ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು & ಕಾರ್ಯಕಾರಿಣಿ ಸದಸ್ಯರಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ಭವನ ನವೀಕರಣ ಕಾರ್ಯಕ್ಕೆ ಆರ್ಥಿಕ ಸಹಾಯ ಅಥವಾ ನವೀಕರಣ ಮಾಡಬೇಕೆಂದು ಒತ್ತಾಯಿಸಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲರಿಗೆ ಗೃಹ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ನಗರದ ಸೊಲ್ಲಾಪುರ ರಸ್ತೆಯಲ್ಲಿರೋ ಸಚಿವ ಎಂ ಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕಾರಿಣಿ ಸದಸ್ಯರು ಭೇಟಿಯಾಗಿ ಮನವಿ ಸಲ್ಲಿಸಿದರು.
ಸಚಿವರಿಗೆ ಮನವಿ ನೀಡಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಅಧ್ಯಕ್ಷ ಅಶೋಕ ಯಡಳ್ಳಿ, ಶತಮಾನದ ಹೊಸ್ತಿಲಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಕಚೇರಿ ಪತ್ರಿಕಾ ಭವನವು ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದು, ಅದಕ್ಕೆ ತುರ್ತಾಗಿ ಕಾಯಕಲ್ಪ ಒದಗಿಸಲು ಮುಂದಾಗಬೇಕಿದೆ. ವಿಜಯಪುರ ಜಿಲ್ಲಾ ಪಂಚಾಯತ ರಸ್ತೆಯಲ್ಲಿರುವ, ಜಿಲ್ಲೆಯ ಪತ್ರಕರ್ತರ ಶಕ್ತಿಕೇಂದ್ರವಾಗಿರುವ ಈ ಪತ್ರಿಕಾ ಭವನಕ್ಕೆ ಪತ್ರಿಕಾ ಭವನ ಕಟ್ಟಡವನ್ನು ನೆಲದಲ್ಲಿ ಮೂರು ಅಡಿ ಎತ್ತರಿಸುವ ಅನಿವಾರ್ಯತೆ ಇದೆ. ಭವನದ ಕಿಟಕಿ ಮತ್ತು ಬಾಗಿಲುಗಳು ಶಿಥಿಲಗೊಂಡಿದ್ದು ಅವುಗಳ ದುರಸ್ಥಿ ಆಗಬೇಕಿದೆ. ಪತ್ರಿಕಾ ಭವನದ ಇಡೀ ಕಟ್ಟಡದಲ್ಲಿ ಕೆಲ ರಿನೋವೇಷನ್ ಮಾಡಿಸಬೇಕಿದೆ. ಕುಡಿಯುವ ನೀರು, ಭವನದ ಆವರಣದಲ್ಲಿರೋ ಸಸಿ ಮರಗಳಿಗೆ ಹಾಗೂ ಉದ್ಯಾನವಕ್ಕಾಗಿ ಕೊಳವೆ ಬಾವಿಯ ಅವಶ್ಯಕತೆಯಿದೆ. ಪಾಳು ಬಿದ್ದಿರುವ ಶೌಚಾಲಯದ ದುರಸ್ತಿಯಾಗಬೇಕಿದೆ. ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಬೇಕಾದ ಪೀಠೋಪಕರಣಗಳು ಸೇರಿದಂತೆ, ತಾಂತ್ರಿಕ ಸೌಲಭ್ಯ ಕಲ್ಪಿಸಿ, ಒಳ ಆವರಣಕ್ಕೆ ಆಧುನಿಕ ಸ್ಪರ್ಶ ನೀಡಬೇಕಿದೆ. ಭವನದ ಕಂಪೌಂಡ್ ಗೋಡೆಯನ್ನು ಎತ್ತರಿಸಿ ಕಬ್ಬಿಣದ ಗೇಟ್ ಅಳವಡಿಕೆ ಹಾಗೂ ಮಹಾದ್ವಾರ ನಿರ್ಮಾಣ ಮಾಡಬೇಕಿದೆ. ಭವನದ ಆವರಣದಲ್ಲಿ ವಿಶಾಲವಾದ ಸ್ಥಳ ಲಭ್ಯವಿದ್ದು, ಅಲ್ಲಿ ಪತ್ರಕರ್ತರ ಸಭೆ – ಸಮಾರಂಭಗಳಿಗಾಗಿ ಸಮುದಾಯ ಭವನದ ನಿರ್ಮಾಣ ಅಗತ್ಯವಿದೆ. ಭವನದ ಹೊರ ಆವರಣದಲ್ಲಿ ಉದ್ಯಾನವನ, ಪಾರ್ಕಿಂಗ್ ನಿರ್ಮಾಣ ಹಾಗೂ ವಿದ್ಯುತ್ ದೀಪಗಳು, ಸಿಸಿ ಕ್ಯಾಮರಾಗಳ ಸೌಲಭ್ಯ ಕಲ್ಪಿಸಬೇಕಿದೆ. ಆದ್ದರಿಂದ ತಾವು ಪತ್ರಿಕಾ ಭವನಕ್ಕೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಅನುದಾನದ ಅವಶ್ಯಕತೆ ಇದೆ. ಸೂಕ್ತ ರೀತಿಯ ಅನುದಾನದಲ್ಲಿ ಆದಷ್ಟು ಹೆಚ್ಚಿನ ಆರ್ಥಿಕ ಸಹಾಯ ಒದಗಿಸಬೇಕೆಂದು ಸಚಿವ ಎಂ ಬಿ ಪಾಟೀಲರಿಗೆ ವಿನಂತಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲರು, ನಾನು ಯಾವಾಗಲೂ ಪತ್ರಕರ್ತರ ಸಂಘದ ಬೆಳವಣಿಗೆಗೆ ಸಹಕರಿಸುವೆ. ಸದಾ ಒತ್ತಾಡದಲ್ಲಿರುವ ಪತ್ರಕರ್ತರ ಏಳಿಗೆಗೆ ಸ್ಪಂದಿಸುವ ಕೆಲಸ ನಮ್ಮಿಂದ ಆಗಲಿದೆ. ಪತ್ರಿಕಾ ಭವನಕ್ಕೆ ಸೌಲಭ್ಯ ಕಲ್ಪಿಸಲು ತಮ್ಮಿಂದ ಹಾಗೂ ಸಂಸ್ಥೆಯಿಂದ ಆಗುವ ಸಹಾಯವನ್ನು ಮಾಡುವ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಇಂದುಶೇಖರ್ ಮಣೂರ, ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಚಿವ ಎಂ ಬಿ ಪಾಟೀಲರು ಯಾವಾಗಲು ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ. ಪತ್ರಕರ್ತರಿಗಾಗಿ ಬಿಎಲ್ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಿಂದ ಆರೋಗ್ಯ ಕಾರ್ಡ್ ನೀಡಿದ್ದಾರೆ. ಸಂಘದ ಚಟುವಟಿಕೆಗಳಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ಸದ್ಯ ಪತ್ರಿಕಾ ಭವನದ ನವೀಕರಣಕ್ಕೆ ಸಿ ಎಸ್ ಆರ್ ಅನುದಾನವನ್ನು ಕಾನೂನು ವ್ಯಾಪ್ತಿಯಲ್ಲಿ ಒದಗಿಸೋ ಭರವಸೆ ನೀಡಿದ್ದಾರೆ ಎಂದರು.
ಈ ವೇಳೆ ರಾಷ್ಟ್ರೀಯ ಮಂಡಳಿ ಸದಸ್ಯ ಶರಣಬಸಪ್ಪ ಮಸಳಿ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯಕಾರಿ ಸದಸ್ಯರಾದ ಮಹೇಶ ವಿ ಶೆಟಗಾರ, ಗುರುರಾಜ ಗದ್ದನಕೇರಿ, ಗೋಪಾಲ ಕಣಿಮನಿ ಮತ್ತು ಸುನೀಲ ಗೊಡೆನ್ನವರ, ಸುನೀಲ ಕಾಂಬಳೆ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

