ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮನುಷ್ಯ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕಲ್ಲದೇ ಬೇರಾರಿಂದಲೂ ಕಟ್ಟಿಕೊಡಲು ಸಾಧ್ಯವಿಲ್ಲ. ಜೀವನದ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯವೆಂದು ಬಾಳೇಹೊನ್ನೂರು ಶ್ರೀರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರಶ್ರೀಗಳು ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದ ಶ್ರೀಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಭಾನುವಾರ ಜರುಗಿದ ನೂತನ ಪ್ರೌಢಶಾಲಾ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ. ನೀತಿ ಸಂಹಿತೆಯನ್ನು ಅರಿತವನಿಗೆ ನೆಮ್ಮದಿಯ ಫಲ. ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿ ಮತ್ತು ಅತೃಪ್ತಿಗೆ ಕಾರಣವೆಂದರೆ ತಪ್ಪಾಗದು. ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ಜೀವನ ಹಣ ಸಂಪಾದನೆಯನ್ನು ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ ಧರ್ಮದಿಂದ ಭಾವನೆಗಳು ಬೆಳೆಯುತ್ತವೆ. ಬೆಳೆಯುವ ಮನುಷ್ಯನಿಗೆ ಇವೆರಡರ ಅವಶ್ಯಕತೆಯಿದೆ. ಯಾಳವಾರ ಗ್ರಾಮದ ಹಿರಿಯರು ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘ ಸ್ಥಾಪಿಸಿ ತನ್ಮೂಲಕ ಪ್ರೌಢಶಾಲೆ ಮತ್ತು ವಿದ್ಯಾರ್ಥಿ ನಿಲಯ ಮುನ್ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಐವತ್ತು ವರ್ಷ ತುಂಬಿದ ಸುಸಂದರ್ಭದಲ್ಲಿ ನೂತನ ಪ್ರೌಢಶಾಲೆ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆಗೊಂಡಿರುವುದು ಸಂತೋಷದ ಸಂಗತಿ ಎಂದರು.
ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರು ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಆಧುನಿಕ ಕಾಲದಲ್ಲಿ ಎಲ್ಲರೂ ವಿದ್ಯಾವಂತರಾಗುತ್ತಿರುವುದು ಸಂತೋಷದ ಸಂಗತಿ. ವಿದ್ಯೆಯ ಜೊತೆಗೆ ವಿನಯ ಮತ್ತು ಸಂಸ್ಕಾರವಂತರಾಗಿ ಬಾಳಿದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದ ಯಾಳವಾರ ಗ್ರಾಮದ ಜನರ ಶಿಕ್ಷಣ ಪ್ರೇಮ ಇಷ್ಟೆಲ್ಲ ಅಭ್ಯುದಯಕ್ಕೆ ಕಾರಣವಾಗಿದೆ ಎಂದರು.
ಯಾಳವಾರ ಗುರುಮಠದ ದಾರುಕಲಿಂಗ ಶ್ರೀ ಮಾತನಾಡಿ, ಮನುಷ್ಯ ಜೀವನದಲ್ಲಿ ಗುರಿಯಿಲ್ಲದ ಗುರಿ ಸಾಧಿಸದ ಜೀವನ ವ್ಯರ್ಥ. ಜೀವನದ ಉನ್ನತಿ ಉತ್ಕರ್ಷತೆಗಾಗಿ ಶಿಕ್ಷಣ ಎಲ್ಲರಿಗೂ ಅವಶ್ಯಕ ಎಂದರು.
ಆಲಮೇಲ ಹಿರೇಮಠದ ಚಂದ್ರಶೇಖರಶ್ರೀ ಮಾತನಾಡಿ, ಯಾಳವಾರ ಗ್ರಾಮದ ಜನತೆ ಉತ್ತಮ ವಿದ್ಯಾಸಂಸ್ಥೆ ಕಟ್ಟಿ ಗ್ರಾಮೀಣ ವಿದ್ಯಾರ್ಥಿಗಳ ಬಾಳ ಬದುಕಿಗೆ ಬೆಳಕು ತೋರಿದ್ದಾರೆ ಎಂದರು.
ಡಾ|| ಮಂಜುಳಾ ಪಾಟೀಲ ಆರೋಗ್ಯದ ಕುರಿತು, ಅಶೋಕ ಹಂಚಲಿ, ವ್ಹಿ.ಬಿ.ಮಳಗಿ, ವ್ಹಿ.ಡಿ.ಐಹೋಳೆ ಶಿಕ್ಷಣದ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಜಾಲಹಳ್ಳಿ ಜಯಶಾಂತಲಿಂಗೇಶ್ವರ ಶ್ರೀಗಳು, ಕಡಕೋಳ ರಾಜಗುರು ಮಹಾಲಿಂಗ ಸ್ವಾಮೀಜಿ, ದೇವರಹಿಪ್ಪರಗಿ ಶಿವಯೋಗಿಸ್ವಾಮಿ ಉಪಸ್ಥಿತರಿದ್ದರು. ವಿದ್ಯಾವರ್ಧಕ ಸಂಘ ಹಾಗೂ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ೧೯೭೦ ರಿಂದ ೨೦೨೬ ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ, ವಿದ್ಯಾರ್ಥಿನೀಯರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕರಾದ ಸೋಮನಗೌಡ ಪಾಟೀಲ(ಸಾಸನೂರ), ಶರಣಪ್ಪ ಸುಣಗಾರ, ಅರುಣ ಶಹಾಪೂರ, ಬಸನಗೌಡ ಲಿಂಗದಳ್ಳಿ(ಚಬನೂರ) ಸಂಜಯ ಪಾಟೀಲ(ಕನಮಡಿ), ಸುಭಾಸ ಛಾಯಾಗೋಳ, ಆನಂದಗೌಡ ದೊಡಮನಿ, ಸಚೀನಗೌಡ ಪಾಟೀಲ(ಕುದರಿ ಸಾಲವಾಡಗಿ), ಭೀಮನಗೌಡ ಪಾಟೀಲ, ಶರಣಗೌಡ ಮೂಲಿಮನಿ, ಬಸಯ್ಯ ಹಿರೇಮಠ, ಬಿ.ವೈ.ಭಂಟನೂರ, ಜಿ.ಆರ್.ಕುಂಬಾರ ಶ್ರೀಮತಿ ಸುನಂದಾ ಜಾಲವಾದಿ ಇದ್ದರು.

