ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಮಾಜದ ಕಟ್ಟಕಡೆಯ ಮಹಿಳೆಯರಿಗಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಮ್) ಯೋಜನೆ ಬಹಳ ಸಹಕಾರಿಯಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಹೇಳಿದರು.
ಪಟ್ಟಣದ ಸಂತೆ ಮಾರುಕಟ್ಟೆ ಸ್ಥಳದ ಹತ್ತಿರ ಜಿಲ್ಲಾ ಪಂಚಾಯತಿ ವಿಜಯಪುರ ಹಾಗೂ ತಾಲೂಕ ಪಂಚಾಯತಿ ಕೊಲ್ಹಾರ ಇವರ ಸಹಯೋಗದಲ್ಲಿ ಎನ್.ಆರ್.ಎಲ್.ಎಮ್ ಯೋಜನೆಯಡಿ ಸಂಜೀವಿನಿ ಮಾಸಿಕ ಸಂತೆ ಮೇಳ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಮಹಿಳೆಯರಿಗೆ ಉನ್ನತ ತರಬೇತಿಗಳನ್ನು ನೀಡಿ ಸಾಲ ಸೌಲಭ್ಯಗಳನ್ನು ನೀಡಿ ಸ್ವಂತ ಉದ್ಯೋಗ ಮಾಡಲು ಹಾಗೂ ಸ್ವ ಸಹಾಯ ಗುಂಪಿನ ಸದಸ್ಯರುಗಳು ಸೇರಿ ಉದ್ಯಮ ಪ್ರಾರಂಭಿಸಲು ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಿ ಕೊಡಲಾಗುವುದು ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ತಾಪಂ ಇಓ ಸುನೀಲ ಮದ್ದಿನ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವುದರಲ್ಲಿ ಹಾಗೂ ಅವರ ಆರ್ಥಿಕ ಜೀವನ ಮಟ್ಟ ಸುಧಾರಣೆಗಾಗಿ ಸಂಜೀವಿನಿ ಒಕ್ಕೂಟ ತಾಲೂಕಿನಲ್ಲಿ ಮಾದರಿಯಾಗಿದೆ. ಜನರಿಗೆ ಕೈಗೆಟುಕುವಂತೆ ಉತ್ತಮ ಗುಣಮಟ್ಟದ ದಿನ ಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು ಹಾಗೂ ಗೃಹ ಉಪಯೋಗ ವಸ್ತುಗಳನ್ನು ತಯಾರಿಸಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಸಿಗುವಂತೆ ಮಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಜೀವಿನಿ ಮಹಿಳೆಯರು ಗಮನ ಸೆಳೆಯುವಂತಾಗಲಿ ಎಂದು ಹೇಳಿದರು.
ತಾಲೂಕು ವಲಯ ಮೇಲ್ವಿಚಾರಕಿ ನೀಲಾಬಾಯಿ ಭೀ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಎಂಬ ನಾನ್ನುಡಿಯಂತೆ, ಒಂದು ಕುಟುಂಬದ ಜವಾಬ್ದಾರಿ ಹೊತ್ತು ನಿರ್ವಹಿಸುತಾಳೆ. ಅವಳಿಗೆ ಸರಿಸಾಟಿ ಯಾರು ಇಲ್ಲ. ಎಲ್ಲ ರಂಗಗಳಲ್ಲಿ ಮಹಿಳೆಯರು ಒಳ್ಳೆಯ ಕಾರ್ಯನಿರ್ವಹಣೆಯಿಂದ ಹೆಸರು ಮಾಡಿದ್ದಾರೆ. ನಮ್ಮ ತಾಲೂಕಿನ ಸಂಜೀವಿನಿ ಒಕ್ಕೂಟವು ಮುಂಚೂಣೆಯಲ್ಲಿ ಇದೆ ಎಂದು ತಿಳಿಸಿದರು.
ತಾಲೂಕಿನ 10 ಗ್ರಾಮ ಪಂಚಾಯತಿಗಳ ಒಕ್ಕೂಟದ ಅಧ್ಯಕ್ಷರನ್ನು ಹಾಗೂ ಮಹಿಳಾ ಸ್ವಚ್ಛವಾಹಿನಿಯ ಚಾಲಕರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು. ತಾಲೂಕಿನ ಮಸೂತಿ ಗ್ರಾಮ ಪಂಚಾಯತಿಯ ಕರ ವಸೂಲಿಗಾರರಾದ ಬೌರಮ್ಮ ಬರಗಿಮಠ ಇವರು ಪ್ರತಿಶತ 100ರಷ್ಟು ತೆರಿಗೆ ವಸೂಲಿ ಮಾಡಿದ್ದಕ್ಕಾಗಿ ಸನ್ಮಾನಿಸಿಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಉಪಾಧ್ಯಕ್ಷೆ ರಾಜಮಾ ನದಾಫ, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂತೋಷ ಗಣಾಚಾರಿ, ಜಿಪಂ, ತಾಪಂ ಅಧಿಕಾರಿ ಸಿಬ್ಬಂದಿಗಳು ಮತ್ತು ಒಕ್ಕೂಟದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಹಾಯಕ ಲೆಕ್ಕಾಧಿಕಾರಿಗಳಾದ ಆರ್.ಎಸ್. ಪಾಟೀಲ ಸ್ವಾಗತಿಸಿದರು.

