ರಚನೆ
– ದೀಪಾ ಪೂಜಾರಿ
ಕುಶಾಲನಗರ
ಉದಯರಶ್ಮಿ ದಿನಪತ್ರಿಕೆ
ಬಾಲಗಿರಿಗೆ ಬನಗಿರಿಗೆ
ಮರುಳು ಹೋದ
ಹಕ್ಕಿಯಂತೆ,
ಬೇಲಿಯಾಚೆ ನೋಡುವ
ಕನಸುಗಳಂತೆ,
ಕೈಯಲ್ಲಿ ಹಣ್ಣಿದ್ದರೂ
ಬಳಲುವ ಹಸಿವಿನಂತೆ,
ಬದುಕಿ ಬಿಡು ಇದ್ದಂತೆ!
ಮುಗಿಯದ ಹಾದಿಯ
ಬೆಟ್ಟದ ಮೇಲೆ,
ಸಂಜೆಯ ಬೀಸಣಿಯಲ್ಲಿ
ಚಿಂತೆ ಬಿಟ್ಟು,
ಜಲಧಾರೆಯಲಿ ನೀರಿನ
ಹಾಡಂತೆ,
ಬದುಕಿ ಬಿಡು ನೀನು
ಬದುಕು ಇದ್ದಂತೆ!
ಕತ್ತಲಿಗೇ ಬೆಳಕಿನ
ಕನಸು ,
ಮೌನಕ್ಕೂ ನಗುವಿನ
ಮನಸು,
ಗಾಳಿಯೊಂದಿಗೆ ಹಾರುವ
ಗಾಳಿಪಟದಂತೆ,
ಬದುಕಿ ಬಿಡು ನೀನು
ಬದುಕು ಇದ್ದಂತೆ!
ನಾಳೆ ಹೇಗಿರಬಹುದು
ಯಾರು ಬಲ್ಲರು?
ನಿನ್ನ ಹೃದಯವ
ಅರಿಯುವವರಾರು?
ಹೂ ಅರಳುವ ಸಂತಸ
ಸಂಭ್ರಮದಲ್ಲಿ,
ಬದುಕಿ ಬಿಡು ನೀನು
ಬದುಕು ಇದ್ದಂತೆ!
