ದೆಹಲಿಯ ಅನೇಕ ನಾಯಕರು ಮತ್ತು ಅಧಿಕಾರಿಗಳು ಕೂಡ ಹನಿಟ್ರ್ಯಾಪ್ಗೆ ಬಲಿ | ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ
ಬೆಳಗಾವಿ: ರಾಜ್ಯದಲ್ಲಿ ಕೇವಲ 40 ನಾಯಕರಲ್ಲ, ಕನಿಷ್ಠ 400 ಜನರನ್ನೂ ಹನಿಟ್ರ್ಯಾಪ್ಗೆ ಬಲಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯದಿಂದ ಮಾತ್ರವಲ್ಲ, ದೆಹಲಿಯ ಅನೇಕ ನಾಯಕರು ಮತ್ತು ಅಧಿಕಾರಿಗಳನ್ನು ಕೂಡ ಹನಿಟ್ರ್ಯಾಪ್ಗೆ ಬಲಿ ಮಾಡಲಾಗಿದೆ ಎಂದು ಅವರು ಹೇಳಿದರು.
ಸರ್ಕಾರ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಎಲ್ಲಾ ಪಕ್ಷಗಳ ನಾಯಕರನ್ನು ಇದರಲ್ಲಿ ಸಿಲುಕಿಸಲಾಗಿದೆ. ಹನಿಟ್ರ್ಯಾಪ್ ಮಾಡುವ ಪ್ರಯತ್ನಗಳ ವಿರುದ್ಧ ದೂರು ದಾಖಲಿಸುವಂತೆ ಸಚಿವ ರಾಜಣ್ಣ ಅವರಿಗೆ ನಾನೇ ಹೇಳಿದ್ದೆ ಎಂದು ತಿಳಿಸಿದರು. ಹನಿಟ್ರ್ಯಾಪ್ ಮಾಡಿ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿರುವ ನಿದರ್ಶನಗಳು ಈ ಹಿಂದೆಯೂ ನಡೆದಿವೆ ಎಂದು ಅವರು ಹೇಳಿದರು. ತಮ್ಮ ಕೆಲಸ ಸಾಧಿಸಲು ಹನಿಟ್ರ್ಯಾಪ್ ಮಾಡಿ ಅಧಿಕಾರಿಗಳನ್ನು ಅವರು ಬ್ಲ್ಯಾಕ್ಮೇಲ್ ಮಾಡುತ್ತಾರೆ ಎಂದು ಅವರು ಹೇಳಿದರು.
ಕಳೆದ 20 ವರ್ಷಗಳಿಂದಲೂ ಹನಿಟ್ರ್ಯಾಪ್ ಆಗಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಅಂತ್ಯ ಹಾಡಬೇಕು. ದೆಹಲಿ ನಾಯಕರು ಪಾಪ ಅಮಾಯಕರು, ಅವರೂ ಹನಿಟ್ರ್ಯಾಪ್ಗೆ ಬಲೆಗೆ ಬಿದ್ದಿದ್ದಾರೆ. ಎಲ್ಲ ಪಕ್ಷದ ನಾಯಕರನ್ನೂ ಹನಿ ಟ್ರ್ಯಾಪ್ ಮಾಡಲಾಗಿದೆ. ಮೀನಿಗೆ ಬಲೆ ಬೀಸಿದಂತೆ ಬೀಸಿ ಹನಿಟ್ರ್ಯಾಪ್ ಮಾಡಿ ಅವರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಚಿವ ಜಾರಕಿಹೊಳಿ ಆರೋಪ ಮಾಡಿದ್ದಾರೆ
ಮಾಜಿ ಸಚಿವ ಮತ್ತು ಶಾಸಕ ಆರ್ವಿ ದೇಶಪಾಂಡೆ ಹನಿಟ್ರ್ಯಾಪ್ಗೆ ಬಲಿಯಾದವರನ್ನು ಮೂರ್ಖರು ಎಂದು ಹೇಳಿದ್ದಾರೆ. ಹನಿಟ್ರ್ಯಾಪ್ನಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಾಜಕೀಯದಲ್ಲಿರುವವರು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಒಮ್ಮೆ ಹತ್ಯೆಯಾದರೆ, ಆ ಸ್ಥಾನಮಾನವನ್ನು ಮರಳಿ ಪಡೆಯುವುದು ಕಷ್ಟ ಎಂದು ಅವರು ಹೇಳಿದರು.
