ಕಾಲುವೆಗೆ ನೀರು ಹರಿಸುವ ಅವಧಿ ಬದಲಾವಣೆ | ನಾರಾಯಣಪುರಕ್ಕೆ ಮಾ.೨೫ ವರೆಗೆ ನೀರು ಹರಿಸಲು ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ವಾರಾಬಂಧಿ, ಬಿಸಿಲಿನ ಪ್ರಖರತೆ ಹೆಚ್ಚಳದ ಕಾರಣ ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ನಾರಾಯಣಪುರ ಭಾಗದ ರೈತರ ಬೇಡಿಕೆಗೆ ಸ್ಪಂದಿಸಿ ನಾರಾಯಣಪುರ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಮಾ.೨೫ ರವರೆಗೆ ನಿರಂತರ ಕಾಲುವೆ ನೀರು ಹರಿಸಲು ನಿರ್ಧರಿಸಲಾಗಿದೆ.
ಕಾಲುವೆಗೆ ನೀರು ಹರಿಸುವ ಅವಧಿಯನ್ನು ಕಡಿತಗೊಳಿಸಲಾಗಿದೆ. ನಾರಾಯಣಪುರ ಭಾಗದ ಸಚಿವರು, ಶಾಸಕರ ಮನವಿಯ ಮೇರೆಗೆ ಯುಕೆಪಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಜರುಗಿದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿ, ಕೆಬಿಜೆಎನ್ ಎಲ್ ಅಧಿಕಾರಿಗಳ ವಿಡಿಯೋ ಸಂವಾದ ಸಭೆಯಲ್ಲಿ ನಿರ್ಣಯಿಸಲಾಗಿದೆ. ವಿಡಿಯೋ ಸಂವಾದದಲ್ಲಿ ಕೃಷಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮಾ.೨೨ ರಂದು ಕಾಲುವೆಗೆ ನೀರು ಹರಿಸುವುದು ಬಂದ್ ಮಾಡದೇ ನಿರಂತರ ನೀರು ಹರಿಸಿದರೆ ಸ್ವಲ್ಪ ಪ್ರಮಾಣದ ಬೆಳೆಗಳನ್ನು ಸಂರಕ್ಷಿತಬಹುದು ಎಂದು ಅಭಿಪಾಯ ವ್ಯಕ್ತಪಡಿಸಿದ್ದರು.
ಇದೇ ಮಾ.೧೪ ರಂದು ಹಿಂಗಾರು ಹಂಗಾಮಿನ ಮುಂದುವರೆದ ಐಸಿಸಿ ಸಭೆಯಲ್ಲಿ ಮಾ.೨೨ ರವರೆಗೆ ನೀರು ಹರಿಸಿ ಮಾ.೨೩ ರಿಂದ ಮಾ.೩೧ ರವರೆಗೆ ವಾರಾಬಂಧಿ ಮಾಡಿ ಮುಂದೆ ಏ.೧ ರಿಂದ ಏ.೬ ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು.
ಆದರೆ ಈ ತೀರ್ಮಾನಕ್ಕೆ ನಾರಾಯಣಪುರ ಭಾಗದ ರೈತರು ವಿರೋಧ ವ್ಯಕ್ತಪಡಿಸಿದ್ದರು. ವಾರಾಬಂಧಿ ರದ್ದುಗೊಳಿಸಿ ನಮ್ಮ ಭಾಗಕ್ಕೆ ನಿಗದಿಗೊಳಿಸಿದ ನೀರನ್ನು ನಿರಂತರ ಹರಿಸಲು ಆಗ್ರಹಿಸಿದ್ದರು.
ಒಟ್ಟಾರೆ ಆಲಮಟ್ಟಿ, ನಾರಾಯಣಪುರ ಎರಡೂ ಜಲಾಶಯಗಳ ಸಂಗ್ರಹಿತ ನೀರಿನ ಪ್ರಮಾಣ ೨೯.೫೦ ಟಿಎಂಸಿ ಅಡಿಯಿದೆ. ಜೂನ್ ೩೦ ರವರೆಗೆ ಅವಶ್ಯ ಬಳಕೆಗೆ ೨೪.೫ ಟಿಎಂಸಿ ಅಡಿ ನೀರು ಅಗತ್ಯ. ನೀರಾವರಿಗೆ ಲಭ್ಯವಿರುವ ನೀರಿನ ಪ್ರಮಾಣ ೫ ಟಿಎಂಸಿ ಅಡಿ.
ನಾರಾಯಣಪುರ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಅಗತ್ಯ ಹೆಚ್ಚಿದ್ದು ಅದಕ್ಕಾಗಿ ಮಾ.೨೫ ರ ಬೆಳಗಿನ ಜಾವದವರೆಗೆ ನಿರಂತರ ನೀರು ಹರಿಸಲು ನಿರ್ಧರಿಸಲಾಗಿದೆ.
ಆಲಮಟ್ಟಿಗೆ ಏ.೫ ರವರೆಗೆ ನೀರು
ಆಲಮಟ್ಟಿ ಅಚ್ಚುಕಟ್ಟು ಪ್ರದೇಶದ ಆಲಮಟ್ಟಿ ಎಡದಂಡೆ, ಬಲದಂಡೆ, ಮುಳವಾಡ, ತಿಮ್ಮಾಪುರ ಏತ ನೀರಾವರಿಗೆ ಮಾ.೨೩ ರಿಂದಕ ಮಾ.೩೧ ರವರೆಗೆ ನೀರು ಸ್ಥಗಿತಗೊಳಿಸಿ, ಏ.೧ ರಿಂದ ಏ.೫ ರವರೆಗೆ ಮಾತ್ರ ನೀರು ಹರಿಸಲು ನಿರ್ಧರಿಸಲಾಗಿದೆ.
ನಾರಾಯಣಪುರ ಅಚ್ಚುಕಟ್ಟು ಪ್ರದೇಶದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಶಾಖಾ ಕಾಲುವೆ, ಇಂಡಿ ಏತ ನೀರಾವರಿ ಯೋಜನೆಯೂ ಸೇರಿದ್ದು. ಅಲ್ಲಿ ಮಾ.೨೬ ರವರೆಗೆ ಕಾಲುವೆಗೆ ನೀರು ಹರಿಯಲಿದೆ.

