ದಾಖಲಾತಿ ನೀಡಲು ಕಾರ್ಯದರ್ಶಿ ಮೀನಾಮೇಷ | ಕೋರ್ಟ್ ಮೊರೆಹೋಗಲು ನಿರ್ದೇಶಕ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ 2026-27ನೇ ಸಾಲಿನ ಅರ್ಹ ಅಂತಿಮ ಮತದಾರರ ಪಟ್ಟಿಯಿಂದ ನನ್ನನ್ನುಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಹುಮತದಿಂದ ನನ್ನನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಕಳುಹಿಸಿದರೂ ನಡವಳಿಯಲ್ಲಿ ಸದಸ್ಯತ್ವ ಸಂಬಂಧ ಪೂರ್ಣವಾಗಿ ಬರೆದಿಲ್ಲ, ಮಧ್ಯದಲ್ಲಿ ಹೆಸರು ಸೇರಿಸಲಾಗಿದೆ ಎಂಬ ಕುಂಟು ನೆಪವೊಡ್ಡಿ ಕಾರ್ಯದರ್ಶಿ ಬಿ.ಎನ್ ನಿಂಗರಾಜುರವರು ನನ್ನನ್ನ ಅನರ್ಹಗೊಳಿಸಲಾಗಿದೆ ಎಂದು ಸೂಚನಾ ಫಲಕದಲ್ಲಿ ಪ್ರಕಟಿಸಿದ್ದಾರೆ ಎಂದು ನಿರ್ದೇಶಕ ಎಂ.ಡಿ. ಮಂಚಯ್ಯ ಆರೋಪ ಮಾಡಿದ್ದಾರೆ.
ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು ನಡಾವಳಿ ಅರ್ಜಿ ಭರ್ತಿ ಮಾಡಿರುವವವರು ಕಾರ್ಯದರ್ಶಿಗಳು. ಇದರಲ್ಲಿ ನನ್ನ ತಪ್ಪು ಏನಿದೆ?. ನಡವಳಿಯಲ್ಲಿ ಏನು ತಪ್ಪಾಗಿ ಬರೆಯಲಾಗಿದೆ ಸೇರಿದಂತೆ ಜುಲೈ ನಾಲ್ಕರಂದು ಕಚೇರಿಗೆ ಬಂದು ಚುನಾವಣೆಗೆ ಬೇಕಾದ ಪೂರಕ ದಾಖಲಾತಿ ಕೇಳಿದರೆ ಕೊಡುತ್ತಿಲ್ಲ. ರಿಟರ್ನಿಂಗ್ ಅಧಿಕಾರಿ ಆದೇಶ, ಮತಪಟ್ಟಿ ಪರಿಶೀಲನಾಧಿಕಾರಿ ಆದೇಶ, ಚುನಾವಣಾ ವೇಳಾಪಟ್ಟಿ ಹಾಗೂ ನನ್ನ ಡಿಲಿಗೇಟ್ ಫಾರಂ ತಿರಸ್ಕರಿಸುವ ಪ್ರತಿ ಕೊಡುವಂತೆ ಟಿ.ಎ.ಪಿ.ಸಿ.ಎಂ.ಎಸ್ ಕಾರ್ಯದರ್ಶಿ ನಿಂಗರಾಜು ಅವರಿಗೆ ಕೇಳಿದರೆ ಕೊಡುತ್ತಿಲ್ಲ. ಐದು ನಿಮಿಶ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಅವರು ಮತ್ತೆ ಕಚೇರಿಗೆ ಬರಲೇ ಇಲ್ಲ. ಫೋನ್ ಕೂಡ ಸ್ವಿಚ್ ಅಪ್ ಮಾಡಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರೆ ಇವರ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆ ಇದೆ. ದಲಿತ ವ್ಯಕ್ತಿಗೆ ಸಹಕಾರ ಸಂಘದಲ್ಲಿ ಅವಕಾಶ ಮಾಡಿಕೊಡಬಾರದೆಂಬ ಮನಸ್ಥಿತಿಯಿಂದ ಇದೆಲ್ಲಾ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸುಮ್ಮನೆ ಇರೋವುದಿಲ್ಲ. ಇದನ್ನ ಖಂಡಿಸಿ ಕಚೇರಿ ಮುಂದೆ ಧರಣಿ ಮಾಡುತ್ತೇನೆ. ನಾನು ಕೇಳಿರುವ ದಾಖಲಾತಿ ಕೊಡುವವರೆಗೂ ಪ್ರತಿಭಟನೆ ನಡೆಸುತ್ತೇನೆ. ಒಂದು ವೇಳೆ ಇದಕ್ಕೂ ಮಣಿಯದಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಎಂ.ಡಿ ಮಂಚಯ್ಯ ಎಚ್ಚರಿಕೆ ನೀಡಿದರು.
ಈ ವೇಳೆ ವಕೀಲರಾದ ಶಿವಯ್ಯ, ದಲಿತ ಮುಖಂಡ ಭಾಗ್ಯಪ್ಪ, ಚಂದ್ರರಾಜ, ನಾಗೇಶ್, ಶಿವಯ್ಯ, ಶಿವಕುಮಾರ್ ಸೇರಿದಂತೆ ಇತರರು ಇದ್ದರು.
“ಪ್ರತಿ ಸೊಸೈಟಿಗಳಲ್ಲೂ ದಲಿತರನ್ನು ಕಡೆಗಣಿಸಲಾಗುತ್ತಿದೆ. ಅವರಿಗೆ ಅಧಿಕಾರ ಕೊಡಬಾರದೆಂಬ ಕೆಟ್ಟ ಉದ್ದೇಶದಿಂದ ಎಂ.ಡಿ ಮಂಚಯ್ಯ ಅವರನ್ನು ಕೂಡ ಅನರ್ಹಗೊಳಿಸಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ನಮ್ಮ ದಲಿತ ಸಮುದಾಯ ಒಕ್ಕೊರಲಿನಿಂದ ಖಂಡಿಸಿ ಬೀದಿಗಿಳಿಯಲಿದೆ.”
– ಭಾಗ್ಯಪ್ಪ
ದಲಿತ ಮುಖಂಡರು

