ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೃಷ್ಣಾ ನದಿ ಮೈದುಂಬಿ ಹರಿಯಲಿ, ರೈತರು ಹಾಗೂ ಸಾರ್ವಜನಿಕರಿಗೆ ನೀರಿನ ಕೊರತೆ ಎದುರಾಗದಿರಲಿ ಎಂಬ ಆಶಯದೊಂದಿಗೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ವಿಶೇಷ ಪೂಜೆ ಸಲ್ಲಿಸಿದರು.
ಕೊರ್ತಿ-ಕೊಲ್ಹಾರ ಹಳೆಯ ಕೃಷ್ಣಾ ನದಿ ಸೇತುವೆಯಲ್ಲಿ, ಕೊರ್ತಿ-ಕೊಲ್ಹಾರ ಸೇತುವೆ ಪುನರ್ನಿರ್ಮಾಣ ಹೋರಾಟ ಸಮಿತಿ ಹಾಗೂ ನೂರಾರು ರೈತರ ಸಹಭಾಗಿತ್ವದಲ್ಲಿ 30 ವರ್ಷಗಳ ನಂತರ ಸಂಪೂರ್ಣವಾಗಿ ತೆರೆದಿರುವ ಹಳೆಯ ಸೇತುವೆಯಲ್ಲಿ ಪೂಜೆ ನೆರವೇರಿಸಲಾಯಿತು.
ಈ ವೇಳೆ ಕೃಷ್ಣಾ ಮಾತೆಯನ್ನು ಪ್ರಾರ್ಥಿಸಿ, ಮಳೆ ಸಮೃದ್ಧಿಯಾಗಿ ಸುರಿದು ನದಿ ತುಂಬಿ ಹರಿಯಲಿ ಎಂದು ಬೇಡಿಕೊಳ್ಳಲಾಯಿತು.
ಮಳೆಗಾಲ ತಡವಾಗುತ್ತಿರುವ ಹಿನ್ನೆಲೆ ರೈತರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಕಳೆದ ಒಂದು ವಾರದಿಂದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು. ನದಿ ಮೈದುಂಬಿ ಹರಿದರೆ ರೈತರ ಬದುಕು ಹಸನಾಗುತ್ತದೆ, ಇದರಿಂದ ಸಮಸ್ತ ಜನರ ಜೀವನ ಸುಖಕರವಾಗುತ್ತದೆ ಎಂದರು.
ದಕ್ಷಿಣ ಭಾರತದಲ್ಲಿಯೇ ಅತ್ಯಂತ ಉದ್ದವಾದ ಸೇತುವೆ ಕೊರ್ತಿ ಕೊಲ್ಹಾರ ಸೇತುವೆಯು ನಿರ್ಮಾಣವಾಗಲು ಹಳೇಯ ಸೇತುವೆಯೇ ಪ್ರೇರಣೆಯಾಗಿದ್ದು ಆ ಸೇತುವೆಯ ಮೂಲಕ ಮತ್ತೊಮ್ಮೆ ವಾಹನಗಳು ಸಂಚರಿಸುವಂತಾಗಿರುವದನ್ನು ೩೦ ವರ್ಷಗಳ ನಂತರ ನೋಡುವಂತಾಯಿತು ಇದೇ ವೇಳೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಹಳೆಯ ಸೇತುವೆಯ ಮಹತ್ವವನ್ನು ವಿವರಿಸಿದ ಅವರು, ಇದು ದಕ್ಷಿಣ ಮತ್ತು ಉತ್ತರ ಭಾರತವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿತ್ತು ಎಂದು ತಿಳಿಸಿದರು.
ಇಂತಹ ಐತಿಹಾಸಿಕ ಸೇತುವೆಗಳ ಬಗ್ಗೆ ಇಂದಿನ ಯುವ ಪೀಳಿಗೆ ಅರಿವು ಹೊಂದಬೇಕು ಎಂದು ಕರೆ ನೀಡಿದರು.
ನಂತರ ಹೋರಾಟದ ನೆನಪುಗಳನ್ನು ಮೆಲಕು ಹಾಕುತ್ತಾ ಹಳೆಯ ಸೇತುವೆ, ಮಾವಿನ ತೋಟ, ವನದೇವಿ ಸ್ಥಳ, ವಿಜಯಪೂರ ನಗರ ನೀರು ಸರಬರಾಜು ಬಳಿ ಕೆಲಹೊತ್ತು ಕುಳಿತು ಹೋರಾಟದ ನೆನಪುಗಳನ್ನು ಮೆಲಕು ಹಾಕಿದರು. ಅಲ್ಲದೆ, ಮಹಿಪಾತದಾಸರ ಬೃಂದಾವನ, ಅನಂತಶಯನ ದೇವಸ್ಥಾನ ಹಾಗೂ ರುದ್ರಪಶುಪತಿ ಮಠಗಳ ಇತಿಹಾಸವನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಬಾಬು ಭಜಂತ್ರಿ, ಅಪ್ಪಾಶಿ ಮಟ್ಯಾಳ, ಶ್ರೀಶೈಲ ಅಥಣಿ, ಮಾಜಿ ಅಧ್ಯಕ್ಷರಾದ ಕಲ್ಲಪ್ಪ ಸಿ ಸೊನ್ನದ, ವಿರುಪಾಕ್ಷಿ ಕೋಲಕಾರ, ಎಸ್.ಎನ್. ಗಿಡ್ಡಪ್ಪಗೋಳ, ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ, ಇಸ್ಮಾಯಿಲ್ ತಹಶೀಲ್ದಾರ, ಯುವ ಮುಖಂಡ ಚಂದ್ರಶೇಖರ ಬೆಳ್ಳುಬ್ಬಿ, ಸಗರೆಪ್ಪ ಮುರನಾಳ, ಜಗದೀಶ ಸುಣಗದ, ಜಾನಪದ ಕಲಾವಿದರ ತಂಡ, ಮುಸ್ತಪ್ಪ ಮುಲ್ಲಾ, ಹಣಮಂತ ಕೊಠಾರಿ, ಸುಭಾಸ ಭಜಂತ್ರಿ, ನೂರಾರು ರೈತರು ಭಾಗವಹಿಸಿದ್ದರು.

