ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ, ಸನಾತನ ಧರ್ಮ ಪ್ರಚಾರಕ್ಕೆ ಇಡೀ ದೇಶವನ್ನು ೩ ಬಾರಿ ಸುತ್ತಿ ಉಪದೇಶದ ಮೂಲಕ ಜನರ ಮನಃ ಪರಿವರ್ತಿಸಿದ ಶ್ರೇಯಸ್ಸು ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಹೇಳಿದರು.
ಸಿಂದಗಿ ಪಟ್ಟಣದ ಭೀಮಾಶಂಕರ ಮಠದಲ್ಲಿ ಜರುಗಿದ ಸುವರ್ಣ ಭಾರತಿ ಭೂಮಿಪೂಜೆ, ಶಿಲಾನ್ಯಾಸ ಮತ್ತು ಭಾರತಿ ಭವನ ನೀಲನಕ್ಷೆ ಅನಾವರಣ ಕಾರ್ಯಕ್ರಮ ನೇರವೇರಿಸಿ ಮಾತನಾಡಿದ ಅವರು, ಅನ್ಯಧರ್ಮಿಗಳ ದಬ್ಬಾಳಿಕೆಯಿಂದ ಭಾರತದಲ್ಲಿ ಹಿಂದು ಧರ್ಮ ನಲುಗಿ ಹೋಗಿದ್ದ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರು ಅವತರಿಸಿ ಧರ್ಮವನ್ನು ರಚಿಸಿದ್ದಾರೆ. ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕಿನಲ್ಲಿ ಶಾರದಾ ಪೀಠದ ಮಠಗಳನ್ನು ಸ್ಥಾಪಿಸಿ ಧರ್ಮ ಪ್ರಚಾರಕ್ಕಾಗಿ ಭರತಖಂಡದಲ್ಲಿ ಪರ್ಯಟನೆ ಮಾಡಿ ಸನಾತನ ಧರ್ಮವನ್ನು ಜಾಗೃತಗೊಳಿಸಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲರೂ ಧರ್ಮದ ಕಾರ್ಯಗಳನ್ನು ಮಾಡುತ್ತಾ ಸಾಗೋಣ ಎಂದರು.
ಬಾಕ್ಸ್: ಯುವಕರು ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ, ಸನ್ಮಾರ್ಗದಲ್ಲಿ ಸಾಗಿ ಸತಪ್ರಜೆಗಳಾಗಿ ಭವ್ಯ ಭಾರತದ ಕೀರ್ತಿ ಬೆಳೆಗಿಸಬೇಕು. ಯುವ ಶಕ್ತಿ ಮನಸ್ಸು ಮಾಡಿದರೆ ಆಚಾರ, ವಿಚಾರ, ಸಂಸ್ಕಾರಗಳನ್ನು ಅಳವಡಿಸಿಕೊಂಡು ಉತ್ತಮ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.
ಶಾರದಾ ಪೀಠದ ಜಗದ್ಗುರು: ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು
ಗುರುವಾರ ಸಂಜೆ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾ ಸ್ವಾಮಿಗಳನ್ನು ಸಿಂದಗಿ ಬೈಪಾಸ್ಯಿಂದ ಸಂಗಮೇಶ್ವರ ದೇವಸ್ಥಾನದವರೆಗೆ ಬೈಕ್ ರ್ಯಾಲಿ ಮುಖಾಂತರ ಭವ್ಯವಾಗಿ ಸ್ವಾಗತಿಸಿಕೊಂಡು ಅಲ್ಲಿಂದ ಭೀಮಾಶಂಕರ ಮಠದವರೆಗೆ ಚಂಡಿವಾಧ್ಯ ಹಾಗೂ ಕುಂಭಮೇಳದೊಂದಿಗೆ ಭಕ್ತವೃಂದವು ಶೋಭಾಯಾತ್ರೆ ಮಾಡಿ ಗೌರವಿಸಿದರು.
ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಆಂಜನೇಯ ಮೂಲಮಂತ್ರ ಹೋಮ ಮತ್ತು ಪೂರ್ಣಾಹುತಿ, ದತ್ತಪ್ಪಯ್ಯ ಶ್ರೀಗಳಿಂದ ಪಾದುಕ ಪೂಜೆ ಮತ್ತು ಗೌರವ ಸಮರ್ಪಣೆ ನಂತರ ಮಹಾಪ್ರಸಾದ ವಿತರಣೆ ಜರುಗಿತು.
ಈ ವೇಳೆ ಭೀಮಾಶಂಕರ ಮಠದ ಪೀಠಾಧಿಪತಿ ಸದ್ಗುರು ದತ್ತಪಯ್ಯ ಶ್ರೀಗಳು, ಶ್ರೀ ಮಠದ ಭಕ್ತರಾದ ಶ್ರೀನಿವಾಸ ಜೋಶಿ, ಪವನ ಕುಲಕರ್ಣಿ, ದತ್ತಾತ್ರೇಯ ನಾನಾಜಿಕರ, ಡಾ.ಅಭಯ ಕುಲಕರ್ಣಿ, ಪತ್ರಕರ್ತ ಗುಂಡು ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ವಲ್ಲಭ ನಾನಾಜಿಕರ, ಶ್ರೀಪಾದ ನಾನಾಜಿಕರ, ಶ್ರೀಹರಿ ಜೋಷಿ, ಶ್ರೀಧರ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