ಶೀತಲ ಸಮರಕ್ಕೆ ಹನಿ ಟ್ರ್ಯಾಪ್ ಪ್ರಕರಣ ಹೊಸ ತಿರುವು
“ವಿಧಾನ ಸಭೆಯಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಆಡಳಿತ ಕಾಂಗ್ರಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ಈ ವರೆಗೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಹನಿ ಟ್ರ್ಯಾಪ್ ಪ್ರಕರಣ ಹೊಸ ತಿರುವು ನೀಡಿದ್ದು ಎರಡೂ ಬಣಗಳ ನಡುವಿನ ಯುದ್ಧಕ್ಕೆ ಅಖಾಡ ತಯಾರಾದಂತಿದೆ.

ಆರ್. ಅಶೋಕ್ ವಿರುದ್ಧ ಸ್ವಪಕ್ಷೀಯರೇ ಕೆಂಡ
ಗುರುವಾರ ಹನಿಟ್ರ್ಯಾಪ್ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ ಅದನ್ನು ಕೈಗೆತ್ತಿಕೊಂಡು ಹೋರಾಟ ನಡೆಸಬೇಕಿದ್ದ ಪ್ರತಿ ಪಕ್ಷ ಬಿಜೆಪಿ ಎಡವಿದ್ದು ಆ ಪಕ್ಷದಲ್ಲೇ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಸ್ವ ಪಕ್ಷೀಯರೇ ಕುದಿಯತೊಡಗಿದ್ದಾರೆ. ಗುರುವಾರ ಮತ್ತು ಶುಕ್ರವಾರ ಈ ಪ್ರಕರಣ ಸದನದಲ್ಲಿ ಪ್ರಸ್ತಾಪವಾದಾಗ ಅದನ್ನು ಕೈಗೆತ್ತಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದವರು ಬಿಜೆಪಿಯ ಸುನಿಲ್ ಕುಮಾರ್ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವೇ ಸದಸ್ಯರು. ಗುರುವಾರ ಪ್ರಕರಣವನ್ನು ನಿಭಾಯಿಸಲು ಎಡವಿದ್ದ ಅಶೋಕ್ ಶುಕ್ರವಾರ ಮಾತ್ರ ವೀರಾವೇಶದಿಂದ ಪ್ರತಿಭಟಿಸಿದರು. ಇದಕ್ಕೆ ಅವರ ಪಕ್ಷದ ದಿಲ್ಲಿ ನಾಯಕರು ನೀಡಿದ ಚುಚ್ಚುಮದ್ದೇ ಕಾರಣ ಎಂಬುದನ್ನು ಬಿಜೆಪಿ ಮೂಲಗಳೇ ಒಪ್ಪಿಕೊಳ್ಳುತ್ತವೆ.

“ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಹನಿಟ್ರ್ಯಾಪ್ ವಿಚಾರವಾಗಿ ಹೇಳಿಕೆ ನೀಡಿದ್ದು, ಯಾರಾದರೂ ಒಬ್ಬರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳಬಹುದು. ವಿಧಾನಸೌಧದಲ್ಲೇ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ದೂರಿನಲ್ಲಿ ಆರೋಪಿಸಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿದೆ. ಬಾಂಬೆ ಬಾಯ್ಸ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಯಾವ ಕಾರಣಕ್ಕೆ?”
– ಡಿ.ಕೆ.ಶಿವಕುಮಾರ್
ಉಪ ಮುಖ್ಯಮಂತ್ರಿಗಳು

