ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಪಘಾತ ಸಂಭವಿಸಿದ ಕೂಡಲೇ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಸಕಲ ಸೌಲಭ್ಯವಿರುವ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಾಗ ಮಾತ್ರ ವ್ಯಕ್ತಿಯ ಜೀವ ಉಳಿಸಲು ಸಾಧ್ಯ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ನಲ್ಲಿ ಗುರುವಾರ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಆಯೋಜಿಸಲಾದ ವಿಶ್ವ ತಲೆಗೆ ಗಾಯ ತಡೆಗಟ್ಟುವ ಜಾಗೃತ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಸ್ತೆ ಅಪಘಾತಗಳು ಬಹುತೇಕ ತಲೆಗೆ ಗಾಯವಾಗಲು ಪ್ರಮುಖ ಕಾರಣವಾಗಿವೆ. ಹೀಗಾಗಿ ವಾಹನ ಸವಾರರು ಸಂಚಾರಿ ನಿಯಮ ಪಾಲನೆ ಮಾಡಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ ಬಳಸಬಾರದು. ಮದ್ಯ ಸೇವಿಸಿ ವಾಹನ ಚಲಾಯಿಸಬಾರದು. ರಸ್ತೆ ಮಧ್ಯೆ ಜಗಳವಾಡುತ್ತ ನಿಲ್ಲಬಾರದು. ಕಾರು ಮತ್ತೀತರ ಪ್ರಯಾಣೀಕರ ಹಾಗೂ ಸರಕು ಸಾಗಣೆ ವಾಹನಗಳನ್ನು ಚಲಾಯಿಸುವಾಗ ಸೀಟು ಬೆಲ್ಟ್ ನ್ನು ಕಡ್ಡಾಯವಾಗಿ ಧರಿಸುವ ಮೂಲಕ ಅಪಘಾತ ಮತ್ತು ತಲೆಗೆ ಗಾಯವಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು.
ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತಕಿಕಿತ್ಸೆ ವಿಭಾಗದ ಸಹಪ್ರಾಧ್ಯಾಪಕ ಡಾ. ಬಸವರಾಜ ಬಡದಾಳ ಮಾತನಾಡಿ, ರಸ್ತೆ ಅಪಘಾತಗಳಲ್ಲಿ ಸುಮಾರು ಶೇ. 50 ರಷ್ಟು ಜನರಿಗೆ ತಲೆಗೆ ಪೆಟ್ಟಾಗಿ ಮೆದಳು ನಿಷ್ಕ್ರೀಯವಾಗಿ ಅಂಗವೈಕಲ್ಯ ಹೊಂದುವುದು ಅಥವಾ ಸಾವು ಸಂಭವಿಸುವ ಸಾಧ್ಯತೆಗಳಿರುತ್ತವೆ. ಉಳಿದ ಶೇ. 25 ರಷ್ಟು ಪ್ರಕರಣಗಳಲ್ಲಿ ತಲೆಗೆ ಪಟ್ಟಾಗಿ ಮೆದಳು ನಿಷ್ಕ್ರೀಯವಾಗುವುದು ಅಥವಾ ಸಾವು ಸಂಭವಿಸುತ್ತವೆ. ಇನ್ನುಳಿದ ಸುಮಾರು ಶೇ. 20ರಷ್ಟು ಪ್ರಕರಣಗಳಲ್ಲಿ ಜಗಳದ ಸಂದರ್ಭದಲ್ಲಿ ಹೊಡೆದಾಟ ಉಂಟಾಗಿ ಮೆದಳು ನಿಷ್ಕ್ರೀಯ ಅಥವಾ ಸಾವು ಸಂಭವಿಸುತ್ತವೆ. ವಿಶ್ವದಲ್ಲಿ ಪ್ರತಿದಿನ ಸುಮಾರು 50 ಮಿಲಿಯನ ಜನರು ತಲೆ ಗಾಯ ಮಾಡಿಕೊಳ್ಳುತ್ತಾರೆ. ಅದರಲ್ಲಿ 1.20 ಮಿಲಿಯನ್ ಜನರು ಸಾವನ್ನಪುತ್ತಾರೆ. ಪ್ರತಿದಿನ 45 ವಯಸ್ಸಿಗಿಂತ ಕಡಿಮೆ ವಯಸ್ಸಿನವರು 6600 ಜನ ಗಾಯಗೊಂಡರೆ ಅದರಲ್ಲಿ 3300 3300 ಜನ ಸಾವನ್ನಪ್ಪುತ್ತಾರೆ. ಅವರಲ್ಲಿ ನಮ್ಮ ಭಾರತದಲ್ಲಿ ಪ್ರತಿ ಆರು ಅಪಘಾತಗಳಲ್ಲಿ ಒಬ್ಬರು ಸಾವನ್ನಪ್ಪಿದರೆ. ಅಮೇರಿಕಾದಲ್ಲಿ ಪ್ರತಿ 200 ಜನಕ್ಕೆ ಒಬ್ಬರು ಸಾವನ್ನಪ್ಪುತ್ತಾರೆ. ಇದನ್ನು ಗಮನಿಸಿದಾಗ ನಮ್ಮ ದೇಶದಲ್ಲಿ ಅಪಘಾತ ಮತ್ತು ಸಾವುಗಳ ಪ್ರಮಾಣ ಹೆಚ್ಚು ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪಘಾತಗಳ ಬಗ್ಗೆ ಮನ್ನೆಚ್ಚರಿಕೆ ವಹಿಸಬೇಕು. ರಸ್ತೆ ನಿಯಮಗಳನ್ನು ಪಾಲಿಸಸಲೇಬೇಕು. ಸಾಕಷ್ಟು ಸುರಕ್ಷತೆ ಕ್ರಮಗಳನ್ನು ಕೈಗೊಂಡರೆ ಜೀವಹಾನಿ ತಪ್ಪಿಸಲು ಮತ್ತು ಅಪಘಾತಕ್ಕೀಡಾದವರ ಕುಟುಂಬದವರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪಿ. ಬಿ. ಕಳಸಗೊಂಡ, ಎನ್.ಎಸ್.ಎಸ್ ಯೋಜನಾಧೀಕಾರಿ ಆನಂದ ಚವ್ಹಾಣ, ಸಹ ಕಾರ್ಯಕ್ರಮಾಧಿಕಾರಿ ಯಲ್ಲಾಲಿಂಗ ತೋಳಮಟ್ಟಿ ಸಹ ಕಾರ್ಯಕ್ರಮಾಧಿಕಾರಿ, ಪ್ರವೀಣ ತಬ್ಬನ್ನವರ, ಎಂ. ಎಸ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.