Sವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಶಾಸಕ ಮನಗೂಳಿ ಗೆ ಟಾಂಗ್
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ಮತಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಅನುದಾನ ಕೊಟ್ಟಿದ್ದು ಬಿಜೆಪಿ ಸರಕಾರ. ಈಗಿನ ಶಾಸಕರು ಮಾತ್ರ ಕೇವಲ ಪೂಜೆ ಮಾಡಲಿಕ್ಕೆ ಬಂದಿದ್ದಾರೆ. ಹಿಂದಿನ ಮಾಜಿ ಶಾಸಕರ ಪಾತ್ರವೇ ಏನು ಇಲ್ಲ ಎಂಬಂತೆ ಈಗಿನ ಆಡಳಿತ ಪಕ್ಷದ ಶಾಸಕರು ನಡೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಕಾಮಗಾರಿಗಳಿಗೆ ಈಗಿನ ಶಾಸಕರು ಪೂಜೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಅಶೋಕ ಮನಗೂಳಿ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಟಾಂಗ್ ಕೊಟ್ಟಿದ್ದಾರೆ.
ಸಿಂದಗಿ ಪಟ್ಟಣದ ಮಾಜಿ ಶಾಸಕ ರಮೇಶ ಭೂಸನೂರ ಅವರ ಸ್ವಗೃಹದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜಯಪುರ, ಕಲಬುರಗಿ ಮತ್ತು ಬಾಗಲಕೋಟ ಸೇರಿದಂತೆ ವಿವಿಧ ಭಾಗಗಳ ರೈತರ ತೊಗರಿ ಬೆಳೆ ಈ ಬಾರಿ ಸಂಪೂರ್ಣ ನಾಶವಾಗಿ ರೈತ ಕಂಗಾಲಾಗಿದ್ದರು, ರಾಜ್ಯ ಸರಕಾರ ಮಾತ್ರ ಪರಿಹಾರ ನೀಡದಿರುವುದು ಖೇದಕರ ಸಂಗತಿ. ರಾಜ್ಯ ಕಾಂಗ್ರೆಸ್ ಸರಕಾರ ರೈತ ವಿರೋಧಿ ಸರಕಾರ. ಸರಕಾರವೇ ಈ ಬಾರಿ ಸರಕಾರ ನೀಡಿದ ಜಿಆರ್ಜಿ ೮೧೧ ಮತ್ತು ೧೫೨ತಳಿಯ ತೊಗರಿ ಬೀಜಗಳು ಸರಕಾರವೇ ಕೊಟ್ಟಿದ್ದು ಇದು ಕಳಪೆ ಮಟ್ಟದ್ದಾಗಿದ್ದರಿಂದ ಸರಿಯಾದ ಬೆಳೆ ಬರದೇ ಪಸಲು ನಾಶವಾಗಿ ಹೋಗಿದೆ ಇದಕ್ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ೧೨ಸಾವಿರ ಹೆಕ್ಟರ್ ತೊಗರಿ ಬೆಳೆ ನಾಶವಾಗಿದೆ. ರಾಜ್ಯ ಸರಕಾರ ಕೂಡಲೇ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಕರೆದು ಪರಿಹಾರ ನೀಡಬೇಕು ಎಂದು ಆಗ್ರಹಪಡಿಸಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ತೊಗರಿ ನಾಶವಾದ ಸಂದರ್ಭದಲ್ಲಿ ಎಕರೆಗೆ ೨೫ಸಾವಿರ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ನವರು ಪ್ರತಿಭಟನೆ ಮಾಡಿ ಕೇಳಿದ್ದರು, ಅಂದಿನ ಬಸವರಾಜ ಬೊಮ್ಮಾಯಿ ಸರಕಾರ ಪರಿಹಾರ ನೀಡಿದೆ. ಇಂದು ಸಿದ್ದರಾಮಯ್ಯ ಸರಕಾರವೂ ಸಹ ಕಾಂಗಾಲಾದ ರೈತರಿಗೆ ಎಕರೆಗೆ ೨೫ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜನರಿಗೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಕೇಂದ್ರ ಸರಕಾರ ಹರ್ಗರ್ ಹರ್ನಲ್ ಜೆಜೆಎಂ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕುಡಿಯುವ ನೀರಿನ ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಂಪೂರ್ಣ ನಿರ್ಲಕ್ಷ್ಯ ವಹಿಸಿ ಈ ಕಾಮಗಾರಿಯನ್ನು ಗುತ್ತಿಗೆದಾರರು ಮನಬಂದಂತೆ ನಿರ್ವಹಿಸಿದ್ದಾರೆ ಎಂದು ಆರೋಪಿಸಿ ಅದನ್ನು ಪರಿಶೀಲನೆ ಮಾಡಿ ಪುನಃ ಒಳ್ಳೆಯ ರೀತಿಯಲ್ಲಿ ಮಾಡಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡರು.
