ತಾಲೂಕಾಡಳಿತದಿಂದ 20 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶ | ನೋಟೀಸ್ ನೀಡದೇ ತೆರವು ಕಾರ್ಯಾಚರಣೆ | ವೃದ್ಧರು-ಮಹಿಳೆಯರ ಗೋಳಾಟ ಕೇಳುವವರಿಲ್ಲ
ಉದಯರಶ್ಮಿ ದಿನಪತ್ರಿಕೆ
ವರದಿ: ಚಂದ್ರಕಾಂತ ಬಿರಾದಾರ
ವಿಜಯಪುರ: ನಗರದ ಹೊರವಲಯದ ಇಟ್ಟಂಗಿಹಾಳ ಎಲ್.ಟಿ ನಂಬರ್ 4 ಮತ್ತು 5ರಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಆರು ಗಂಟೆಗೆ 5-6 ಜೆಸಿಬಿಗಳ ಗರ್ಜನೆ. ಅಲ್ಲಿಯ ನಿವಾಸಿಗಳಿಗೆ ಇಲ್ಲಿ ಏನಾಗುತ್ತಿದೆ ಎಂದು ಅರಿಯುವುದರೊಳಗೆ ಹಲವು ಶೆಡ್ ಮತ್ತು ಗುಡಿಸಲುಗಳನ್ನು, ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ನೆಲಸಮ ಮಾಡಿದ್ದರಿಂದ ಆ ವಲಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಬಲೇಶ್ವರ ಮತಕ್ಷೇತ್ರಕ್ಕೆ ಒಳಪಟ್ಟಿರುವ, ತಿಕೋಟಾ ತಾಲೂಕು ವ್ಯಾಪ್ತಿಯಲ್ಲಿರುವ ಈ ತಾಂಡಾಗಳು ಸರ್ಕಾರಿ ಗೋಮಾಳ ಜಾಗೆಯಲ್ಲಿದ್ದವು. ಇಲ್ಲಿ ಕಳೆದ ೧೫ – ೨೦ ವರ್ಷಗಳಿಂದ ಸುಮಾರು ೨೫೦ ಕ್ಕೂ ಅಧಿಕ ಬಹುತೇಕ ಲಂಬಾಣಿ ಕುಟುಂಬಗಳು ಸೇರಿದಂತೆ ಪರಿಶಿಷ್ಟ ವರ್ಗದ ಕುಟುಂಬಗಳು ವಾಸವಾಗಿದ್ದವು. ಈಗಿನ ಸರಕಾರದ ಸಚಿವರಾದ ಶಿವಾನಂದ ಪಾಟೀಲರು ಬಬಲೆಶ್ವರ ಶಾಸಕರಿದ್ದಾಗ ಕೆಲವು ಕುಟುಂಬಗಳಿಗೆ ಮನೆಯ ಹಕ್ಕುಪತ್ರ ದೊರಕಿಸಿಕೊಟ್ಟಿದ್ದರು. ಉಳಿದ ಕುಟುಂಬಗಳು ನಮಗೂ ಸಹ ಹಕ್ಕುಪತ್ರ ಸಿಗಬಹುದು ಎಂಬ ವಿಶ್ವಾಸದಲ್ಲಿ ಅಲ್ಲಿ ವಾಸವಾಗಿದ್ದರು. ಆದರೆ ಇಲ್ಲಿಯ ನಿವಾಸಿಗಳಿಗೆ ಯಾವುದೇ ಲಿಖಿತ ನೋಟೀಸ್ ಮತ್ತು ಮೌಖಿಕ ಆದೇಶ ನೀಡದೇ ಮಾ.೨೨ರಂದು ಏಕಾಏಕಿ ಜೆಸಿಬಿಗಳೊಂದಿಗೆ ಆಗಮಿಸಿದ ತಾಲೂಕಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ಗುಡಿಸಲಗಳ ನೆಲಸಮಕ್ಕೆ ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ? ಎಂಬುದು ಅಲ್ಲಿಯ ನಿವಾಸಿಗಳ ಪ್ರಶ್ನೆಯಾಗಿದೆ.
