ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪತ್ನಿಯನ್ನು ಹತ್ಯೆಗೈದ ಪತಿ ನೇಣಿಗೆ ಶರಣಾದ ಘಟನೆ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಸಿದ್ದಪ್ಪ ಹರನಾಳ(೩೩) ಮತ್ತು ಮೇಘಾ ಹರನಾಳ(೨೮) ಎಂದು ಗುರುತಿಸಲಾಗಿದೆ. ಮೃತರ ಜಮೀನಿನಲ್ಲಿಯೇ ಈ ಘಟನೆ ಸಂಭವಿಸಿದ್ದು ಪ್ರಕರಣದ ಹಿಂದೆ ಸಿದ್ದಪ್ಪನ ಸಂಬಂಧಿಕರ ಕಿರುಕುಳ ಇತ್ತು ಎನ್ನಲಾಗಿದೆ. ಮೃತ ದಂಪತಿಗಳು ೮ವರ್ಷಗಳ ಹಿಂದೆ ಮದುವೆಯಾಗಿದ್ದು ನಾಲ್ಕು ಜನ ಮಕ್ಕಳಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವಾಯ್ಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮೊಹಮ್ಮದ ಫಸಿಯುದ್ದಿನ, ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಘಟನೆಯ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮದವರ ಜೊತೆ ಮಾತನಾಡಿ, ಘಟನೆಯಲ್ಲಿ ಮೇಘಾಳನ್ನು ಆಕೆಯ ಸೀರೆಯಿಂದ ಆಕೆಯ ಕುತ್ತಿಗೆ ಬಿಗಿದು ಹತ್ತೆಗೈದ ಸಿದ್ದಪ್ಪನು ತಾನು ನೇಣು ಹಾಕಿಕೊಂಡ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ತನಿಖೆಯ ನಂತರವೇ ಘಟನೆಯ ಹಿನ್ನೆಲೆ ತಿಳಿದು ಬರಲಿದೆ ಎಂದರು.
ಪ್ರಕರಣ ದಾಖಲು
ಘಟನೆಯ ಹಿನ್ನೆಲೆ ಮೂರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನನ್ನ ಮಗಳ ಕೊಲೆ ಹಿಂದೆ ಅವರಿಗೆ ಕಿರುಕುಳ ಮತ್ತು ಹಿಂಸೆ ನೀಡಿದ ಆಕೆಯ ಗಂಡ ಸಿದ್ದಪ್ಪ, ಮೈದುನ ಶ್ರೀಕಾಂತ ಮಲ್ಲಪ್ಪ ಹರನಾಳ ತಾಯಿ ಶಾಂತಮ್ಮ ಮಲ್ಲಪ್ಪ ಹರನಾಳ ಇವರು ಕಾರಣ ಎಂದು ಮೃತಳ ತಾಯಿ ಗದ್ದೆಮ್ಮ ಹೊಸಮನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
“ಇದ್ದೊಬ್ಬ ಮಗಳನ್ನು ಕಳೆದುಕೊಂಡಿದ್ದೇನೆ. ೮ತಿಂಗಳ ತಾಯಿಯನ್ನು ಕಳೆದುಕೊಂಡ ಮೃತಳ ಮಗುವನ್ನು ಕಂಡು ಕರುಳು ಕಿತ್ತಿ ಬರುತ್ತಿದೆ. ದೇವರು ನನಗೆ ಇಂತಹ ಶಿಕ್ಷೆ ನೀಡುತ್ತಾನೆ ಅಂತಾ ಕನಸಿನಲ್ಲಿಯೂ ನೆನೆಸಿರಲಿಲ್ಲ.”
– ಗದ್ದೆಮ್ಮ ಹೊಸಮನಿ
ಮೃತಳ ತಾಯಿ

