ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನನ್ನನ್ನು ತಲೆ ತಗ್ಗಿಸಿ ನೋಡು ನಿನ್ನನ್ನು ತಲೆ ಎತ್ತದ ಹಾಗೆ ಮಾಡುವೆ ಎಂದು ಮೊಬೈಲ್ ಹೇಳಿದರೆ ನನ್ನನ್ನು ತಲೆ ತಗ್ಗಿಸಿ ಓದು ನಿನ್ನನ್ನು ಭಾರತವೇ ತಲೆ ಎತ್ತಿ ನೋಡುವಂತೆ ಮಾಡುವೆ ಎಂದು ಪುಸ್ತಕ ಹೇಳುತ್ತದೆ ಎಂದು ಜಮಖಂಡಿ ಓಲೇಮಠದ ಆನಂದ ದೇವರು ನುಡಿದರು.
ತಾಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ನ್ಯಾಶನಲ್ ಶಾಲೆಯ ವತಿಯಿಂದ ಲಿಂ.ಡಾ|| ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳ ನುಡಿನಮನ ಮತ್ತು ರಾಜ್ಯ ಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಧ್ಯದ ಕಾಲ ಘಟ್ಟದಲ್ಲಿ ಯುವಕರು ಗುಟಕಾ ತಿಂದು, ಮಟಕಾ ಆಡಿ, ಮಠಕ್ಕ ಬರಲಾರದಂಗ ಗೊಟಕ್ ಅಂತಾ ಇದಾರೆ. ಎಲ್ಲ ಪಾಲಕರು ನಿಮ್ಮ ಮಕ್ಕಳ ಕೈಯಲ್ಲಿ ಒಳ್ಳೆಯ ಪುಸ್ತಕಗಳನ್ನು ನೀಡಿ. ಆಚಾರ, ವಿಚಾರ ಸಂಸ್ಕೃತಿಗಳನ್ನು ಕಲಿಸಲು ಮುಂದಾಗಬೇಕು ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಮಾತನಾಡಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವದರಿಂದ ಅವರ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮೊಬೈಲ್ ಬಳಕೆ ಜ್ಞಾನವನ್ನು ಇಮ್ಮಡಿ ಗೊಳಿಸಲು ಬಳಸಿಕೊಳ್ಳಬೇಕೆ ಹೊರತು ಇತರ ಬಳಕೆಗೆ ಅವಕಾಶ ನೀಡದಂತೆ ಜಾಗೃತವಹಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ಯರಝರಿಯ ಯಲ್ಲಾಲಿಂಗ ಮಠದ ಮಲ್ಲಾಲಿಂಗ ಮಹಾಸ್ವಾಮಿಗಳು ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಿದ್ದನಗೌಡ ಮಂಗಳೂರ, ಚೇತನ ಶಿವಶಿಂಪಿ, ಶಿವಾನಂದ ವಾಲಿ, ಪ್ರಶಾಂತ ಕಾಳೆ, ಎಸ್.ಎಚ್.ಲೊಟಗೇರಿ, ಚಂದ್ರಶೇಖರ ಶಿವಯೋಗಿಮಠ, ಹೇಮಾ ಬಿರಾದಾರ, ಶರಣು ಟಕ್ಕಳಕಿ, ಅನಿಲ ತೇಲಂಗಿ ಇವರುಗಳಿಗೆ ರಾಜ್ಯಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಜೀರಲಭಾವಿಯ ನಿತ್ಯಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮನಗೂಳಿಯ ಪಟ್ಟಣ ಪಂಚಾಯತ ಅಧ್ಯಕ್ಷ ಎಂ.ಡಿ.ಮೆತ್ರಿ, ಮಾಜಿ ತಾಲೂಕು ಪಂಚಾಯತ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಮಾಜಿ ಗ್ರಾ.ಪಂ ಅಧ್ಯಕ್ಷ ಜಾವಿದ ಇನಾಮದಾರ, ಮುಖಂಡರಾದ ನಿತ್ಯಾನಂದ ಹಿರೇಮಠ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಇತರರು ಇದ್ದರು. ಅಶೋಕ ಗುಂಡಿನಮನಿ ನಿರೂಪಿಸಿದರು.