ಈ ಪ್ರದೇಶ ಸರ್ಕಾರಿ ಜಾಗವಾಗಿದ್ದು ಇದನ್ನು ಒತ್ತುವರಿ ಮಾಡಿಕೊಂಡ ಇಲ್ಲಿಯ ನಿವಾಸಿಗಳು ಅಕ್ರಮವಾಗಿ ಗುಡಿಸಲು ಮತ್ತು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಮನೆ ತೆರವುಗೊಳಿಸುವಂತೆ ಮೌಖಿಕವಾಗಿ ತಿಳಿಸಲಾಗಿದ್ದರೂ ಯಾರೂ ಮನೆ ತೆರವುಗೊಳಿಸದ ಕಾರಣ ಅನಿವಾರ್ಯವಾಗಿ ಈ ಬಲವಂತದ ಕ್ರಮಕ್ಕೆ ಮುಂದಾಗಬೇಕಾಯಿತು ಎಂಬುದು ಅಧಿಕಾರಿಗಳ ಅಂಬೋಣ.
ಆದರೆ ಹೀಗೆ ಏಕಾಏಕಿ ಬಂದು ಮನೆ ನೆಲಸಮ ಮಾಡಿದರೆ ಇವಾಗ ನಾವು ಮಕ್ಕಳು-ಮರಿ ತೆಗೆದುಕೊಂಡು ನಾವೆಲ್ಲಿ ಹೋಗೋದು ಎಂಬುದು ಇಲ್ಲಿರ ಜನರ ಅಳಲಾಗಿದೆ.
ಬಾಗಿಲು ಮುಚ್ಚಿಕೊಂಡು ದುಡಿಯೋಕೆ ಅಂತ ಹಲವು ಕುಟುಂಬಗಳು ಗೋವಾ, ಮಹಾರಾಷ್ಟ್ರ ಕ್ಕೆ ದುಡಿಯಲು ಗುಳೆ ಹೋಗಿದ್ದಾರೆ. ಈಗ ಅವರು ವಾಪಸ್ ಬಂದು ನೋಡಿದರೆ ತಮ್ಮ ಮನೆ ಎಲ್ಲಿ ಇದೆ ಅಂತ ಅವರಿಗೇ ಗೊತ್ತಾಗದ ಹಾಗೆ ಎಲ್ಲಾ ನೆಲಸಮ ಮಾಡಿದ್ದಾರೆ. ಮನೇಲಿ ಇದ್ದವರಿಗೆ ಖಾಲಿ ಮಾಡಿ ಎಂದು ಕಾಂಪೌಂಡ್ ಒಡೆದು ಹಾಕಿ ಅಧಿಕಾರಿಗಳು ಎಚ್ಚರಿಕೆ ನೀಡಿ ಹೋಗಿದ್ದಾರೆ.
ಸ್ಥಳಕ್ಕೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಭೇಟಿ ನೀಡಿ, ಅಧಿಕಾರಿಗಳ ಈ ದಬ್ಬಾಳಿಕೆ ಕ್ರಮ ಸರಿಯಲ್ಲವೆಂದು ಹೇಳಿ, ಹೀಗೆ ಮಾಡದಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳ ಹೇಳಿಕೆ ಪ್ರಕಾರ, ಇಟ್ಟಂಗಿಹಾಳ ಗ್ರಾಮದ ವ್ಯಾಪ್ತಿಯ ಅಂದಾಜು 20 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಮೋಸ ಮಾಡಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ವಿಜಯಪುರ ಉಪವಿಭಾಗಾಧಿಕಾರಿಗಳು, ತಿಕೋಟಾ ತಹಶೀಲ್ದಾರರನ್ನೊಳಗೊಂಡು ಕಂದಾಯ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಅತಿಕ್ರಮಣ ಕಾರ್ಯಾಚರಣೆ ಕೈಗೊಂಡು ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸ್ಥಳದಲ್ಲಿ ಮನೆ ಕಳೆದುಕೊಂಡವರ, ಮಹಿಳೆಯರ, ವೃದ್ದರ ದು:ಖ, ಗೋಳಾಟ ಮಾತ್ರ ಅರಣ್ಯರೋದನವಾಗಿತ್ತು.

