ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕುಸಿತಗೊಂಡಿದ್ದ
ಆಲಮಟ್ಟಿ ಜಲಾಶಯಕ್ಕೆ ತಡವಾಗಿಯಾದರೂ ಸೋಮವಾರ ಒಳಹರಿವು ಆರಂಭಗೊಂಡಿದ್ದು, ಅವಳಿ ಜಿಲ್ಲೆಯ ಜನರಿಗೆ ಸಂತಸ ಮೂಡಿಸಿದೆ.
ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ಬೆಳಗ್ಗೆ ೫೦೭.೭೯ ಮೀಟರ್ ಎತ್ತರದಲ್ಲಿ ೨೦.೬೫೪ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವು ೧,೨೩೨ ಕ್ಯೂಸೆಕ್ ಇದೆ. ಕೆಪಿಸಿಎಲ್ ಮೂಲಕ ೧೦೦ ಕ್ಯೂಸೆಕ್ ಹಾಗೂ ಕುಡಿವ ನೀರು, ಹಿನ್ನೀರು ಬಳಕೆಗೆಂದು ೭೨೨ ಕ್ಯೂಸೆಕ್ ಸೇರಿ ೮೨೨ ಕ್ಯೂಸೆಕ್ ಹೊರಹರಿವು ಇತ್ತು.
ಜುಲೈ ಮೊದಲವಾರ ಬಂದರೂ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಕಂಡು ಬಂದಿರಲಿಲ್ಲ. ಹೀಗಾಗಿ ಡೆಡ್ಸ್ಟೋರೇಜ್ ಹೊರತು ಪಡಿಸಿ ೨.೯೨೭ ಟಿಎಂಸಿ ನೀರನ್ನೇ ನಂಬುವಂತಾಗಿತ್ತು. ಇನ್ನೂ ಕೆಲ ದಿನಗಳು ಕಳೆದಿದ್ದರೆ ಅವಳಿ ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಆದರೆ ಸೋಮವಾರದಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ಅವಳಿ ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜನರಿಗೆ ಸಂಭ್ರಮಿಸುವಂತೆ ಮಾಡಿದೆ.
ಈ ವರ್ಷ ಅಧಿಕ ಮಾಸ ಬಂದಿದ್ದು, ಈಗ ನಮಗೆ ಜೂನ್ ಸಾತ್ ರೀತಿ ಅನಿಸುತ್ತಿದೆ ಒಟ್ಟಾರೇ ನೀರು ಬಂದಿದ್ದು ಖುಷಿ ನೀಡಿದೆ ಎಂದು ಹಲ ರೈತರು ಖುಷಿ ವ್ಯಕ್ತಪಡಿಸಿದರು.
ಹೆಚ್ಚಿದ ಮಹಾ ಮಳೆ;
ಮಹಾರಾಷ್ಟçದ ಕೃಷ್ಣಾ ಕಣಿವೆಯಲ್ಲಿ ಭಾರಿ ಮಳೆ ಅಬ್ಬರ ಸೋಮವಾರ ವೂ ಮುಂದುವರೆದಿದೆ.
ಕೊಯ್ನಾ ೨೫೭ ಮಿ.ಮೀ, ನವಜಾ ೨೪೪ ಮಿ.ಮೀ, ಮಹಾಬಳೇಶ್ವರದಲ್ಲಿ ದಾಖಲೆಯ ೪೭೩ ಮಿ.ಮೀ ಮಳೆಯಾಗಿದೆ. ಮಹಾರಾಷ್ಟçದಲ್ಲಿ ಭಾರಿ ಮಳೆಯಾಗುತ್ತಿದ್ದರೂ ಅಲ್ಲಿನ ಜಲಾಶಯಗಳ ಸಾಮರ್ಥ್ಯ ದ ಶೇ ೩೫ ರಷ್ಟು ಮಾತ್ರ ಭರ್ತಿಯಾಗಿವೆ. ಇದೇ ರೀತಿ ೧೫ ದಿನಗಳ ಕಾಲ ನಿರಂತರ ಮಳೆಯಾದರೆ ಆಲಮಟ್ಟಿ ಜಲಾಶಯ ಭರ್ತಿಯತ್ತ ಸಾಗಲಿದೆ.
ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ೫೯,೮೭೫ ಕ್ಯೂಸೆಕ್ ಕೃಷ್ಣೆಯ ಹರಿವಿದ್ದು, ಕಲ್ಲೋಲ ಬ್ಯಾರೇಜ್ ಬಳಿ ದೂಧಗಂಗಾ ನದಿಯ ಹರಿವು ೧೭,೨೪೮ ಕ್ಯೂಸೆಕ್ ಸೇರಿ ಕೃಷ್ಣೆಯ ಹರಿವು ೭೭,೧೨೩ ಕ್ಯೂಸೆಕ್ ಇದೆ. ಹೀಗಾಗಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಿಗೆ ಇರಲಿದೆ.
ಹಿಪ್ಪರಗಿ ಜಲಾಶಯದಿಂದ ೫೫,೧೫೦ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.

