ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವೆಬ್ ಕಾಸ್ಟಿಂಗ್ ಅಳವಡಿಸಿದ್ದರೂ ನಕಲು ಮಾಡುತ್ತಿರುವ ವಿದ್ಯಾರ್ಥಿಯನ್ನು ಹಿಡಿಯುವಲ್ಲಿ ಪರೀಕ್ಷಾ ಕರ್ತವ್ಯ ನಿರತ ಸಿಬ್ಬಂದಿ ವಿಫಲರಾದ ಘಟನೆ ಇಲ್ಲಿನ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಪರೀಕ್ಷೆ ಬರೆಯುತ್ತಿರುವ ಹಲವು ವಿದ್ಯಾರ್ಥಿಗಳ ಪೈಕಿ ಕೆಲವು ವಿದ್ಯಾರ್ಥಿಗಳು ಅಲ್ಲಲ್ಲಿ ನಕಲು ಮಾಡುತ್ತಿರುವದು ಸಾಮಾನ್ಯವಾಗಿತ್ತು. ನಕಲು ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿ ತಿಳಿದಾಗ ವೆಬ್ಕಾಸ್ಟಿಂಗ್ ವೀಕ್ಷಿಸುತ್ತಿರುವ ಸಿಬ್ಬಂದಿ ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರುಗಳಿಗೆ ತಿಳಿಸಿದಾಗ ಚೀಟಿಯನ್ನು ಹೊರಗೆ ಎಸೆಯುವಂತೆ ತಿಳಿಸಿ, ಎಸೆದು ಬಂದ ಬಳಿಕ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಇನ್ನು ಒಂದು ಪರೀಕ್ಷಾ ಕೇಂದ್ರದಲ್ಲಂತೂ ವಿದ್ಯಾರ್ಥಿಯೊಬ್ಬ ನಕಲು ಮಾಡುತ್ತಿರುವದಾಗಿ ತಿಳಿದಿದ್ದರೂ ಸಂಬಂಧಿಸಿದ ಸೆಂಟರ್ ನ ಮುಖ್ಯಸ್ಥರಿಗೆ ನಕಲು ಮಾಡುತ್ತಿರುವ ವಿದ್ಯಾರ್ಥಿಯ ಕೊಠಡಿ ಸಿಗಬೇಕಾದರೆ ೨೦ ನಿಮಿಷಗಳ ಕಾಲ ಬೇಕಾಯ್ತು, ಅಲ್ಲಿಗೆ ಪರೀಕ್ಷೆಯ ಅವಧಿ ಮುಗಿದೇ ಹೋಗಿತ್ತು.
ಅಧಿಕಾರಿಗಳು ಪರೀಕ್ಷೆಗಳನ್ನು ನಕಲು ಮುಕ್ತ ಮಾಡಬೇಕೆಂದು ಹಲವು ತಂತ್ರಜ್ಞಾನಗಳನ್ನು ಬಳಸಿದ್ದರೂ ನೀವು ಚಾಪೆ ಕೆಳಗೆ ತೂರಿದರೆ ನಾವು ರಂಗೋಲೆ ಕೆಳಗೆ ತೂರ್ತೀವಿ ಅನ್ನೋತರ ನಕಲುಗಳು ನಡೆಯುತ್ತಿರೋದು ಮಾತ್ರ ನಿಂತಿಲ್ಲ. ಇದೆಲ್ಲ ನಿಲ್ಲಬೇಕಾದರೆ ತಪ್ಪಿತಸ್ಥರ ವಿರುದ್ಧ ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ವೆಬ್ ಕಾಸ್ಟಿಂಗ್ ವೀಕ್ಷಣೆ ಅಳವಡಿಕೆಯಲ್ಲಿ ಯಡವಟ್ಟು
ಇಲ್ಲಿನ ೧೯ ಪರೀಕ್ಷಾ ಕೇಂದ್ರಗಳ ಪೈಕಿ ಕೇವಲ ೮ ಕಂಪ್ಯೂಟರ್ಗಳನ್ನು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಿ ಅದರಲ್ಲೂ ಎರಡು ಕಂಪ್ಯೂಟರ್ಗಳನ್ನು ಪ್ರತ್ಯೇಕವಾಗಿರಿಸಿ ಶಿಕ್ಷಣ ಇಲಾಖೆ ಯಡವಟ್ಟು ಮಾಡಿಕೊಂಡು ಸಂಶಯಕ್ಕೆ ದಾರಿ ಮಾಡಿ ಕೊಟ್ಟಿದೆ. ಅದರಲ್ಲೂ ಕೆಲವು ಕಂಪ್ಯೂಟರ್ಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಕೆಲಕಾಲ ಸತಾಯಿಸಿದ ಘಟನೆಗಳು ನಡೆದವು. ಮತ್ತು ೬ ಕಂಪ್ಯೂಟರ್ಗಳಿದ್ದ ಕೊಠಡಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ಪ್ರತ್ಯೇಕವಾಗಿರಿಸಿದ್ದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
ಮಾಧ್ಯಮದವರಿಗೆ ಮಾಹಿತಿ ನೀಡದ ಅಧಿಕಾರಿ
ಪರೀಕ್ಷೆಗಳು ಮುಗಿದ ಬಳಿಕ ಪರೀಕ್ಷಾ ಕೇಂದ್ರಗಳ ವೆಬ್ಕಾಸ್ಟಿಂಗ್ ವೀಕ್ಷಿಸಿದ ಅಧಿಕಾರಿಗಳು ಯಾವ ಕೇಂದ್ರಗಳಲ್ಲಿ ನಕಲುಗಳು ನಡೆದಿವೆ ಎಂಬ ಬಗ್ಗೆ ನೀಡಿದ ವರದಿಯ ಪ್ರತಿಯನ್ನು ’ಉದಯರಶ್ಮಿ’ ಪತ್ರಿಕೆ ಕೋರಲಾಗಿ ಸಂಬಂಧಿಸಿದ ಅಧಿಕಾರಿ ಯು.ಬಿ.ಧರಿಕಾರ ಮಾಹಿತಿ ನೀಡಲಿಲ್ಲ. ಮೇಲಾಧಿಕಾರಿಗಳ ಅನುಮತಿ ಪಡೆದು ನೀಡುತ್ತೇನೆ ಎಂದು ಉತ್ತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಅವರಿಗೆ ನೀಡುವಂತೆ ಕೋರಿದರೆ ಧರಿಕಾರ ಅವರು ನೀಡಬೇಕು ಎಂದು ಉತ್ತರಿಸಿ. ಪರೀಕ್ಷೆಯ ತಾಲೂಕು ನೂಡಲ್ ಗೆ ಕೇಳಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಈ ಎಲ್ಲ ಅಧಿಕಾರಿಗಳು ಮಾಧ್ಯಮದವರಿಗೆ ಉದ್ದೇಶಪೂರ್ವಕವಾಗಿ ಮಾಹಿತಿ ನೀಡಲಿಲ್ಲ ಎಂಬುದು ಸ್ಪಷ್ಟವಾಯಿತು.

