ಉದ್ಯೋಗ ಮೇಳ ೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ರಮೇಶ ಜಿಗಜಿಣಗಿ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿಯೇ ಹಿಂದುಳಿದ ಪ್ರದೇಶವಾದ ಚಡಚಣ ಭಾಗದ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಉದ್ಯೋಗಾವಕಾಶ ಕಲ್ಪಿಸುವಂತೆ ಸಂಸದರಾದ ರಮೇಶ ಜಿಗಜಿಣಗಿ ಹೇಳಿದರು.
ಸೋಮವಾರ ಚಡಚಣ ಗ್ರಾಮದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿಯೇ ಅತೀ ಹಿಂದುಳಿದ ತಾಲೂಕಾಗಿದ್ದು ಇಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪ್ರಥಮ ಆಧ್ಯತೆ ನೀಡಿ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವಂತೆ ಅವರು ಉದ್ಯೋಗದಾತರಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಮತ ಕ್ಷೇತ್ರದ ಶಾಸಕರಾದ ವಿಠ್ಠಲ ದೋಂಡಿಬಾ ಕಟಕದೊಂಡ ಮಾತನಾಡಿ, ಉದ್ಯೋಗದಾತರು ತಮ್ಮ ಮನೆ ಬಾಗಿಲಿಗೆ ಉದ್ಯೋಗಗಳನ್ನು ನೀಡಲು ಇಲ್ಲಿ ಆಗಮಿಸಿದ್ದಾರೆ ವಿದ್ಯಾರ್ಥಿಗಳು ತಮ್ಮ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಉದ್ಯೋಗ ಸಿಗದಿದ್ದರೆ ಯಾರು ಕೂಡ ಹತಾಶೆ ಮನೋಭಾವ ಹೊಂದಬಾರದು ಮುಂದಿನ ದಿನಗಳಲ್ಲಿ ಉದ್ಯೋಗ ಸಿಗುತ್ತದೆ ಎಂಬ ಮನೋಭಾವ ತಾವುಗಳು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷರಾದ ಕಾಂತಾ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಯೋಗಿವಾಗಿ ಶಾಲಾ ಹಂತದಲ್ಲಿ ನನ್ನ ವೃತ್ತಿ ನನ್ನ ಆಯ್ಕೆ ಹಾಗೂ ಕಾಲೇಜು ಹಂತದಲ್ಲಿ ಕಲಿಕೆ ಜೊತೆ ಕೌಶಲ್ಯ ಎಂಬ ವಿಭಿನ್ನ ರೀತಿಯ ಕೌಶಲ್ಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿ ಸುಮಾರು ೪೦ಕ್ಕಿಂತಲೂ ಹೆಚ್ಚು ಕಂಪನಿಗಳು ಆಗಮಿಸಿವೆ ಈಗಾಗಲೇ ೨ ಸಾವಿರ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಆ.೧೬ ರಂದು ಕಲಬುರ್ಗಿಯಲ್ಲಿ ವಲಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಇಲ್ಲಿ ಉದ್ಯೋಗ ಸಿಗದವರು ಅಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಂಪನಿಗಳಲ್ಲಿ ಆಯ್ಕೆಯಾದ ೫ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಉದ್ಯೋಗ ಪತ್ರ ನೀಡಲಾಯಿತು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಬಿ.ಎಸ್. ರಾಠೋಡ, ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿ ಮಹೇಶ ಮಾಳವಾಡೆಕರ, ಚಡಚಣ ಪಟ್ಟಣ ಪಂಚಾಯತ ಅಧ್ಯಕ್ಷ ಮಲ್ಲಿಕಾರ್ಜು ದೋತ್ರೆ, ಉಪಾಧ್ಯಕ್ಷ ಇಲಾಹಿ ನದಾಫ್, ಸಂಗಮೇಶ್ವ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಸವರಾಜ ಯಂಕಂಚಿ, ಕಾರ್ಯದರ್ಶಿ ಬಿ.ಎಸ್. ಎಡವೆ, ನಿರ್ದೇಶಕರಾದ ಎಸ್.ಆರ್. ಆವಜಿ, ಆಡಳಿತಾಧಿಕಾರಿ ಚೋರಗಿ, ಪಟ್ಟಣ ಪಂಚಾಯತ ಸದಸ್ಯರು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ಉದ್ಯೋಗ ಮೇಳದಲ್ಲಿ ವಿಜಯಪುರದ ಎಲ್.ಐ.ಸಿ, ಸಂತೋಷ ಅಟೋ ವಿಂಗ್ಸ್, ಸ್ವತಂತ್ರ ಮೈಕ್ರೋ ಫೈನಾನ್ಸ, ನವ ಭಾರತ ಪರ್ಟಿಲೈಜರ್, ಮಲಬಾರ ಗೋಲ್ಡ್ ಮತ್ತು ಡೈಮಂಡ್ಸ್, ಎಮ್.ಇ.ಎಸ್. ಶಿಕ್ಷಣ ಸಂಸ್ಥೆ ಚಡಚಣ ವಿಜಯಪುರ ನಾರಾಯಣ ಹುಂಡೈ ಕಾರ್ ಶೋರೂಂ ಜೊತೆಗೆ ೪೦ಕ್ಕಿಂತಲೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.
ಚಡಚಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂಜು ಖಡಗೇಕರ ಸ್ವಾಗತಿಸಿದರು. ಸುನಂದಾ ಬಾಲಪ್ಪನವರ ನಿರೂಪಿಸಿದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಸಿ.ಬಿ. ಕುಂಬಾರ ವಂದಿಸಿದರು.
೨೪೩ ಉದ್ಯೋಗಾಂಕಾಕ್ಷಿಗಳ ಆಯ್ಕೆ
ಉದ್ಯೋಗ ಮೇಳದಲ್ಲಿ ೨೫೪೨ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ೧೪೫೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೨೪೩ ಉದ್ಯೋಗಾಂಕಾಕ್ಷಿಗಳು ಆಯ್ಕೆಯಾಗಿದ್ದಾರೆ. ೨೧೪ ವಿದ್ಯಾರ್ಥಿಗಳು ವೇಟಿಂಗ್ ಲಿಸ್ಟ್ನಲ್ಲಿದ್ದಾರೆ. ಒಟ್ಟು ೪೩ ವಿದ್ಯಾರ್ಥಿಗಳು ನೋಂದಣಿಯಾದ್ದು ೨೫ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

