ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಮೀಪದ ಯಲಗೂರು ಗ್ರಾಮದಲ್ಲಿ ಶ್ರೀ ಗುಂಡಗಿ ಸಿದ್ದೇಶ್ವರ ದೇವಸ್ಥಾನದಲ್ಲಿ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ನಾನಾ ಹೋಮ ಹವನ, ಧಾರ್ಮಿಕ ಕಾರ್ಯಕ್ರಮಗಳು ಸಹಸ್ರಾರು ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿದವು.
ಬುಧವಾರ, ಸರ್ವದೋಷ ನಿವಾರಣೆಗಾಗಿ ಮಹಾಮೃತ್ಯುಂಜಯ ಹೋಮ, ಪಂಚ ಮಹಾ ರುದ್ರಾಭಿಷೇಕ, ನವಗ್ರಹ ಹೋಮ, ಗಣ ಹೋಮ ಸೇರಿದಂತೆ ನಾನಾ ಹೋಮಗಳು ಇಡೀ ದಿನ ಬಾಗಲಕೋಟೆಯ ಸಂತೋಷ ಗೋಟೂರ ಅವರ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ಅರ್ಚಕರು ನಡೆಸಿಕೊಟ್ಟರು.
ಗುರುವಾರ, ಬೆಳಿಗ್ಗೆ ಪುರ್ಣಾಹುತಿ ಹೋಮ, ಪಂಚ ಮಹಾ ರುದ್ರಾಭಿಷೇಕ, ಸಾವಿರಕ್ಕೂ ಅಧಿಕ ಜನರ ಸಾಮೂಹಿಕ ರುದ್ರ ಪಠಣ ಮತ್ತು ಮಹಾ ಮಂಗಾಳರತಿ ಜರುಗಿತು. ಇಡೀ ದಿನ ಅನ್ನಸಂತರ್ಪಣೆ ನಡೆಯಿತು.
ಬಾಗಲಕೋಟೆ ಭಾವಸಾರ ಕ್ಷತ್ರಿಯ ಸಮಾಜದ ಚೇರಮನ್ ಕೃಷ್ಣಾಜಿ ಅಂಬೋರೆ ಮಾತನಾಡಿ, ಕಪಾಟೆ ಮತ್ತು ಝಿಂಗಾಡೆ ಪರಿವಾರದ ಕುಲದೇವತೆಯಾದ ಗುಂಡಗಿ ಸಿದ್ದೇಶ್ವರನ ಲೀಲೆ ಅಪಾರ. ದೇಶದ ನಾನಾ ಕಡೆ ಹಂಚಿಹೋಗಿರುವ ಈ ಪರಿವಾರದವರು ವರ್ಷಕ್ಕೊಮ್ಮೆ ಜಾತ್ರೆಗೆ ಕೂಡುವುದು ಮೊದಲಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದರು.
ಬಾಗಲಕೋಟೆ ಶಕ್ತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಧಾಯಪುಲೆ ಮಾತನಾಡಿ, ಯಲಗೂರದಲ್ಲಿ ಗುಂಡಗಿ ಸಿದ್ದೇಶ್ವರ ಅಭಿವೃದ್ದಿ ಸಂಸ್ಥೆಯವರು ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ವಾಗ್ದಾನ ಮಾಡಿದರು.
ಫಂಡರಪುರದ ಯಶವಂತ ಬೋಧಲೆ ಬುವಾ ಮಹಾರಾಜ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಸಮುದಾಯ ಭವನಕ್ಕೆ ಭೂಮಿ ಪೂಜೆ
ದೇವಸ್ಥಾನದ ಆವರಣದಲ್ಲಿ 38 ಲಕ್ಷ ರೂಗಳಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಇದೇ ಸಂದರ್ಭದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು. ಸರ್ಕಾರದ ಯಾವುದೇ ಅನುದಾನವಿಲ್ಲದೇ ನಾವೇ ಸೇರಿ ಈ ಸಮುದಾಯ ಭವನ ನಿರ್ಮಿಸುತ್ತಿದ್ದೇವೆ ಎಂದು ಗುಂಡಗಿ ಸಿದ್ದೇಶ್ವರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ವಾಸುದೇವ ಝಿಂಗಾಡೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜ್ಞಾನೇಶ್ವರ ಕಪಾಟೆ, ಕಾರ್ಯದರ್ಶಿ ವಾಸುದೇವ ಝಿಂಗಾಡೆ, ಸುನಿಲ ಕಪಾಟೆ, ಶಿರಿಷಕುಮಾರ ಝಿಂಗಾಡೆ, ಸಂಜು ಝಿಂಗಾಡೆ, ಸುನಿಲ ಕಪಾಟೆ, ರವಿ ಝಿಂಗಾಡೆ, ಸತೀಶ ಝಿಂಗಾಡೆ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರದ ನಾನಾ ಕಡೆಯಿಂದ ಸಹಸ್ರಾರು ಜನರು ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು.

