ಆಲಮೇಲ ಪಪಂ ಸಾಮಾನ್ಯ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಪ್ರಶ್ನೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಅಭಿವೃದ್ದಿಗೆ ಮಂಜುರಾಗಿರುವ ಅನುದಾನ ಸಮಯಕ್ಕೆ ಸರಿಯಾಗಿ ಬಳಕೆ ಮಾಡಿಕೊಳ್ಳದಿದ್ದರೆ ಅಭಿವೃದ್ದಿ ಆಗಲು ಹೇಗೆ ಸಾದ್ಯ? ಎಂದು ಶಾಸಕ ಅಶೋಕ ಮನಗೂಳಿ ಪ.ಪಂ ಮುಖ್ಯಾಧಿಕಾರಿ, ಅಧ್ಯಕ್ಷ ಸದಸ್ಯರೆಲ್ಲರನ್ನು ತರಾಟೆಗೆ ತಗೆದುಕೊಂಡರು.
ಸೋಮವಾರ ಆಲಮೇಲ ಪಟ್ಟಣ ಪಂಚಾಯಿತಿ ೨೦೧೮-೧೯ನೇ ಸಾಲಿನ ಎಸ್ಎಪ್ಸಿ ವಿಶೇಷ ಅನುದಾನದ ಕಾಮಗಾರಿ ಪ್ರಗತಿ ಕುರಿತು ಚರ್ಚಿಸಲು ಕರೆದಿರುವ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಹೇಳಿದರು.
ಪಟ್ಟಣದ ಅಭಿವೃದ್ದಿಗೆ ೨೦೧೮-೧೯ನೇ ಸಾಲಿನ ಎಸ್ಎಪ್ಸಿ ವಿಶೇಷ ಅನುದಾನದ ಕಾಮಗಾರಿಗಳು ಬಹುದಿನಗಳಿಂದ ನೆನಗುದಿಗೆ ಬಿದ್ದಿವೆ ಪ್ರಗತಿಯಲ್ಲಿರುವ ಕಾಮಗಾರಿಗಳು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ಇನ್ನು ಬಹುತೇಕ ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ. ಒಂದು ವಾರ ಕಾಲಾವಕಾಶದಲ್ಲಿ ಕಾಮಗಾರಿ ಪ್ರಾರಂಭಿಸದಿದ್ದರೆ ಕಾಮಗಾರಿ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಳೆಯ ಠರಾವು ಪೂರ್ಣಗೊಳಿಸದೆ ಹೊಸದಾಗಿ ಸಾಮಾನ್ಯ ಸಭೆ ಕರೆದಿರುವುದು ಮತ್ತು ಪ್ರಸ್ತುತ ಬೇಸಿಗೆಯಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಯಾವ ಮೂಲಗಳು ಅವಲಂಬಿಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಅಧಿಕಾರಿಗಳಲ್ಲಿ ಯಾವುದೆ ಮಾಹಿತಿ ಇಲ್ಲದರಿಂದ ಮುಖ್ಯಾಧಿಕಾರಿ ಸುರೇಶ ನಾಯಕ ಅವರನ್ನು ತರಾಟೆಗೆ ತಗೆದುಕೊಂಡರು.
ಆಲಮೇಲ ಪಟ್ಟಣ ಪಂಚಾಯಿತಿಗೆ ಆದಾಯದ ಕೊರತೆ ಹೆಚ್ಚಿದ್ದು ಆದಾಯದ ಮೂಲಗಳನ್ನು ಹೆಚಿಸಿಕೊಳ್ಳಬೇಕು ಎಂದರು.
ಪಟ್ಟಣದ ಪ್ರಮುಖ ದೇವರ ಅಗಸಿ ಕಾಮಗಾರಿ ಪ್ರಾರಂಭವಾಗಿ ೫ ವರ್ಷಗಳಾದರೂ ಇನ್ನು ಪೂರ್ಣಗೊಂಡಿಲ್ಲ ಈ ಬಗ್ಗೆ ಸಾರ್ವಜನಿಕರು ಬೆಸರಗೊಂಡಿದ್ದಾರೆ ಒಂದು ತಿಂಗಳಲ್ಲಿ ದೇವರ ಅಗಸಿ ಕಾಮಗಾರಿ ಪೂರ್ಣಗೊಳಿಸಬೇಕು. ಹಾಗೂ ಪಟ್ಟಣದಲ್ಲಿ ೩೫ ಲಕ್ಷ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಚಾಲನೆ ನೀಡದೆ ಅದರ ಬದಲಿಗೆ ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಮತ್ತೊಮ್ಮೆ ಭವನ ಮತ್ತು ವಾಣಿಜ್ಯ ಮಳಿಗೆ ನಿರ್ಮಾಣದ ಪರವಾನಿಗೆ ಪಡೆದುಕೊಂಡು ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಶಾಸಕರು ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸದಸ್ಯರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಸಂಜೀವಕುಮಾರ ಯಂಟಮಾನ, ಹಣಮಂತ ಹೂಗಾರ ಆರೋಪಕ್ಕೆ ಅಧ್ಯಕ್ಷ ಸಾದೀಕ ಸುಂಬಡ, ನಿಮ್ಮ ಶಾಸಕರು ಇದೇ ರೀತಿ ತಾರತಮ್ಯ ಮಾಡಿದ್ದರು ಎಂದಾಗ ಕೆಲಹೊತ್ತು ವಾದ ವಾದಗಳ ನಂತರ ಶಾಸಕರು ಸಮಾಧಾನಪಡಿಸಿ, ಅಭಿವೃದ್ದಿ ವಿಷಯದಲ್ಲಿ ಯಾವುದೆ ರಾಜಕೀಯ ತಾರತಮ್ಯ ಮಾಡುವದಿಲ್ಲ. ಕೆಲವು ವಾರ್ಡಗಳಿಗೆ ಹೆಚ್ಚಿನ ಸಮಸ್ಯೆಗಳಿರುವದರಿಂದ ಹೆಚ್ಚಿನ ಅನುದಾನ ನೀಡಿರಬಹುದು, ಯಾವುದೆ ಕಾರಣಕ್ಕು ತಾರತಮ್ಯ ಮಾಡುವದಿಲ್ಲ ಎಂದರು.
ಅಧ್ಯಕ್ಷ ಸಾದೀಕ ಸುಂಬಡ, ಉಪಾದ್ಯಕ್ಷೆ ಸುಮಾ ಕತ್ತಿ. ಮುಖ್ಯಾಧಿಕಾರಿ ಸುರೇಶ ನಾಯಕ, ಸದಸ್ಯರಾದ ಹಣಮಂತ ಹೂಗಾರ, ಡಾ| ಸಂಜೀವಕುಮಾರ ಎಂಟಮಾನ, ಅಶೋಕ ಕೊಳಾರಿ, ಚಂದು ಹಳೆಮನಿ, ಶ್ರೀಶೈಲದಾದ ರಜಪೂತ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