ರಾಜ್ಯ ಸರಕಾರ ಅಧಿಕಾರಕ್ಕೆ ಬರಲು ಮುಸ್ಲಿಂರು ಮಾತ್ರ ಮತ ಹಾಕಿದ್ದಾರೆ ಎನ್ನುವ ರೀತಿಯಲ್ಲಿ ಬಜೆಟ್ನಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.೪ರಷ್ಟು ಮೀಸಲಾತಿ, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ ೩೦ಲಕ್ಷ, ಮದುವೆಯಾಗುವವರಿಗೆ ೫೦ಸಾವಿರ ರೂಪಾಯಿ ನೀಡುತ್ತಿದೆ. ರಾಜ್ಯದ ಹಿಂದುಳಿದ ವರ್ಗ ಏನು ಮಾಡಬೇಕು.? ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಇಂದಿನ ರಾಜ್ಯ ಸರಕಾರ ನಿಲ್ಲಿಸಿದೆ. ಅಲ್ಪಸಂಖ್ಯಾತರ ತುಷ್ಟಿಕರಣದಲ್ಲಿ ತೊಡಗಿದ ಕಾಂಗ್ರೆಸ್ ಪಕ್ಷ ತನ್ನ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಕಿಡಿಕಾರಿದರು.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಆಲ್ಲಾಪುರ ಮಾತನಾಡಿ, ರಾಜ್ಯ ಸರಕಾರ ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಕೇಂದ್ರದಿಂದ ೭೫೫೦ರೂ. ನೀಡಲಾಗುತ್ತಿದೆ. ಆದರೆ ರಾಜ್ಯ ಸರಕಾರ ರೂ.೪೫೦ ನೀಡುತ್ತಿಲ್ಲ ಕೂಡಲೇ ಅದನ್ನು ಬಿಡಗಡೆಗೊಳಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಬಿ.ಎಚ್.ಬಿರಾದಾರ, ಗುರು ತಳವಾರ, ಪೀರು ಕೆರೂರ, ಪ್ರಶಾಂತ ಕದ್ದರಕಿ, ಎಸ್.ಎನ್.ಹಿರೇಮಠ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
“ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಅವರು ಶಾಸಕರ ಹಕ್ಕುಗಳನ್ನು ಕಿತ್ತುಕೊಂಡು ಸಂವಿಧಾನ ಬಾಹಿರ ನಡೆಯನ್ನು ಅನುಸರಿಸುತ್ತಿದ್ದಾರೆ. ಮತ್ತು ಕಾಂಗ್ರಸ್ ಪಕ್ಷದ ಪ್ರಚೋದನೆಯಿಂದಲೇ ಸಭಾಧ್ಯಕ್ಷರು ಸರ್ವಾಧಿಕಾರಿ ದೋರಣೆಯನ್ನು ಅನುಸರಿಸುವ ಮೂಲಕ ೧೮ಜನ ಬಿಜೆಪಿ ಶಾಸಕರನ್ನು ೬ ತಿಂಗಳು ಅಮಾನತ್ತು ಮಾಡಿದ್ದು ಬಿಜೆಪಿ ಖಾರವಾಗಿ ಖಂಡಿಸುತ್ತದೆ. ಕೂಡಲೇ ಅಮಾನತನ್ನು ವಾಪಸ್ ಪಡೆಯಬೇಕು. ಹನಿಟ್ರ್ಯಾಪ್ ಪ್ರಕರಣ ಸಿಬಿಐ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಮಾ.೨೬ ರಿಂದ ಒಂದು ವಾರಗಳ ಕಾಲ ಉಗ್ರಹೋರಾಟ ಮಾಡುತ್ತೇವೆ”
– ಎನ್.ರವಿಕುಮಾರ
ವಿಪ ವಿಪಕ್ಷ ಮುಖ್ಯ ಸಚೇತಕರು

