್. ಹೊಸಮನಿ, ತಹಸೀಲ್ದಾರ ಕಚೇರಿ ಸಿಬ್ಬಂದಿ ಇತರರು ಇದ್ದರು.
ಶ್ರೀಶೈಲ ಶಿರಗುಪ್ಪಿ ಸ್ವಾಗತಿಸಿದರು. ಸಿದ್ದು ಶಿರಶ್ಯಾಡ ನಿರೂಪಿಸಿದರು. ಎಸ್. ಬಿ. ಅಂಕದ ವಂದಿಸಿದರು.

