ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ಭಾರತೀಯ ಜನತಾ ಪಾರ್ಟಿಯಲ್ಲಿಮತಬ್ಯಾಂಕ್ ರಾಜಕಾರಣಕ್ಕೆ ಮನೆಹಾಕದೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ, ಅವರಿಗೆ ರಾಜಕೀಯ ಸ್ಥಾನಮಾನ ಕೊಡುತ್ತಾರೆ ಎಂಬುದಕ್ಕೆ ನಾನೇ ಜೀವಂತ ನಿದರ್ಶನ ಎಂದು ವಿಧಾನ ಪರಿಷತ್ ಸದಸ್ಯ ರಘು ಆರ್ ಕೌಟಿಲ್ಯ ಅಭಿಪ್ರಾಯಪಟ್ಟರು.
ತಾಲೂಕಿಗೆ ಆಗಮಿಸಿದ ಅವರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾಯಕ ಸಮುದಾಯದ ಮುಖಂಡರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ, ಚರ್ಚಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ೧೨ನೇ ಶತಮಾನದ ಬಸವಣ್ಣನವರ ಕಾಯಕ ತತ್ವ ಮತ್ತು ನಾಲ್ವಡಿ ಮಹಾರಾಜರ ಕನಸಿಗೆ ಪೂರಕವಾಗಿ ಬಿಜೆಪಿ ಹೆಜ್ಜೆ ಹಾಕುತ್ತಿದೆ. ಎಲ್ಲಾ ಸಮುದಾಯಗಳಿಗೂ ರಾಜಕೀಯ ಶಕ್ತಿ ಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ವ ಸಮಾಜಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ೨೦೨೮ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳು, ಅತಿ ಹಿಂದುಳಿದ ಸಮುದಾಯಗಳು, ವೃತ್ತಿ ಆಧಾರಿತ ಸಮುದಾಯಗಳು, ಕಾಯಕ ಸಮುದಾಯಗಳ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ನಾನು ಹೆಚ್ ಡಿ ಕೋಟೆಗೆ ಬಂದು ಎಲ್ಲಾ ಸಮುದಾಯಗಳ ಮುಖಂಡರ ಜೊತೆ ಚರ್ಚೆ ನಡೆಸಿದ್ದೇನೆ, ನಿಮ್ಮ ಜೊತೆ ನಾನು ಮತ್ತು ನಮ್ಮ ಪಕ್ಷ ಸದಾ ಇರುತ್ತೆ ಎಂಬ ಆತ್ಮವಿಶ್ವಾಸ ತುಂಬಿದ್ದೇನೆ ಎಂದರು.
ಅಸ್ಪೃಶ್ಯತೆಗೊಳಗಾದ ನೂರಾರು ಸಮುದಾಯಗಳು ಇಲ್ಲಿಯವರೆಗೂ ವಿಧಾನಸೌಧ ಬಾಗಿಲನ್ನೇ ನೋಡಿಲ್ಲ. ಆ ಸಮುದಾಯಗಳು ವಿಧಾನಸೌಧ ಪ್ರವೇಶ ಮಾಡಿದ್ದಾಗ ಮಾತ್ರ ನಿಜವಾದ ಪ್ರಜಾಪ್ರುಭುತ್ವದ ಸ್ವಾತಂತ್ರ ಆಶಯ ಈಡೇರುತ್ತೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಮತಬ್ಯಾಂಕ್ ರಾಜಕಾರಣಕ್ಕೆ ಒತ್ತು ನೀಡದೆ ಸಾಮಾಜಿಕ ಬದ್ಧತೆಯಲ್ಲಿ ಮುಂದೆ ಸಾಗುತ್ತಿದೆ. ಮಡಿವಾಳ ಸೇರಿದಂತೆ ಅನೇಕ ಕಾಯಕ ಸಮುದಾಯಗಳು ಆಧುನಿಕ ತಂತ್ರಜ್ಞಾನ ಒತ್ತಡಕ್ಕೆ ಸಿಲುಕಿ ಇತ್ತ ಭೂಮಿ, ವೃತ್ತಿಯೂ ಇಲ್ಲದೆ ಅತ್ತ ಮೀಸಲಾತಿ ಸೌಲಭ್ಯವೂ ಇಲ್ಲದೇ ಬದುಕು ಕಟ್ಟಿಕೊಳ್ಳಲು ಹರಸಾಹಸಪಡುತ್ತಿವೆ. ಅಂತಹ ಅವಕಾಶವಂಚಿತ ಸಮುದಾಯಗಳಿಗೆ ನಾನು ಧ್ವನಿಯಾಗಿ ಕೆಲಸ ಮಾಡಲು ಹಾಗೂ ಸದನದ ಹೊರಗೆ, ಸದನದ ಒಳಗೆ ನಿಂತು ಹೋರಾಟ ಮಾಡಲು ಬಿಜೆಪಿ ನನಗೆ ಅವಕಾಶ ಮಾಡಿಕೊಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ರಘು ಆರ್ ಕೌಟಿಲ್ಯ ಹೇಳಿದರು.
ಜಿಲ್ಲಾ ಒಬಿಸಿ ಅಧ್ಯಕ್ಷ ರಾಜುಗೌಡ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಟಿ ವೆಂಕಟೇಶ್, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷರಾದ ಚಂದ್ರ ಶೆಟ್ಟಿ, ಸರಗೂರು ಧರಣೇಶ್, ರಮೇಶ್, ಕಾರ್ಯದರ್ಶಿ ಹೇಮಂತ್, ವೆಂಕಟೇಶ್, ಮೊತ್ತ ಬಸವರಾಜು, ಕಾರ್ಯದರ್ಶಿ ಗುರುಸ್ವಾಮಿ, ರಾಜು ಬಿಡುಗಲು, ರಾಮಾಚಾರಿ, ಒಬಿಸಿ ತಾಲೂಕು ಅಧ್ಯಕ್ಷ ಬಸವರಾಜಚಾರಿ, ಚಂದ್ರಮೌಳೇಶ್ವರ, ವಿವೇಕಾನಂದ, ಕೆ ಲೋಕೇಶ್, ಕೆಂಪು ಶೆಟ್ಟಿ, ವಸಂತ್ ಕುಮಾರ್, ರವಿ, ಮಂಜುನಾಥ್, ಕೃಷ್ಣ, ರವಿಕುಮಾರ್, ಸುರೇಶ್, ಮಹದೇವ ಶೆಟ್ಟಿ, ಬಸವರಾಜ್ ಕೋಟೆ ಹಾಗೂ ಕಾಯಕ ಸಮುದಾಯದ ಮುಖಂಡರು ಇದ್ದರು.
ನ್ಯಾಯಯುತ ಬೇಡಿಕೆಗೆ ಧ್ವನಿಯಾಗುತ್ತೇನೆ
ಸಮುದಾಯದ ವೃತ್ತಿ, ಕುಲಶಾಸ್ತ್ರ ಅಧ್ಯಯನ ಪ್ರಕಾರ ಮಡಿವಾಳ ಮತ್ತು ಸವಿತಾ ಸಮಾಜ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಬೇಕಾಗಿತ್ತು. ಈಗಲೂ ಈ ಎರಡು ಸಮಾಜಗಳು ಅಸ್ಪೃಶ್ಯತೆ ವ್ಯವಸ್ಥೆಯಲ್ಲಿ ಸಿಲುಕಿ ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿವೆ. ಇವರ ನ್ಯಾಯಯುತ ಬೇಡಿಕೆಗೆ ನಾನು ಧ್ವನಿಯಾಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ರಘು ಆರ್ ಕೌಟಿಲ್ಯ ಹೇಳಿದರು.

