ಕುಡಿಯುವ ನೀರಿನ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಅಶೋಕ ಮನಗೂಳಿ ಖಡಕ್ ವಾರ್ನಿಂಗ್
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೇಕಾಬಿಟ್ಟಿಯಾಗಿ ವರದಿ ಸಲ್ಲಿಸಿ ಹೋಗದೇ ಅಲ್ಲಿನ ಸತ್ಯಾಂಶವನ್ನು ತಿಳಿದುಕೊಂಡು ಗ್ರಾಮಸ್ಥರಿಗೆ ಜೂನ್ ಮಧ್ಯದ ಅವಧಿಯವರೆಗೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜೆಜೆಎಂ ಕಾಮಗಾರಿ ಕಳಪೆ ಮಟ್ಟದ್ದಾಗಿವೆ ಎಂಬ ಮಾತುಗಳು ಕೇಳಿ ಬಂದದ್ದು, ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡ ಕುಡಿಯುವ ನೀರಿನ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯನ್ನು ಅಧಿಕಾರಿಗಳು ಅರಿತುಕೊಂಡು ಜನ ಸಾಮಾನ್ಯರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಲು ಆದ್ಯತೆ ವಹಿಸಬೇಕು. ಬಸ್ತಿಹಾಳ ಮತ್ತು ಹಂದಿಗನೂರ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಎರಡು ದಿನಗಳಲ್ಲಿ ಕೆರೆಯಲ್ಲಿ ಮೋಟರ್ ಬಿಟ್ಟು ನೀರು ಹರಿಸಬೇಕು. ಮುಂಬರುವ ದಿನಮಾನಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ಅಧಿಕಾರಿಗಳು ಹಾರಿಕೆ ಉತ್ತರ ನೀಡದೇ ಸ್ಥಾನಿಕವಾಗಿದ್ದುಕೊಂಡು ಸಾರ್ವಜನಿಕರ ದೂರು ದುಮ್ಮಾನುಗಳನ್ನು ಆಲಿಸಿಕೊಂಡು ನೇರವೇರಿಸುವ ದೆಸೆಯಲ್ಲಿ ಸಮರೋಪದ ಹಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಮತ್ತು ಜನ ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗದಂತೆ ಮುಂಜಾಗೃತ ಕ್ರಮಕೈಗೊಳ್ಳಬೇಕು. ಆಲಮೇಲ ಮತ್ತು ಸಿಂದಗಿ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಗ್ರಾಪಂ ವ್ಯಾಪ್ತಿಯಲ್ಲಿನ ಜೆಜೆಎಂ ಕಾಮಗಾರಿಯ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸಿಂದಗಿ ಮತ್ತು ಆಲಮೇಲ ತಾಲೂಕಿನ ಅಲಹಳ್ಳಿ, ದೇವರನಾವದಗಿ ಎಲ್ಟಿ, ಗುಂದಗಿ, ಕುಮಸಗಿ, ಬಿಸನಾಳ, ಯಂಕಂಚಿ, ಚಾಂದಕವಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಅಧಿಕಾರಿಗಳು ತೆರಳಿ ನೀರು ಪೂರೈಕೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡು ನೀರು ಪೂರೈಕೆ ಮಾಡಬೇಕು. ಆಹೇರಿ, ಬಿಸನಾಳ, ಜಟ್ನಾಳ, ಗೋಲಗೇರಿ, ಸಾಸಾಬಾಳ, ಡವಳರ, ಬ್ಯಾಕೋಡ, ಯಂಕಂಚಿ, ಬಂದಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿನ ಕುರಿತಾಗಿ ಗ್ರಾಪಂ ಅಧ್ಯಕ್ಷರು, ಪಿಡಿಒ ಮತ್ತು ಆರ್ಡಬ್ಲೂö್ಯಎಸ್ ಅಧಿಕಾರಿಗಳು ನೀರಿನ ಕುರಿತು ಸಭೆ ಕರೆಯಿರಿ ಎಂದು ಸೂಚಿಸಿದರು.
ಈ ವೇಳೆ ಸಿಂದಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಆಲಮೇಲ ತಹಶೀಲ್ದಾರ್ ಕೆ.ವಿಜಯಕುಮಾರ, ಸಿಂದಗಿ ತಾಪಂ ಇಒ ರಾಮು ಅಗ್ನಿ, ಆಲಮೇಲ ತಾಪಂ ಇಒ ಫರೀದಾ ಪಠಾಣ ಸೇರಿದಂತೆ ಎರಡು ತಾಲೂಕುಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ಶಾಸಕರಿಂದ ಅಧಿಕಾರಿಗಳಿಗೆ ತರಾಟೆ
ಗುಂದಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ೧ಕೋಟಿ ರೂ.ಅನುದಾನದಲ್ಲಿ ತೆರೆದ ಬಾವಿಗಾಗಿ ಪೈಪಲೈನ್ ಮೂಲಕ ಹರಿಸುವ ಯೋಜನೆಯನ್ನು ಜ.೨೫, ೨೦೨೨ರಲ್ಲಿ ಟೆಂಡರ್ ಕರೆಯಲಾಗಿಗೆ. ೨೦೨೫ ಅಂದರೆ ೩ವರ್ಷಗಳಾದರು ಇನ್ನೂ ಪೂರ್ಣಗೊಂಡಿಲ್ಲ ಎಂದರೆ ಹೇಗೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ತಾರಾನಾಥ ರಾಠೋಡ ಅವರಿಗೆ ಶಾಸಕ ಅಶೋಕ ಮನಗೂಳಿ ವಿಚಾರಿಸಿ ತಾಲೂಕಿನಲ್ಲಿ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದೀರಿ ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡು ಒಂದು ವಾರದೊಳಗೆ ಕಾರ್ಯಪೂರ್ಣಗೊಳ್ಳಬೇಕು.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