“ನಮಗ ಹೊಲಾ ಇಲ್ಲ, ಮನಿ ಇಲ್ಲಾ. ದಿನಾ ಹೊರಗ ಕೂಲಿ ಕೆಲ್ಸಾ ಮಾಡಿದ್ರ ನಮ್ಮ ಹೊಟ್ಟಿ ತುಂಬತದ. ಹೀಂಗ ಒಮ್ಮಿಂದೊಮ್ಮೆ ಬಂದು ನಮ್ಮ ಗುಡಸಲ ಕಿತ್ತಿ ಹಾಕದ್ರ ನಾವು ಮಕ್ಳು-ಮರಿ ತಗೊಂಡ್ ಎಲ್ಲಿ ಹೋಗ್ಬೇಕು? ನಮಗ ಇರ್ಲಕ್ಕ ಬೇರೆ ಜಾಗ ತೋರ್ಸಿಯಾದ್ರೂ ಇವ್ರು ಮನಿ ಕಿತ್ತಬೇಕಿತ್ತು. ಹೀಂಗ ದಬ್ಬಾಳಿಕಿ ಮಾಡಿ, ನಮಗೇನೂ ಹೇಳ್ಲಾರ್ದೆ ಮನೀಗಿ ಜೆಸಿಬಿ ಹಚ್ಚಿದ್ರ ನಾವೇನ್ ಮಾಡ್ಬೇಕು? ನಮ್ಮ ಗೋಲು ಕೇಳವರ್ಯಾರು? ಈಗ ಮಿನಿಷ್ಟ್ರು ಎಂ.ಬಿ.ಪಾಟೀಲ ಸಾಹೆಬ್ರೇ ನಮಗ ದಾರಿ ತೋರಸ್ಬೇಕು.”
– ನೊಂದ ಮಹಿಳೆಯರು
ಇಟ್ಟಂಗಿಹಾಳ ತಾಂಡಾ ನಿವಾಸಿಗಳು
“ಇಲ್ಲಿ ಬೇಕಾದವರ ಮನೆಗಳನ್ನು ಮಾತ್ರ ಟಾರ್ಗೆಟ್ ಮಾಡಿ ಹೀಗೆ ಮಾಡಿದ್ದಾರೆ. ವಿಜಯಪುರ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ್ ಸಾಹೇಬರು ನಮಗೆ ನ್ಯಾಯ ಕೊಡಿಸಬೇಕು, ಇಲ್ಲವಾದರೆ ನಾವು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಯಾವುದೇ ಸೂಚನೆ ಇಲ್ಲದೆ, ನೋಟೀಸ್ ಇಲ್ಲದೆ ಹೀಗೆ ಮಾಡೋದು ಎಷ್ಟು ಸರಿ?”
– ಆನಂದ ಬಿರಾದಾರ
ನೊಂದ ನಿವಾಸಿ

“ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕಾನೂನು ರೀತಿಯ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಸರ್ಕಾರಿ ಭೂಮಿಯನ್ನು ಯಾರೂ ಅತಿಕ್ರಮಣ ಮಾಡಬಾರದು. ಸಾರ್ವಜನಿಕರು ಆಸ್ತಿ ಖರೀದಿಸುವಾಗ ಜಾಗ್ರತೆ ವಹಿಸಬೇಕು ”
– ಟಿ.ಭೂಬಾಲನ್
ಜಿಲ್ಲಾಧಿಕಾರಿ, ವಿಜಯಪುರ

“ಅಧಿಕಾರಿಗಳು ನೀವೇನ್ ಮಾಡ್ತೀರಿ ಗೊತ್ತಿಲ್ಲ. ತೆರವು ಗೊಳಿಸುವುದಾದರೆ ಎಲ್ಲ ಮನೆಗಳನ್ನೂ ನೆಲಸಮಗೊಳಿಸಬೇಕಿತ್ತು, ಈ ತಾರತಮ್ಯ ಏಕೆ? ಪ್ಲಿಂತ್ ಲೇವಲ್ ಕಟ್ಟಿ ಗುಡಿಸಲು ಹಾಕಿಕೊಂಡ ಅನೇಕರು ದುಡಿಯಲು ಅನ್ಯ ರಾಜ್ಯಕ್ಕೆ ಗುಳೆ ಹೋಗಿದ್ದಾರೆ. ಈಗ ಅವರ ಪರಿಸ್ಥಿತಿ ಏನಾಗಬೇಕು?
– ವಿಜುಗೌಡ ಪಾಟೀಲ
ಬಿಜೆಪಿ ಮುಖಂಡರು

