ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯಂಗವಾಗಿ ಗುರುವಾರ ವಿವಿಧ ಕಸರತ್ತಿನ ಸ್ಪರ್ಧೆ, ಜಂಗೀ ಕುಸ್ತಿ ಸ್ಪರ್ಧೆಗಳು ಗಮನ ಸೆಳೆದವು. ಎರಡು ಸ್ಪರ್ಧೆಯಲ್ಲಿ ಅಪಾರ ಜನರು ವೀಕ್ಷಿಸಿ ಸ್ಪರ್ಧಾಳುಗಳನ್ನು ಕೇಕೇ ಹಾಕಿ ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು.
ಬೆಳಗ್ಗೆ ಜರುಗಿದ ಭಾರ ಎತ್ತುವ, ವಿವಿಧ ಕಸರತ್ತಿನ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಪೈಲ್ವಾನರು ಭಾಗವಹಿಸಿದ್ದರು. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಜೈ ಹನುಮಾನ ಪಾದನಕಟ್ಟೆ ಪ್ರಥಮ, ವಿಠ್ಠಲ ರಾಮಣ್ಣ ಹಡಲಗಿ ದ್ವಿತೀಯ, ಸಂತೋಷ ಜಟ್ಟಿಗಿ ತೃತೀಯ ಸ್ಥಾನ ಪಡೆದುಕೊಂಡರು. ಒತಗಲ್ಲು ಸ್ಪರ್ಧೆಯಲ್ಲಿ ಶಿವಾನಂದ ಗೋಕಾಕ(ಬಳಬಟ್ಟಿ) ಪ್ರಥಮ, ವಿಠ್ಠಲ ಗುಳೇದಗುಡ್ಡ ದ್ವಿತೀಯ, ಮುತ್ತಪ್ಪ ಕಡ್ಲಿಮಟ್ಟಿ(ನಾಗೂರ) ತೃತೀಯ ಸ್ಥಾನ ಪಡೆದುಕೊಂಡರೆ, ಸಾಗಕಲ್ಲ ಸ್ಪರ್ಧೆಯಲ್ಲಿ ಮುತ್ತು ಬನಹಟ್ಟಿ ಪ್ರಥಮ, ಕಿರಣ ಬಿಸನಾಳ ದ್ವಿತೀಯ, ಸಂತೋಷ ಬಿಸನಾಳ ತೃತೀಯ ಸ್ಥಾನ ಪಡೆದುಕೊಂಡರು. ಚೀಲ ಎತ್ತುವ ಸ್ಪರ್ಧೆಯಲ್ಲಿ ಭೀಮಣ್ಣ ಬಳಬಟ್ಟಿ (ಬಿಸನಾಳ) ಪ್ರಥಮ, ಮಾಳು ಯಾಳವಾರ ದ್ವಿತೀಯ, ಕರಿಯಪ್ಪ ಯಡ್ರಾಮಿ ತೃತೀಯ ಸ್ಥಾನ ಪಡೆದುಕೊಂಡರು.
ಸಂಜೆ ಜರುಗಿದ ಜಂಗೀಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಸಾಂಗ್ಲಿ, ಜತ್ತ, ಚಡಚಣ, ಉಮದದಿ, ಲೋಣಿ, ಕಲಬುರಗಿ, ವಿಜಯಪುರ, ಮುದ್ದೇಬಿಹಾಳ, ತಾಳಿಕೋಟಿ, ಇವಣಗಿ, ನರಸಲಗಿ, ನಾಗೂರ ಸೇರಿದಂತೆ ವಿವಿಧೆಡೆಗಳಿಂದ -ಲ್ವಾನರು ಆಗಮಿಸಿದ್ದರು. ಜಂಗೀ ಕುಸ್ತಿಗಳು ಜನರನ್ನು ರೋಮಾಂಚನ ಗೊಳಿಸಿತು. ಕಡೆ ಕುಸ್ತಿಯಲ್ಲಿ ಕಲಬುರಗಿಯ ಸಿದ್ದಪ್ಪ ಅಪ್ಪಣ್ಣ ಸೂರ್ಯವಂಶಿ ಬೆಳ್ಳಿ ಕಡೆ ತಮ್ಮದಾಗಿಸಿಕೊಂಡರೆ, ರುಮಾಲು ಕುಸ್ತಿಯಲ್ಲಿ ಕುಮಸಗಿಯ ಕುಮಾರ ಬಿಸನಾಳ ವಿಜಯಶಾಲಿಯಾದರು. ಜಾತ್ರಾಯಂಗವಾಗಿ ಹೊಲದಲ್ಲಿ ಪುಟ್ಟಿಗಾಡಿ ರೇಸ್ ಸಹ ಜರುಗಿತು. ಈ ಸಂದರ್ಭದಲ್ಲಿ ಜಾತ್ರಾಮಹೋತ್ಸವದ ಸಮಿತಿ ಸದಸ್ಯರು, ಗ್ರಾಮದ ಹಿರಿಯರು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ಇದ್ದರು.
ಜಾತ್ರಾಮಹೋತ್ಸವದಂಗವಾಗಿ ಶನಿವಾರ ಗೆಳೆಯರ ಬಳಗದಿಂದ ಸಂಜೆ 4 ಗಂಟೆಗೆ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮಂಟ್ ನಡೆಯಲಿದೆ. ರಾತ್ರಿ 9 ಗಂಟೆಗೆ ಯಮನೂರೇಶ್ವರ ಆರ್ಕೆಸ್ಟ್ರಾ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾಮಹೋತ್ಸವ ಸಮಿತಿ ಸದಸ್ಯರು ತಿಳಿಸಿದ್ದಾರೆ.

