ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸರು ನಗರದ ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಾಜಿ ರಾವ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಅವರನ್ನು 1 ಲಕ್ಷ ರೂ. ಲಂಚದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಉದ್ಯಮಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಅವರ ಹೆಸರನ್ನು ಕೈಬಿಡಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಆವಲಹಳ್ಳಿ ನಿವಾಸಿ ಕೇಶವಮೂರ್ತಿ ಎಂಬುವವರು ಫೆಬ್ರವರಿ 2025ರಲ್ಲಿ ಕೆಂಪೇಗೌಡ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲು ಆರೋಪಿ ಪೊಲೀಸ್ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ 6 ಲಕ್ಷ ರೂ. ಲಂಚವನ್ನು ಕೊಡಲು ಸಾಧ್ಯವಾಗದೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದ ನಂತರ ಲೋಕಾಯುಕ್ತ ಪೊಲೀಸರು ಬಲೆ ಬೀಸಿದರು. ಅದರಂತೆ ಇನ್ಸ್ಪೆಕ್ಟರ್ ಶಿವಾಜಿ ರಾವ್ ಮತ್ತು ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಇಬ್ಬರನ್ನೂ 1 ಲಕ್ಷ ರೂ. ಲಂಚದೊಂದಿಗೆ ಬಂಧಿಸಿದ್ದಾರೆ.
ಕೆಂಪೇಗೌಡ ನಗರದ ಉದ್ಯಮಿ ಉತ್ತಮ್ ಚಂದ್ ಮಾರು ಎಂಬುವರು ಕೇಶವಮೂರ್ತಿ ವಿರುದ್ಧ 2025ರ ಫೆಬ್ರವರಿ 20ರಂದು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾರ್ ಲೈಸನ್ಸ್ ಕೊಡಿಸುವುದಾಗಿ ಕೇಶವಮೂರ್ತಿ ತನ್ನಿಂದ 2020 ರಿಂದ 2022ರ ನಡುವೆ 1 ಕೆಜಿ 240 ಗ್ರಾಂ ಚಿನ್ನದ ಆಭರಣ ಜೊತೆಗೆ, ಹಂತ ಹಂತವಾಗಿ 1.30 ಕೋಟಿ ರೂ.ಗಳನ್ನು ನಗದು ಮತ್ತು ಖಾತೆಯ ಮೂಲಕ ಪಡೆದಿದ್ದಾರೆ ಎಂದು ಉತ್ತಮ್ ಚಂದ್ ಆರೋಪಿಸಿದ್ದಾರೆ. ಬಾರ್ ಲೈಸನ್ಸ್ ಕೊಡದಿದ್ದರೆ ನನ್ನ ಹಣ ಮತ್ತು ಚಿನ್ನಾಭರಣವನ್ನು ವಾಪಸ್ ನೀಡುವಂತೆ ಕೇಳಿದಾಗ ಕೇಶವಮೂರ್ತಿ ಅಸಭ್ಯ ಭಾಷೆಯಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. ಹೀಗಾಗಿ ಉತ್ತಮ್ ಚಂದ್ ಅವರ ವಿರುದ್ಧ ಕೆಂಪೇಗೌಡ ನಗರ ಪೊಲೀಸರಿಗೆ ದೂರು ನೀಡಿದ್ದರು.